ಬೆಂಗಳೂರು: ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರುವ 11 ಪ್ರಮುಖ ಚಾರಣ ಪಥಗಳಿಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಎಂ ಅವರು, (ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ) ಹೊರಡಿಸಿದ ಆದೇಶದಂತೆ, ದಿನಾಂಕ 14-01-2026 ರಿಂದ ಜಾರಿಗೆ ಬರುವಂತೆ ಮುಂದಿನ ಸೂಚನೆ ಹೊರಡುವವರೆಗೆ ಈ ನಿರ್ಬಂಧವನ್ನು ವಿಧಿಸಲಾಗಿದೆ.
ಬೇಸಿಗೆ ಹತ್ತಿರವಾಗುತ್ತಿರುವುದರಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ಮತ್ತು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯಗಳ ವ್ಯಾಪ್ತಿಯಲ್ಲಿ ‘ಬೆಂಕಿ ಕಾಲ’ ಆರಂಭವಾಗುತ್ತಿದೆ. ಅರಣ್ಯದಲ್ಲಿ ಒಣ ಎಲೆಗಳು ಮತ್ತು ಹುಲ್ಲು ಹೆಚ್ಚಿರುವುದರಿಂದ ಕಾಡ್ಗಿಚ್ಚು ಸಂಭವಿಸುವ ಅಪಾಯ ಇದೆ. ಈ ಹಿನ್ನೆಲೆಯಲ್ಲಿ ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟು ಅರಣ್ಯ ಇಲಾಖೆ ಕೆಲವು ಚಾರಣ ಮಾರ್ಗಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ.
ಗಂಗಡಿಕಲ್ ಚಾರಣ, ಕುದುರೆಮುಖ ಚಾರಣ, ಕುರಿಂಜಾಲು ಚಾರಣ, ವಾಲಿಕುಂಜ ಚಾರಣ - ಎಸ್. ಕೆ. ಬಾರ್ಡರ್, ವಾಲಿಕುಂಜ ಚಾರಣ - ಕೆರ್ವಾಶೆ,ನರಸಿಂಹ ಪರ್ವತ - ಕಿಗ್ಗ, ನರಸಿಂಹ ಪರ್ವತ - ಮಳಂದೂರು, ಕೊಡಚಾದ್ರಿ-ವಳೂರು,ಕೊಡಚಾದ್ರಿ - ಹಿಡ್ಲುಮನೆ, ಬಂಡಾಜೆ - ವೊಳಂಬ್ರ, ನೇತ್ರಾವತಿ ಚಾರಣಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.
ಈ ಬಗ್ಗೆ ವ್ಯಾಪಕ ಪ್ರಚಾರ ನೀಡಲು ಹಾಗೂ ಸೂಚನಾ ಫಲಕಗಳನ್ನು ಅಳವಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಅಲ್ಲದೆ, ಪ್ರವೇಶ ನಿಷೇಧಿಸಿರುವ ಜಾಗಗಳಲ್ಲಿ ಕಾವಲುಗಾರರನ್ನು ನೇಮಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕಾಡ್ಗಿಚ್ಚು ಹೆಚ್ಚಾಗಿ ಮಾನವನಿಂದಲೇ ಹೆಚ್ಚಾಗಿ ಸಂಭವಿಸುತ್ತಿವೆ. ಹಿಂದಿನ ವರ್ಷಗಳಲ್ಲಿ ಅನೇಕ ಘಟನೆಗಳು ಉದ್ದೇಶಪೂರ್ವಕವಾಗಿಯೋ ಅಥವಾ ಗೊತ್ತಿಲ್ಲದೆಯೇ ಚಾರಣಕ್ಕೆ ಬಂದವರಿಂದ ಸಂಭವಿಸಿದೆ. ಸಮಗ್ರ ತಪಾಸಣೆ, ಜಾಗೃತಿ ಕಾರ್ಯಕ್ರಮಗಳು ಹಾಗೂ ಮಾರ್ಗದರ್ಶಕರ ನಿಯೋಜನೆಯಿದ್ದರೂ ಸಹ ಈ ಘಟನೆಗಳು ನಡೆದಿವೆ. ಹೀಗಾಗಿ ಈ ಬಾರಿ ಬೇಸಿಗೆ ಆರಂಭಕ್ಕೂ ಮುನ್ನವೇ ರಾಜ್ಯದಾದ್ಯಂತ ಟ್ರೆಕ್ಕಿಂಗ್ ಅನ್ನು ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗಣತಿ ಕಾರ್ಯ ನಡೆಯುತ್ತಿರುವುದೂ ಕೂಡ ಮತ್ತೊಂದು ಕಾರಣವಾಗಿದೆ. ಹುಲಿ ಗಣತಿ ಹಾಗೂ ಮಾನವ–ವನ್ಯಜೀವಿ ಸಂಘರ್ಷ ತಡೆಯುವ ಕಾರ್ಯದಲ್ಲಿ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಟ್ರೆಕ್ಕಿಂಗ್ಗೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಕಷ್ಟಕರ. ಅಲ್ಲದೆ, ಈ ಬಾರಿ ಗಣತಿ ಕಾರ್ಯಕ್ಕೆ ಸ್ವಯಂಸೇವಕರನ್ನು ಸೇರ್ಪಡೆಗೊಳಿಸಲಾಗಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಅರಣ್ಯ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಅರಣ್ಯ ಇಲಾಖೆ ‘ಅರಣ್ಯ ವಿಹಾರ’ ಪೋರ್ಟಲ್ ಮೂಲಕ 12 ಜಿಲ್ಲೆಗಳ 37 ಸ್ಥಳಗಳಲ್ಲಿ ಟ್ರೆಕ್ಕಿಂಗ್ ಅವಕಾಶ ಒದಗಿಸುತ್ತಿದೆ. ಟ್ರೆಕ್ಕರ್ಗಳ ಸಂಖ್ಯೆಯನ್ನು ನಿಯಂತ್ರಿಸಲು ಹಾಗೂ ಅಕ್ರಮ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಈ ಪೋರ್ಟಲ್ ಆರಂಭಿಸಲಾಗಿತ್ತು. ಕುದುರೆಮುಖ ವಿಭಾಗದಲ್ಲಿಯೇ ಎಂಟು ಟ್ರೆಕ್ಕಿಂಗ್ ಮಾರ್ಗಗಳಿದ್ದು, ಕುದುರೆಮುಖ ಮತ್ತು ನೆತ್ರಾವತಿ ಚಾರಣ ಪ್ರದೇಶ ಅತ್ಯಂತ ಜನಪ್ರಿಯವಾಗಿವೆ. ಇಲ್ಲಿಗೆ ಪ್ರತಿದಿನ ಸರಾಸರಿ 300ಕ್ಕೂ ಹೆಚ್ಚು ಟ್ರೆಕ್ಕರ್ಗಳು ಆಗಮಿಸುತ್ತಾರೆ.
ವಿರಾಜಪೇಟೆ, ಮಡಿಕೇರಿ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಕೆಲವೆಡೆ ಹಸಿರು ಇರುವ ಕಾರಣ ಟ್ರೆಕ್ಕಿಂಗ್ ಅನ್ನು ಬಂದ್ ಮಾಡಲಾಗಿಲ್ಲ. ಆದರೆ, ಗಾಳಿ ದಿಕ್ಕು ಬದಲಾದರೆ, ಈ ಮಾರ್ಗಗಳನ್ನೂ ಮುಚ್ಚಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ರಾಮನಗರ, ತುಮಕೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಟ್ರೆಕ್ಕಿಂಗ್ ಮಾರ್ಗಗಳನ್ನು ಬಂದ್ ಮಾಡುವ ಕುರಿತು ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಅನುಮತಿ ಇಲ್ಲದೆ ಪ್ರವಾಸಿಗರನ್ನು ಅರಣ್ಯದೊಳಗೆ ಕರೆದುಕೊಂಡು ಹೋಗದಂತೆ ರಿಸಾರ್ಟ್ಗಳು ಹಾಗೂ ಹೋಟೆಲ್ಗಳಿಗೆ ಎಚ್ಚರಿಕೆ ನೀಡಲಾಗಿದೆ ಅಕ್ರಮ ಟ್ರೆಕ್ಕಿಂಗ್ ಗುಂಪುಗಳ ಮೇಲೆ ನಿಗಾ ಇಡಲು ಸಾಮಾಜಿಕ ಜಾಲತಾಣಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಬಫರ್ ವಲಯಗಳಲ್ಲಿನ ಟ್ರೆಕ್ಕಿಂಗ್ ಮಾರ್ಗಗಳನ್ನು ಬಂದ್ ಮಾಡಲು ಸರ್ಕಾರದೊಂದಿಗೆ ಚರ್ಚೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.