ಬಳ್ಳಾರಿ: ಬಳ್ಳಾರಿ ಹಿಂಸಾಚಾರವನ್ನು ಖಂಡಿಸಿ ಜನವರಿ 17 ರಂದು ನಡೆದ ಬೃಹತ್ ಪ್ರತಿಭಟನಾ ರ್ಯಾಲಿ ವೇಳೆ ಅತ್ಯಾಚಾರ ಸಂತ್ರಸ್ತೆಯ ಹೆಸರು ಮತ್ತು ವಿವರಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಬಿ. ಶ್ರೀರಾಮುಲು ಬುಧವಾರ ವಿಷಾದ ವ್ಯಕ್ತಪಡಿಸಿ, ಕ್ಷಮೆಯಾಚಿಸಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಅಕ್ರಮಗಳು, ದಂಧೆಗಳು, ಗಾಂಜಾ, ಡ್ರಗ್ಸ್ ಮಾರಾಟ ಎಗ್ಗಿಲ್ಲದೇ ನಡೆದಿವೆ. ಇದನ್ನೇ ಜನವರಿ 17ರ ಸಮಾವೇಶದಲ್ಲಿ ಹೇಳಿದ್ದೆ. ಆಗ ಅನಿವಾರ್ಯವಾಗಿ ಅತ್ಯಾಚಾರ ಸಂತ್ರಸ್ತೆ ಕುರಿತು ಮಾತನಾಡಬೇಕಾಯಿತು. ಇದರಿಂದ ಬಾಲಕಿಗೆ, ಆಕೆಯ ತಂದೆ ತಾಯಿಗೆ ನೋವಾಗಿದ್ದರೆ ಕ್ಷಮೆ ಕೋರುವೆ. ನ್ಯಾಯ ಒದಗಿಸಿಕೊಡುವಲ್ಲಿ ನಾನು ಆ ಕುಟುಂಬದ ಜೊತೆ ನಿಲ್ಲುವೆ. ಸಂತ್ರಸ್ತೆಯೂ ನನ್ನ ಮಗಳಂತೆ. ಈ ವಿಷಯದಲ್ಲಿ ಕಾನೂನು ಕ್ರಮಗಳನ್ನು ಎದುರಿಸುತ್ತೇನೆ ಎಂದು ಹೇಳಿದರು.
ಜಾಗೃತಿ ಮೂಡಿಸುವುದು ನಮ್ಮ ಉದ್ದೇಶವಾಗಿದ್ದು. ಯಾವುದೇ ಶಾಸಕರನ್ನು ನೇರವಾಗಿ ದೂಷಿಸುತ್ತಿಲ್ಲ, ಕೆಲವರ ಬೆಂಬಲಿಂದ ಘಟನೆಗಳು ನಡೆಯುತ್ತಿವೆ. ಎಲ್ಲೆಡೆ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.
‘ಜನವರಿ 1ರಂದು ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಸಾಕ್ಷಿಗಳನ್ನು ಬಹಿರಂಗಪಡಿಸಿದ್ದೇವೆ. ಹೋರಾಟ ಮುಂದುವರಿಸುತ್ತೇವೆ. ದಾಳಿ ಖಂಡಿಸಿ ಪಾದಯಾತ್ರೆ ನಡೆಸಲು ಆರಂಭದಲ್ಲಿ ಒಪ್ಪಿಗೆ ಸಿಕ್ಕಿತ್ತು. ಆದರೆ, ಮುಂದೂಡುವಂತೆ ಬಳಿಕ ಸೂಚನೆ ಬಂತು. ಮುಂದಿನ ದಿನಗಳಲ್ಲಿ ಈ ಕುರಿತು ಪಕ್ಷ ತೀರ್ಮಾನ ಮಾಡಲಿದೆ ಎಂದು ತಿಳಿಸಿದರು.