ಹಂಪಿ/ಹೊಸಪೇಟೆ: ಹಂಪಿ ಸ್ಮಾರಕ ಸಂಕೀರ್ಣದಲ್ಲಿರುವ ನೆಲಸ್ತರ ಶಿವನ ದೇವಾಲಯದ ಸ್ತಂಭ ಹಾನಿಗೊಳಗಾಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.
ಈ ಬೆಳವಣಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಹಂಪಿಯನ್ನು ನಿರ್ವಹಿಸುತ್ತಿರುವ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ದುರಸ್ಥಿ ಕಾರ್ಯ ಸಮಯದಲ್ಲಿ ಸ್ಮಾರಕದ ಸ್ತಂಭಕ್ಕೆ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಎಎಸ್ಐ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದೆ.
ಆದರೆ, ಸ್ಮಾರಕದ ಸ್ತಂಬ ಹಾನಿಯಾಗಿರುವ ಫೋಟೋಗಳು ಇದೀಗ ಬಹಿರಂಗಗೊಂಡಿದ್ದು, ಇದು ಎಎಸ್ಐ ಕಾರ್ಯನಿರ್ವಹಣೆ ಬಗ್ಗೆ ಕಾರ್ಯಕರ್ತರು ಹಾಗೂ ಸಾರ್ವಜನಿಕರಲ್ಲು ಅನುಮಾನಗಳು ಮೂಡುವಂತೆ ಮಾಡಿದೆ.
ಸ್ಮಾರಕ ಸ್ತಂಭ ಹಾನಿಗೊಳಗಾಗಿರುವ ಫೋಟೋಗಳು ಲಭ್ಯವಾಗಿವೆ. ಆದರೂ ಅಧಿಕಾರಿಗಳು ಹೇಗೆ ನಿರಾಕರಿಸುತ್ತಾರೆಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
ಸ್ಪಷ್ಟ ಫೋಟೋಗಳಿವೆ. ಆದರೂ ಘಟನೆ ಸಂಭವಿಸಿಲ್ಲ ಎಂದು ಇಲಾಖೆ ಹೇಗೆ ಹೇಳುತ್ತದೆ? ಎಂದು ಸ್ಮಾರಕ ಸಂರಕ್ಷಣಾ ತಜ್ಞರು ಪ್ರಶ್ನಿಸಿದ್ದಾರೆ.
ಪುನಃಸ್ಥಾಪನೆ ಕಾರ್ಯದ ವೇಳೆ ದೇವಾಲಯದ ಕಂಬಕ್ಕೆ ಹಾನಿ ಮಾಡಿದ ಖಾಸಗಿ ಗುತ್ತಿಗೆದಾರರ ಪರವಾನಗಿಯನ್ನು ರದ್ದುಗೊಳಿಸಬೇಕು ಮತ್ತು ಭಾಗಿಯಾಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಏತನ್ಮಧ್ಯೆ ಸಾಮಾಜಿಕ ಕಾರ್ಯಕರ್ತ ಶಿವಕುಮಾರ್ ಟಿ ಅವರು ಸ್ಥಳೀಯ ನಿವಾಸಿಗಳೊಂದಿಗೆ ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ (SP) ಎಸ್. ಜಾಹ್ನವಿ ಅವರನ್ನು ಭೇಟಿ ಮಾಡಿ, ತನಿಖೆ ನಡೆಸುವಂತೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಾಹ್ನವಿ ಅವರು, ಕೂಲಂಕಷವಾಗಿ ಪರಿಶೀಲಿಸುವ ಭರವಸೆ ನೀಡಿದ್ದಾರೆ.
ಈ ನಡುವೆ ಪುನಃಸ್ಥಾಪಿಸುವ ಕಾರ್ಯದಲ್ಲಿ ತೊಡಗಿದ್ದ ಇಬ್ಬರು ಎಎಸ್ಐ ಸಿಬ್ಬಂದಿಯನ್ನು ಬೇರೆ ಸ್ಥಳಗಳಿಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.