ಬೆಂಗಳೂರು: ಕೊಲೆ ಪ್ರಕರಣದಲ್ಲಿ ಬಂಧಿಸಿ ಸ್ಥಳ ಮಹಜರಿಗೆ ಕರೆದೊಯ್ದ ವೇಳೆ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಯ ಕಾಲಿಗೆ ಜೆ.ಪಿ.ನಗರ ಠಾಣೆಯ ಪೊಲೀಸರು ಗುಂಡು ಹಾರಿಸಿ ಮತ್ತೆ ಬಂಧಿಸಿದ್ದಾರೆ.
ರೌಡಿಶೀಟರ್ ಸಂತೋಷ್ ಕುಮಾರ್ ಗುಂಡೇಟು ತಿಂದ ಆರೋಪಿ. ತಲಘಟ್ಟಪುರದ ಹೆಮ್ಮಿಗೆಪುರದಲ್ಲಿಬುಧವಾರ ಸಂಜೆ ಘಟನೆ ನಡೆದಿದೆ. ಸಂತೋಷ್ ವಿರುದ್ಧ ಎರಡು ಕೊಲೆ ಹಾಗೂ ಐದು ಕೊಲೆ ಯತ್ನ ಪ್ರಕರಣಗಳೂ ಸೇರಿ 14 ಪ್ರಕರಣಗಳು ದಾಖಲಾಗಿವೆ.
ಜೂನ್ 27ರಂದು ಸಂತೋಷ್ ತನ್ನ ಸಹಚರರ ಜತೆಗೆ ಸೇರಿ ರೌಡಿಶೀಟರ್ ರಾಜು ಕೊಲೆ ಮಾಡಿದ್ದ. ಅದೇ ದಿನ ರಾತ್ರಿ ಕೆ.ಆರ್.ಪುರ ಠಾಣೆ ವ್ಯಾಪ್ತಿಯಲ್ಲಿ ಖಾರದಪುಡಿ ಎರಚಿ, ಸರ ಕಳವು ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.
ಕೊಲೆ ಪ್ರಕರಣದ ಸಂಬಂಧ ಸಂತೋಷ್ ಸೇರಿ ನಾಲ್ವರನ್ನು ಜೆ.ಪಿ.ನಗರ ಠಾಣೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಬುಧವಾರ ಸಂಜೆ ಮಾರಕಾಸ್ತ್ರ ಇಟ್ಟಿದ್ದ ಸ್ಥಳ ಹಾಗೂ ಸಂಚು ರೂಪಿಸಿದ್ದ ತಲಘಟ್ಟಪುರದ ಹೆಮ್ಮಿಗೆಪುರದಲ್ಲಿ ಸ್ಥಳ ಮಹಜರು ಮಾಡಲು ಪಿಎಸ್ಐ ತಂಡ ಕರೆದೊಯ್ದಿತ್ತು.
ಈ ವೇಳೆ ಆರೋಪಿ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಆಗ ಆತ್ಮರಕ್ಷಣೆಗಾಗಿ, ಮಹಿಳಾ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಗುಂಡು ಹಾರಿಸಿ, ಸಂತೋಷ್ ತಪ್ಪಿಸಿಕೊಳ್ಳದಂತೆ ತಡೆದಿದ್ದಾರೆ.