ಹೊಸನಗರ: ಹೆಣ್ಣು ಮಗು ಎಂಬ ಕಾರಣಕ್ಕೋ ಅಥವಾ ಕೌಟುಂಬಿಕ ಸಮಸ್ಯೆಯೋ ತಿಳಿಯದು, ಹೆತ್ತ ಕರುಳೊಂದು ಮಮತೆಯನ್ನೇ ಮರೆತ ಕೃತ್ಯ ಎಸಗಿದೆ.
ಕೇವಲ ಹತ್ತು-ಹದಿನೈದು ದಿನ ಪ್ರಾಯದ ನವಜಾತ ಹೆಣ್ಣು ಶಿಶುವೊಂದನ್ನು ನಿರ್ಜನ ಬಸ್ ನಿಲ್ದಾಣದಲ್ಲಿ ಬ್ಯಾಗ್'ನಲ್ಲಿ ಕಟ್ಟಿ, ಬಿಟ್ಟುಹೋಗಿರುವ ಅಮಾನವೀಯ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಗಾವಟೂರು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ರಾತ್ರಿ ಸುಮಾರು 9 ಗಂಟೆ ವೇಳೆಗೆ ಬಸ್ ನಿಲ್ದಾಣದ ಬಳಿ ಮಗುವಿನ ಅಳುವ ಶಬ್ದ ಕೇಳಿದ ಸ್ಥಳೀಯರು ಅಲ್ಲಿಗೆ ಧಾವಿಸಿದ್ದಾರೆ. ಈ ವೇಳೆ ಬಿಳಿ ಬಣ್ಣದ ಬ್ಯಾಗ್ನಲ್ಲಿ ಬಿಳಿ ಬಟ್ಟೆಯಿಂದ ಸುತ್ತಿ ಇರಿಸಲಾಗಿದ್ದ ನವಜಾತ ಹೆಣ್ಣುಮಗು ಪತ್ತೆಯಾಗಿದೆ. ಬ್ಯಾಗ್ನಲ್ಲಿ ಮಗುವಿಗೆ ಹಾಲುಣಿಸಲು ಹಾಲಿನ ಬಾಟಲಿಯನ್ನೂ ಇರಿಸಲಾಗಿತ್ತು ಎಂದು ತಿಳಿದುಬಂದಿದೆ.
ತಕ್ಷಣ ಗ್ರಾಮಸ್ಥರು ಈ ಕುರಿತು ರಿಪ್ಪನ್ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಗುವನ್ನು ರಿಪ್ಪನ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಆರೈಕೆ ಮತ್ತು ಪೌಷ್ಟಿಕ ಚಿಕಿತ್ಸೆಗಾಗಿ ಮಗುವನ್ನು ಮೆಕ್ಗನ್ ಬೋಧನಾ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಮಗು ಆರೋಗ್ಯವಾಗಿದ್ದು ವೈದ್ಯಕೀಯ ನಿಗಾದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ನವಜಾತ ಶಿಶುವನ್ನು ತ್ಯಜಿಸಿ ಹೋದ ಪೋಷಕರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.