ಬೆಂಗಳೂರು: ಬಿಟ್ಕಾಯಿನ್ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಡಿವೈಎಸ್ಪಿ ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಆರೋಪಪಟ್ಟಿಯಿಂದ ಕೈಬಿಡಲಾಗಿದೆ. ಕರ್ನಾಟಕ ಗೃಹ ಇಲಾಖೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನಿರಾಕರಿಸಿದ ನಂತರ ಅಧಿಕಾರಿಗಳನ್ನು ಹೊರಗಿಡಲಾಗಿದೆ. ಆದಾಗ್ಯೂ, ಎಸ್ಐಟಿ ಸೈಬರ್ ತಜ್ಞ ಕೆ.ಎಸ್. ಸಂತೋಷ್ ಕುಮಾರ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.
ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿಯನ್ನು ಪೊಲೀಸ್ ಅಧಿಕಾರಿಗಳು ಅಕ್ರಮವಾಗಿ ಬಂಧಿಸಿ, ಹಲವಾರು ಕೋಟಿ ರೂಪಾಯಿ ಮೌಲ್ಯದ ಬಿಟ್ಕಾಯಿನ್ಗಳನ್ನು ವರ್ಗಾಯಿಸಲು ಒತ್ತಾಯಿಸಿದ್ದಾರೆ ಎಂಬ ಆರೋಪದ ಮೇಲೆ ಅಪರಾಧ ತನಿಖಾ ವಿಭಾಗದ (ಸಿಐಡಿ) ಎಸ್ಐಟಿ ತನಿಖೆ ನಡೆಸುತ್ತಿತ್ತು.
ಡಿವೈಎಸ್ಪಿ ಶ್ರೀಧರ್ ಪೂಜಾರಿ, ಪೊಲೀಸ್ ಇನ್ಸ್ಪೆಕ್ಟರ್ಗಳಾದ ಚಂದ್ರಾಧರ್, ಲಕ್ಷ್ಮಿಕಾಂತಯ್ಯ, ಡಿ.ಎಂ.ಪ್ರಶಾಂತ್ ಬಾಬು ಪ್ರಕರಣದಿಂದ ಮುಕ್ತಿ ಪಡೆದ ಅಧಿಕಾರಿಗಳು. ಇದೇ ಪ್ರಕರಣದಲ್ಲಿ ಸೈಬರ್ ತಜ್ಞ ಸಂತೋಷ್ಕುಮಾರ್ ವಿರುದ್ಧ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ತನಿಖಾಧಿಕಾರಿಗಳು ಸಲ್ಲಿಸಿದ್ದಾರೆ.
ಇತ್ತೀಚೆಗೆ, ಎಸ್ಐಟಿ 1 ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕುಮಾರ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಆದಾಗ್ಯೂ, ಡಿವೈಎಸ್ಪಿ ಶ್ರೀಧರ್ ಕೆ ಪೂಜಾರ್ ಮತ್ತು ಪೊಲೀಸ್ ಇನ್ಸ್ಪೆಕ್ಟರ್ಗಳಾದ ಪ್ರಶಾಂತ್ ಬಾಬು, ಲಕ್ಷ್ಮಿಕಾಂತಯ್ಯ ಮತ್ತು ಚಂದ್ರಾಧರ ಅವರ ಹೆಸರನ್ನು ಕೈಬಿಡಲಾಗಿದೆ.
ಗೃಹ ಇಲಾಖೆ ಯಾವುದೇ ಅಧಿಕಾರಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕಾದರೆ ಗೃಹ ಇಲಾಖೆಯ ಪೂರ್ವಾನುಮತಿ ಕಡ್ಡಾಯ. ಆದರೆ, ಈ ಅಧಿಕಾರಿಗಳ ವಿರುದ್ಧದ ಅಭಿಯೋಜನಾ ಮಂಜೂರಾತಿ ಪ್ರಸ್ತಾವವನ್ನು ಗೃಹ ಇಲಾಖೆ ತಿರಸ್ಕರಿಸಿದೆ. ಅನುಮತಿ ದೊರೆಯದ ಕಾರಣಕ್ಕೆ ಎಸ್ಐಟಿ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಬಿ–ವರದಿ ಸಲ್ಲಿಸಿದ್ದಾರೆ.
ಆರೋಪಪಟ್ಟಿಯ ಪ್ರಕಾರ, ಸಾಕ್ಷಿಗಳ ಹೇಳಿಕೆಗಳು ಮತ್ತು ತಾಂತ್ರಿಕ ಸಾಮಾಗ್ರಿಗಳು ಸೇರಿದಂತೆ ಸಾಕ್ಷ್ಯಗಳನ್ನು ಎಸ್ಐಟಿ ಕಂಡುಕೊಂಡಿದ್ದು, ಹ್ಯಾಕರ್ ಶ್ರೀಕಿಯಿಂದ ಬಿಟ್ಕಾಯಿನ್ಗಳನ್ನು ವರ್ಗಾಯಿಸುವ ಪ್ರಯತ್ನದಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳು ಸಂತೋಷ್ ಕುಮಾರ್ ಅವರೊಂದಿಗೆ ಶಾಮೀಲಾಗಿದ್ದಾರೆ ಎಂದು ತಿಳಿದು ಬಂದಿದೆ.
ನಾಲ್ವರು ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿ ಎಸ್ಐಟಿ ಗೃಹ ಇಲಾಖೆಗೆ ಮೂರು ಪ್ರತ್ಯೇಕ ವಿನಂತಿಗಳನ್ನು ಸಲ್ಲಿಸಿದೆ ಎಂದು ಮೂಲವೊಂದು ತಿಳಿಸಿದೆ. ಎಲ್ಲಾ ಮೂರು ವಿನಂತಿಗಳನ್ನು ತಿರಸ್ಕರಿಸಿದ ನಂತರ, ಮೊದಲ ಆರೋಪಿ, ಜಿಸಿಐಡಿ ಟೆಕ್ನಾಲಜೀಸ್ನ ಮಾಲೀಕ ಸಂತೋಷ್ ಕುಮಾರ್ ವಿರುದ್ಧ ಮಾತ್ರ ಚಾರ್ಜ್ಶೀಟ್ ಸಲ್ಲಿಸಲಾಗಿದೆ.
ಹ್ಯಾಕರ್ ಶ್ರೀಕಿ ಮತ್ತು ರಾಬಿನ್ ಖಂಡೇಲ್ವಾಲ್ ಅವರ ಕ್ರಿಪ್ಟೋಕರೆನ್ಸಿ ವ್ಯಾಲೆಟ್ಗಳನ್ನು ಕುಮಾರ್ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಚಾರ್ಜ್ಶೀಟ್ ಆರೋಪಿಸಿದೆ. ರಾಬಿನ್ ಖಂಡೇಲ್ವಾಲ್ ಅವರ ವ್ಯಾಲೆಟ್ನಿಂದ ಹಲವಾರು ಕೋಟಿ ರೂಪಾಯಿ ಮೌಲ್ಯದ ಬಿಟ್ಕಾಯಿನ್ಗಳನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.