ಬೆಂಗಳೂರು: ಗೃಹ ಖಾತೆ ಎಲ್ಲಿದೆ ಕರ್ನಾಟಕದ ಗೃಹ ಸಚಿವರು ಎಲ್ಲಿದ್ದಾರೆ. ಅವರು ಆರ್ಎಸ್ಎಸ್ ಸಚಿವರಾಗಿದ್ದಾರೆ. ಒಂದು ದಿನವೂ ಕೂಡ ಕರ್ನಾಟಕದಲ್ಲಿ ನಡೆಯುವ ಅತ್ಯಾಚಾರ, ಕೊಲೆ, ರಸ್ತೆ ಗಲಾಟೆ, ಡ್ರಗ್ಸ್ ಅಕ್ರಮಗಳ ಬಗ್ಗೆ ಮಾತನಾಡಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಬೆಳಗ್ಗೆದ್ದರೆ ಆರ್ಎಸ್ಎಸ್ ಬಗ್ಗೆ ಮಾತನಾಡುತ್ತಾರೆ. ಪರಮೇಶ್ವರ್ ಗೊತ್ತಿಲ್ಲ ಸಚಿವರು, ಇವರು ಆರ್ಎಸ್ಎಸ್ ಸಚಿವರು ಎಂದು ವ್ಯಂಗ್ಯವಾಡಿದರು.
ಐವತ್ತು ರೂಪಾಯಿ ಪಡೆದು ಎನ್ಯೂಮರೇಷನ್ ಫಾರಂಗಳನ್ನು ನೀಡಿದವರು ಮುಂದೆ ನಿವಾಸಿ ಪ್ರಮಾಣಪತ್ರಕ್ಕೆ ಹಣ ಪಡೆದು ಅಕ್ರಮವಾಗಿ ಪಿಆರ್ಸಿ ನೀಡುವುದಿಲ್ಲ ಎಂದು ನಂಬುವುದು ಹೇಗೆ ಎಂದು ಪ್ರಶ್ನಿಸಿದರು.
ಸರ್ಕಾರ ಸರ್ಕಾರವಾಗಿ ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷವಾಗಿ ಸರ್ಕಾರ ಕೆಲಸ ಮಾಡುತ್ತಿದೆ. ಸರ್ಕಾರವಾಗಿದ್ದರೆ ಜವಾಬ್ದಾರಿಯಿಂದ ನಡೆದುಕೊಳ್ಳುತ್ತದೆ. ಅಧಿಕಾರಿಗಳಿಗೆ ಒತ್ತಡ ಹಾಕಿ ಸರ್ಕಾರ ಕೆಲಸ ಮಾಡಿಸುತ್ತಿದೆ ಎಂದರು.
ರಾಜ್ಯ ಸರ್ಕಾರ ಈ ರೀತಿ ಪ್ರಮಾಣ ಪತ್ರ ಕೊಡುವುದರ ಹಿಂದಿನ ಉದ್ದೇಶ ಓಟ್ ಬ್ಯಾಂಕ್ ರಾಜಕಾರಣ. ಎಸ್ಐಆರ್ ನಡೆಯವ ವೇಳೆ ಪಿಆರ್ ಸಿ ನೀಡಲು ಮುಂದಾಗಿರುವುದು ಏಕೆ. ಇಷ್ಟು ವರ್ಷಗಳಿಂದ ಬಾಂಗ್ಲಾದೇಶದಿಂದ ಬಂದವರಿಗೆ ಈಗ ರಾಜ್ಯದ ನಾಗರಿಕರನ್ನು ಮಾಡಲು ಹೊರಟಿದ್ದೀರಿ.
ಆದ್ದರಿಂದ ರಾಜ್ಯದ ಪ್ರಜೆಗಳು ನಿಮ್ಮ ಹಕ್ಕನ್ನು ಕಸಿಯಲಿದ್ದಾರೆ. ಪಿಆರ್ಸಿ ಪಡೆದವರು ಸರ್ಕಾರದ ಎಲ್ಲಾ ಸೌಲಭ್ಯ ಪಡೆಯಲಿದ್ದಾರೆ. ಮತ ಪಡೆಯಲು ದೇಶದ ಭದ್ರತೆಗೆ ಧಕ್ಕೆ ತರುವ ಕೆಲಸವನ್ನು ಶಿವಕುಮಾರ್ ಅವರ ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಹಿಂದಿನ ಸಿಎಂ ಸಿದ್ದರಾಮಯ್ಯ ಅವರೂ ಇಂತಹ ಧೈರ್ಯ ಮಾಡಿರಲಿಲ್ಲ. ಈಗ ಶಿವಕುಮಾರ್ ಅವರು, ಅಹಂಕಾರದಿಂದ ನಾನು ಏನು ಮಾಡಿದರೂ ನಡೆಯುತ್ತದೆ ಎಂಬ ರೀತಿ ಮಾಡುತ್ತಿದ್ದಾರೆ. ದೇಶದ ಭದ್ರತೆ ಆತಂಕ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಬೇರೆ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಅಕ್ರಮ ಬಾಂಗ್ಲಾ ವಲಸಿಗರು ಬಂದಿರುವುದನ್ನು ನಾವು ಪತ್ತೆ ಮಾಡಿದ್ದೇವೆ. ಈ ಸರ್ಕಾರಕ್ಕೆ ನಮ್ಮ ರಾಜ್ಯದ ನೈಜ ನಿವಾಸಿಗಳ ಹಿತ ಬೇಕಿಲ್ಲ. ಅಲ್ಪಸಂಖ್ಯಾತ ಮತದಾರರನ್ನು ಕಾನೂನುಬಾಹಿರವಾಗಿ ಮತಪಟ್ಟಿಗೆ ಸೇರಿಸುವ ಕೆಲಸವೂ ನಡೆಯುತ್ತಿದೆ. ಇದನ್ನೇ ವೋಟ್ ಚೋರಿ. ಕಾಂಗ್ರೆಸ್ ಅಂದರೆ ಮತಗಳ್ಳತನ ಆಗಿದೆ. ಆದ್ದರಿಂದ ಇದಕ್ಕೆ ಬಿಜೆಪಿ ವಿರೋಧ ಮಾಡಿದೆ ಎಂದರು