ಬೆಂಗಳೂರು: ರಾಜ್ಯ ಸಾರಿಗೆ ಸಚಿವ ಬೈರತಿ ಸುರೇಶ್ ಶನಿವಾರ ರಾತ್ರಿ ದಿಢೀರ್ ಸಿಟಿ ರೌಂಡ್ಸ್ ಕೈಗೊಂಡು ಸಾರಿಗೆ ಇಲಾಖೆಯ ವಾಹನಗಳ ಕಾರ್ಯವೈಖರಿ ಪರಿಶೀಲಿಸಿದರು.
ಸಾರ್ವಜನಿಕ ಸಾರಿಗೆ ಸೇವೆಯ ಗುಣಮಟ್ಟ ಸುಧಾರಣೆ ಹಾಗೂ ಸಿಬ್ಬಂದಿಯಲ್ಲಿ ಜವಾಬ್ದಾರಿಯುತ ಕಾರ್ಯನಿರ್ವಹಣೆಯನ್ನು ಖಚಿತಪಡಿಸುವ ಉದ್ದೇಶದಿಂದ ಕರ್ನಾಟಕ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಶನಿವಾರ ರಾತ್ರಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಗಳಲ್ಲಿ ದಿಢೀರ್ ಪರಿಶೀಲನೆ ನಡೆಸಿದರು.
ಸಾಮಾನ್ಯ ಪ್ರಯಾಣಿಕರಂತೆ ಮುಖಕ್ಕೆ ಮಾಸ್ಕ್ ಧರಿಸಿ ಗುರುತು ಸಿಗದಂತೆ ಬಸ್ಗಳಲ್ಲಿ ಸಂಚರಿಸಿದ ಸಚಿವರು, ಪ್ರಯಾಣಿಕರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿದರು.
ಸಂಜೆ 7.10ರಿಂದ ರಾತ್ರಿ 9.10ರವರೆಗೆ ಸುಮಾರು ಎರಡು ಗಂಟೆಗಳ ಕಾಲ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿದ ಸಚಿವ ಬೈರತಿ ಸುರೇಶ್ ಅವರು, 10ಕ್ಕೂ ಹೆಚ್ಚು ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸಿದರು. ಜಯಮಹಲ್, ಆರ್.ಟಿ.ನಗರ, ಹೆಬ್ಬಾಳ, ನಾಗವಾರ, ಹೆಣ್ಣೂರು ಹಾಗೂ ಗೆದ್ದಲಹಳ್ಳಿ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಬಸ್ ಏರಿ ಸಾಮಾನ್ಯ ಪ್ರಯಾಣಿಕರಂತೆ ಟಿಕೆಟ್ ಖರೀದಿಸಿ ಪ್ರಯಾಣಿಸಿದರು.
ಪ್ರಯಾಣದ ವೇಳೆ ಸಹ ಪ್ರಯಾಣಿಕರೊಂದಿಗೆ ಮಾತುಕತೆ ನಡೆಸಿದ ಸಚಿವರು, ಬಸ್ ಸೇವೆಯ ಗುಣಮಟ್ಟ, ಸಿಬ್ಬಂದಿಯ ವರ್ತನೆ ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.
ಚಾಲಕ, ನಿರ್ವಾಹಕರಿಗೆ ಅಮಾನತು ಶಾಕ್
ಇದೇ ವೇಳೆ ಬಸ್ ನಿಲ್ದಾಣವೊಂದರಲ್ಲಿ ಬಸ್ ನಿಲ್ಲಿಸದ ಇಲಾಖೆಯ ನಿರ್ವಾಹಕ ಮತ್ತು ಬಸ್ ಚಾಲಕನ ವಿರುದ್ಧ ಕ್ರಮ ಕೈಗೊಂಡರು. ಪ್ರಯಾಣಿಕರೊಬ್ಬರು ಕೈ ತೋರಿಸಿದರೂ ಫನ್ ವರ್ಲ್ಡ್ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸದೇ ಮುಂದುವರಿದಿದ್ದರಿಂದ, ಇಬ್ಬರನ್ನೂ ಅಮಾನತುಗೊಳಿಸಲು ಆದೇಶಿಸಿದರು. ಕೆಎ 57 ಎಫ್ 3372 ಸಂಖ್ಯೆಯ ಬಿಎಂಟಿಸಿ ಬಸ್ನ ಚಾಲಕ ಮತ್ತು ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಸಚಿವರಿಗೂ ಎದುರಾಯ್ತು ಚಿಲ್ಲರೆ ಸಮಸ್ಯೆ
ಇದೇ ವೇಳೆ, ಹೆಬ್ಬಾಳ–ನಾಗಶೆಟ್ಟಿಹಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮತ್ತೊಂದು ಬಸ್ನಲ್ಲಿ ಸಾಮಾನ್ಯ ಪ್ರಯಾಣಿಕರು ಎದುರಿಸುವ ಚಿಲ್ಲರೆ ಸಮಸ್ಯೆಯನ್ನು ಸಚಿವರು ಸ್ವತಃ ಅನುಭವಿಸಿದರು. 100 ನೋಟು ನೀಡಿ ಟಿಕೆಟ್ ಕೇಳಿದಾಗ, ಚಿಲ್ಲರೆ ಇಲ್ಲ ಎಂಬ ಕಾರಣ ನೀಡಿ ನಿರ್ವಾಹಕರು ಬಸ್ನಿಂದ ಇಳಿಯುವಂತೆ ಹೇಳಿದ ಘಟನೆ ನಡೆಯಿತು. ಈ ಕುರಿತು ಸಚಿವರು ಅಧಿಕಾರಿಗಳ ಗಮನ ಸೆಳೆದರು.
ಆಟೋ ಚಾಲಕನಿಗೆ ತರಾಟೆ
ಬಸ್ ಸೇವೆಗಳ ಪರಿಶೀಲನೆ ಬಳಿಕ ನಾಗಶೆಟ್ಟಿಹಳ್ಳಿಯಲ್ಲಿ ಆಟೋ ಚಾಲಕರ ಕಾರ್ಯವೈಖರಿಯನ್ನೂ ಸಚಿವರು ಪರಿಶೀಲಿಸಿದರು. ಮೀಟರ್ನಲ್ಲಿ 30 ತೋರಿಸುತ್ತಿದ್ದರೂ 36 ದರ ಕೇಳುತ್ತಿದ್ದ ಆಟೋ ಚಾಲಕನನ್ನು ತರಾಟೆಗೆ ತೆಗೆದುಕೊಂಡು, ಮೀಟರ್ ಪ್ರಕಾರವೇ ದರ ವಸೂಲಿ ಮಾಡುವಂತೆ ಸೂಚಿಸಿದರು.
ಸಚಿವರು ಹೇಳಿದ್ದೇನು?
ಈ ದಿಢೀರ್ ಪರಿಶೀಲನೆ ಸಾರ್ವಜನಿಕ ಸಾರಿಗೆ ಸೇವೆಯನ್ನು ಇನ್ನಷ್ಟು ವಿಶ್ವಾಸಾರ್ಹ ಮತ್ತು ಪ್ರಯಾಣಿಕ ಸ್ನೇಹಿಯಾಗಿಸುವ ಉದ್ದೇಶದಿಂದ ಕೈಗೊಳ್ಳುತ್ತಿರುವ ವ್ಯಾಪಕ ಕಾರ್ಯಾಚರಣೆಯ ಭಾಗವಾಗಿದೆ ಎಂದು ಬೈರತಿ ಸುರೇಶ್ ತಿಳಿಸಿದ್ದಾರೆ.
ನಗರದ ವಿವಿಧ ಭಾಗಗಳಲ್ಲಿ ಇಂತಹ ಅಚ್ಚರಿ ಪರಿಶೀಲನೆಗಳು ಮುಂದುವರಿಯಲಿದ್ದು, ಸಿಬ್ಬಂದಿಯಲ್ಲಿ ಶಿಸ್ತು ಕಾಪಾಡುವುದರ ಜೊತೆಗೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಗುಣಮಟ್ಟದ ಸೇವೆ ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.