ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳಪೆ ಗುಣಮಟ್ಟದ ನೀರಿನ ಸಂಪ್ ನಿರ್ಮಾಣ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಮನೆ ಮಾಲೀಕ, ಗಾರೆ ಮೇಸ್ತ್ರಿ ತಮ್ಮನನ್ನು ಹತ್ಯೆ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಬೆಂಗಳೂರು ಉತ್ತರ ತಾಲೂಕು ಕಿತ್ತನಹಳ್ಳಿಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಕೊಲೆಯಾದ ವ್ಯಕ್ತಿಯನ್ನು ರವಿ(35) ಎಂದು ಗುರುತಿಸಲಾಗಿದೆ. ರವಿ ಗಾರೆ ಮೇಸ್ತ್ರಿ ಸಹೋದರನಾಗಿದ್ದು, ಮನೆ ಮಾಲೀಕ ದೇವರಾಜ್ ಹಾಗೂ ಆತನ ಮಗ ಸೇರಿದಂತೆ ನಾಲ್ವರನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ.
ಮನೆಯ ನೀರಿನ ಸಂಪಿನ ಚೇಂಬರ್ ಕವರ್ ಸರಿಯಾಗಿ ಕಟ್ಟಿಲ್ಲ ಎಂದು ನಿನ್ನೆ ರಾತ್ರಿ 8:30 ಸುಮಾರಿಗೆ ಜಗಳ ಆರಂಭವಾಗಿದೆ. ಈ ವೇಳೆ ರವಿ ಮೇಲೆ ದೇವರಾಜು ಮತ್ತು ಅವರ ಗ್ಯಾಂಗ್ ಏಕಾಏಕಿ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದಾಗಿ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ವಿಕ್ಟೋರಿಯಾ ಶವಾಗಾರಕ್ಕೆ ರವಾನಿಸಿದ್ದಾರೆ. ಆರೋಪಿಗಳಾದ ದೇವರಾಜ್ ಮತ್ತು ಆತನ ಮಗ ಸೇರಿದಂತೆ ನಾಲ್ವರ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.