ಬ್ಯಾಂಕ್ ಕಚೇರಿಗೆ ಬೀಗ ಹಾಕಿದ ವ್ಯವಸ್ಥಾಪಕ 
ರಾಜ್ಯ

'ಕೆಲಸ ಮುಗಿಯುವವರೆಗೂ ಹೊರಗೆ ಹೋಗಬಾರದು': ಸಿಬ್ಬಂದಿಯನ್ನು ಬ್ಯಾಂಕ್‌ನಲ್ಲೇ ಲಾಕ್ ಮಾಡಿದ ಮ್ಯಾನೇಜರ್; Video ವೈರಲ್

ವೈರಲ್ ಆಗಿರುವ ವಿಡಿಯೋದಲ್ಲಿ, ಶಾಖಾ ವ್ಯವಸ್ಥಾಪಕರು ಗ್ರಾಹಕ ಸೇವಾ ಸಹಾಯಕ (ಕ್ಲರ್ಕ್) ಅವರನ್ನು ಕಚೇರಿ ಸಮಯ ಮುಗಿದ ಬಳಿಕವೂ ಶಾಖೆಯಲ್ಲೇ ಉಳಿದು ಕೆಲಸ ಮಾಡುವಂತೆ ಸೂಚಿಸಿರುವುದು ಕಂಡುಬರುತ್ತದೆ.

ಹಾಸನ: ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಅರಕಲಗೂಡು ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರೊಬ್ಬರು ಸಿಬ್ಬಂದಿಯನ್ನು ತಡರಾತ್ರಿವರೆಗೆ ಕಚೇರಿಯಲ್ಲೇ ಉಳಿಯುವಂತೆ ಒತ್ತಾಯಿಸಿ, ಮುಖ್ಯ ಗೇಟ್‌ಗೆ ಬೀಗ ಹಾಕಿದರೆಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಶಾಖಾ ವ್ಯವಸ್ಥಾಪಕರು ಗ್ರಾಹಕ ಸೇವಾ ಸಹಾಯಕ (ಕ್ಲರ್ಕ್) ಅವರನ್ನು ಕಚೇರಿ ಸಮಯ ಮುಗಿದ ಬಳಿಕವೂ ಶಾಖೆಯಲ್ಲೇ ಉಳಿದು ಕೆಲಸ ಮಾಡುವಂತೆ ಸೂಚಿಸಿರುವುದು ಕಂಡುಬರುತ್ತದೆ. ಇದಕ್ಕೆ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದಾಗ, ಶಾಖೆಯ ಮುಖ್ಯ ಗೇಟ್‌ಗೆ ಬೀಗ ಹಾಕಿ, ಬಾಕಿ ಕೆಲಸ ಮುಗಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಸಿಬ್ಬಂದಿ, ತನ್ನ ಪಾಲಿನ ಎಲ್ಲಾ ಕೆಲಸವನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿ ಮನೆಗೆ ತೆರಳಲು ಅನುಮತಿ ಕೋರಿದರೂ, ವ್ಯವಸ್ಥಾಪಕರು ಹೊರಗೆ ಹೋಗಲು ಅವಕಾಶ ನೀಡಿಲ್ಲ ಎಂದು ಆರೋಪಿಸಲಾಗಿದೆ. ಈ ವೇಳೆ ಸಿಬ್ಬಂದಿ ಶಾಂತವಾಗಿ ಸಂಪೂರ್ಣ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ದಾಖಲಿಸಿಕೊಂಡಿದ್ದು, ಅದೇ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಘಟನೆಯನ್ನು ಕಂಡು ಹಲವರು ಶಾಖಾ ವ್ಯವಸ್ಥಾಪಕರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಉದ್ಯೋಗಿಗಳೊಂದಿಗೆ ಇಂತಹ ವರ್ತನೆ ಅಸಮಂಜಸ ಎಂದು ಟೀಕಿಸಿದ್ದಾರೆ.

ಹೆಚ್ಚುವರಿ ಕೆಲಸಕ್ಕೆ ಪರಿಹಾರಧನದ ಉಲ್ಲೇಖ

ಇನ್ನು ಬ್ಯಾಂಕ್ ಸಿಬ್ಬಂದಿಯ ಸೇವಾ ನಿಯಮಾವಳಿಗಳ ಪ್ರಕಾರ, ಕ್ಲರ್ಕ್‌ಗಳಿಗೆ ನಿಗದಿತ ಕೆಲಸದ ಅವಧಿ ಇರುತ್ತದೆ. ಅಗತ್ಯವಿದ್ದರೆ ನಿಗದಿತ ಸಮಯದ ಬಳಿಕವೂ ಕೆಲಸ ಮಾಡಿಸಲು ಬ್ಯಾಂಕ್‌ಗೆ ಅವಕಾಶವಿದ್ದರೂ, ಅದಕ್ಕಾಗಿ ನಿಯಮಾನುಸಾರ ಹೆಚ್ಚುವರಿ ಕೆಲಸದ ಭತ್ಯೆ (Compensation/Overtime) ನೀಡಬೇಕಾಗುತ್ತದೆ.

ವೈರಲ್ ವಿಡಿಯೋದಲ್ಲಿ, ಹೆಚ್ಚುವರಿ ಸಮಯ ಕೆಲಸ ಮಾಡಿದರೆ ಅದರ ಪರಿಹಾರಧನವನ್ನು ನೀಡಲಾಗುವುದು ಎಂದು ಶಾಖಾ ವ್ಯವಸ್ಥಾಪಕರು ಸಿಬ್ಬಂದಿಗೆ ಹೇಳುತ್ತಿರುವುದು ಕೇಳಿಬರುತ್ತಿದೆ. ಆದರೆ, ಸಿಬ್ಬಂದಿಯನ್ನು ಅವರ ಇಚ್ಛೆಗೆ ವಿರುದ್ಧವಾಗಿ ಶಾಖೆಯೊಳಗೆ ಉಳಿಯುವಂತೆ ಮಾಡಿರುವ ಆರೋಪವೇ ಈಗ ವಿವಾದಕ್ಕೆ ಕಾರಣವಾಗಿದೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಕಾರ್ಯಸಂಸ್ಕೃತಿ ಕುರಿತು ಮತ್ತೆ ಚರ್ಚೆ

ಈ ಘಟನೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿನ ಕೆಲಸದ ಒತ್ತಡ, ತಡರಾತ್ರಿವರೆಗಿನ ಕೆಲಸದ ಸಂಸ್ಕೃತಿ ಹಾಗೂ ಉದ್ಯೋಗಿಗಳ ಹಕ್ಕುಗಳ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ.

ಕಾರ್ಮಿಕ ಸಂಘಟನೆಗಳು ಮತ್ತು ಬ್ಯಾಂಕ್ ಸಿಬ್ಬಂದಿ ವಲಯದಲ್ಲಿ ಈ ಘಟನೆಯ ಬಗ್ಗೆ ಆತಂಕ ವ್ಯಕ್ತವಾಗಿದ್ದು, ಉದ್ಯೋಗಿಗಳ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿಯ ದೃಷ್ಟಿಯಿಂದ ಅನಗತ್ಯವಾಗಿ ರಾತ್ರಿ ತಡರವರೆಗೆ ಕೆಲಸ ಮಾಡಿಸುವ ಪದ್ಧತಿಯನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಆದಾಗ್ಯೂ, ಈ ಘಟನೆ ಕುರಿತು ಕರ್ನಾಟಕ ಗ್ರಾಮೀಣ ಬ್ಯಾಂಕ್ ಆಡಳಿತದಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಅಥವಾ ಸ್ಪಷ್ಟನೆ ಹೊರಬಂದಿಲ್ಲ. ಘಟನೆಯ ಸತ್ಯಾಸತ್ಯತೆ ಹಾಗೂ ಆರೋಪಗಳ ಕುರಿತು ಬ್ಯಾಂಕ್‌ನ ಅಧಿಕೃತ ತನಿಖೆಯ ಬಳಿಕವೇ ಅಂತಿಮ ಚಿತ್ರಣ ಸ್ಪಷ್ಟವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉಕ್ರೇನ್‌ನ ಒಡೆಸ್ಸಾ ಬಂದರಿನಲ್ಲಿ ಹಡಗಿನ ಮೇಲೆ ದಾಳಿ: 4 ಭಾರತೀಯರು ಸಾವು, ಭಾರತ ತೀವ್ರ ಖಂಡನೆ!

CJP Protest LIVE Updates | 'ಪ್ರತಿಭಟನಾಕಾರರ ಮೇಲೆ ಕಣ್ಗಾವಲು? ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲಿಸಿದ್ದೀರಾ?': ದೆಹಲಿ ಪೊಲೀಸರಿಗೆ ಹೈಕೋರ್ಟ್ ಪ್ರಶ್ನೆ

ಮೊದಲ ಡೆಂಗ್ಯೂ ಲಸಿಕೆಗೆ ಭಾರತ ಅನುಮೋದನೆ: WHO ಶಿಫಾರಸು ಮಾಡಿರುವ ಲಸಿಕೆನ ಯಾರ್ಯಾರು ಪಡೆಯಬಹುದು!

ರಾಮಾಯಣ ಟ್ರೇಲರ್‌ನ ಮೊದಲ ವಿಮರ್ಶೆ: ರಾವಣನಾಗಿ ಯಶ್ ಅವತಾರಕ್ಕೆ ನಿರ್ದೇಶಕ ಅಟ್ಲಿ ಹೇಳಿದ್ದೇನು?

ಸರ್ಕಾರಿ ಗೌರವಗಳೊಂದಿಗೆ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ