ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಖದೀಮನೊಬ್ಬ ಬುಡುಬುಡುಕೆ ಸ್ವಾಮೀಜಿ ವೇಷದಲ್ಲಿ ಬಂದು, ಗರ್ಭಿಣಿ ಮಹಿಳೆಗೆ 'ನಿಮ್ಮ ಮನೆಯಲ್ಲಿ ದೋಷವಿದೆ, ಸಾವಿನ ಕಂಟಕ ಇದೆ' ಎಂದು ಹೆದರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ.
ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವನಪುರದಲ್ಲಿ ಈ ಘಟನೆ ನಡೆದಿದ್ದು, ಮೋಹನ್ ಎಂಬುವರ ಮನೆಗೆ ಸ್ವಾಮೀಜಿ ವೇಷದಲ್ಲಿ ಬಂದ ವ್ಯಕ್ತಿ, ಅವರ ಪತ್ನಿ ಉಷಾ ಎಂಟು ತಿಂಗಳ ಗರ್ಭಿಣಿಯಾಗಿರುವುದನ್ನು ಗಮನಿಸಿ, ಮನೆಗೆ ದೋಷವಿದೆ ಎಂದು ನಂಬಿಸಿದ್ದಾನೆ. ನಂತರ ನನಗೆ ಯಾವುದೇ ಹಣ ಬೇಡ, ನಾನು ಉಚಿತವಾಗಿ ಪೂಜೆ ಮಾಡುತ್ತೇನೆ ಎಂದು ಹೇಳಿ ಮನೆಯೊಳಗೆ ಪ್ರವೇಶಿಸಿದ್ದಾನೆ.
ಪೂಜೆಗಾಗಿ ಒಂದು ಕುಡಿಕೆಯಲ್ಲಿ ಮನೆಯಲ್ಲಿದ್ದ ಚಿನ್ನಾಭರಣ ಹಾಕಿದರೆ ಇನ್ನಷ್ಟು ಐಶ್ವರ್ಯ ಬರುತ್ತದೆ ಎಂದು ದಂಪತಿಯನ್ನು ನಂಬಿಸಿದ್ದಾನೆ. ಅದರಂತೆ ಉಷಾ ಅವರು ತಮ್ಮ ಕಿವಿಯೋಲೆ, ಉಂಗುರ ಸೇರಿದಂತೆ ಚಿನ್ನಾಭರಣವನ್ನು ಕುಡಿಕೆಯಲ್ಲಿ ಹಾಕಿದ್ದಾರೆ.
ನಂತರ ನೀರು ತರುವ ನೆಪದಲ್ಲಿ ಕುಡಿಕೆಯನ್ನು ಬದಲಾಯಿಸಿದ ಖದೀಮ, ಮತ್ತೊಂದು ವಸ್ತು ನೀಡಿ ಅದನ್ನು ಕೆರೆಗೆ ಬಿಟ್ಟು ಬರಲು ಹೇಳಿದ್ದಾನೆ. ದಂಪತಿ ಮನೆಗೆ ಮರಳುವಷ್ಟರಲ್ಲಿ ಸುಮಾರು 1.20 ಲಕ್ಷ ರೂ. ಮೌಲ್ಯದ ಚಿನ್ನಾಭರಣದೊಂದಿಗೆ ಆರೋಪಿ ಪರಾರಿಯಾಗಿದ್ದಾನೆ.
ದಂಪತಿ ವಾಪಸ್ ಮನೆಗೆ ಬಂದು ನೋಡಿದಾಗ ತಾವು ಮೋಸ ಹೋಗಿರುವುದು ಗೊತ್ತಾಗಿದ್ದು, ತಕ್ಷಣ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ನಕಲಿ ಸ್ವಾಮೀಜಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.