ಬೆಂಗಳೂರು: ಆನ್ಲೈನ್ ಗೇಮ್ ವ್ಯಸನ ಮತ್ತು ಸಾಲದ ಹೊರೆಯಿಂದ ಬಳಲುತ್ತಿದ್ದ 21 ವರ್ಷದ ಯುವಕನೊಬ್ಬ ಚಿನ್ನಾಭರಣ ದೋಚುವ ಉದ್ದೇಶದಿಂದ 61 ವರ್ಷದ ವೃದ್ಧೆಯನ್ನು ಹತ್ಯೆಗೈದು, ಮೃತದೇಹವನ್ನು ಸೂಟ್ಕೇಸ್ನಲ್ಲಿ ತುಂಬಿ ಕೆರೆಗೆ ಎಸೆದಿರುವ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಈ ಪ್ರಕರಣವನ್ನು 24 ಗಂಟೆಗಳಲ್ಲೇ ಭೇದಿಸಿರುವ ಕುಂಬಳಗೋಡು ಪೊಲೀಸರು, ಆರೋಪಿ ಗಗನ್ ಆರ್. (21) ಎಂಬಾತನನ್ನು ಬಂಧಿಸಿದ್ದಾರೆ. ಆತ ಬೆಂಗಳೂರಿನ ಚಳ್ಳಘಟ್ಟದ ಯಲ್ಲಪ್ಪ ಲೇಔಟ್ ನಿವಾಸಿಯಾಗಿದ್ದು, ಮೂಲತಃ ಮಂಡ್ಯ ಜಿಲ್ಲೆಯವನಾಗಿದ್ದಾನೆ.
ಮೃತ ಮಹಿಳೆಯನ್ನು ಜಯಮ್ಮ (61) ಎಂದು ಗುರುತಿಸಲಾಗಿದ್ದು, ಅವರು ಜುಲೈ 15ರ ಸಂಜೆದಿಂದ ನಾಪತ್ತೆಯಾಗಿದ್ದರು. ಜುಲೈ 21ರಂದು ಮಧ್ಯಾಹ್ನ 12.33ರ ಸುಮಾರಿಗೆ ರಾಮೋಹಳ್ಳಿ ತಿಮ್ಮಪ್ಪ ಕೆರೆಯಲ್ಲಿ ಕೆಂಪು ಬಣ್ಣದ ಸೂಟ್ಕೇಸ್ವೊಂದು ತೇಲುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತು.
ತಕ್ಷಣ ಸ್ಥಳಕ್ಕೆ ಧಾವಿಸಿದ ಹೊಯ್ಸಳ ಪೊಲೀಸ್ ಸಿಬ್ಬಂದಿ ಸೂಟ್ಕೇಸ್ ತೆರೆಯುತ್ತಿದ್ದಂತೆ ಅದರೊಳಗೆ ಕೊಳೆತ ಸ್ಥಿತಿಯಲ್ಲಿದ್ದ ಮಹಿಳೆಯ ಶವ ಪತ್ತೆಯಾಯಿತು.
ಮೊಬೈಲ್ ಕರೆ ಮಾಡಲು ಬಂದಿದ್ದ ಮಹಿಳೆಯ ಕೊಲೆ
ಪೊಲೀಸರ ತನಿಖೆ ವೇಳೆ, ಜುಲೈ 15ರಂದು ಜಯಮ್ಮ ಅವರು ಸಂಬಂಧಿಕರಿಗೆ ಕರೆ ಮಾಡಲು ಗಗನ್ ಮನೆಯಿಗೆ ತೆರಳಿದ್ದರು ಎಂಬುದು ಗೊತ್ತಾಗಿದೆ. ಆನ್ಲೈನ್ ಗೇಮ್ ವ್ಯಸನದಿಂದಾಗಿ ಸಾಲದ ಸಂಕಷ್ಟದಲ್ಲಿದ್ದ ಗಗನ್, ಜಯಮ್ಮ ಧರಿಸಿದ್ದ ಚಿನ್ನದ ಸರ, ಉಂಗುರ ಹಾಗೂ ಕಿವಿಯೋಲೆಗಳನ್ನು ದೋಚುವ ಉದ್ದೇಶದಿಂದ ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕ್ನಲ್ಲಿ ಶವ ಸಾಗಿಸಿ ಕೆರೆಗೆ ಎಸೆದ ಆರೋಪ
ಹತ್ಯೆ ಬಳಿಕ ಆರೋಪಿ ಗಗನ್ ಮೃತದೇಹವನ್ನು ಕೆಂಪು ಬಣ್ಣದ ಸೂಟ್ಕೇಸ್ನಲ್ಲಿ ತುಂಬಿ, ದ್ವಿಚಕ್ರ ವಾಹನದಲ್ಲಿ ಸಾಗಿಸಿ ರಾಮೋಹಳ್ಳಿ ತಿಮ್ಮಪ್ಪ ಕೆರೆಗೆ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಕುಂಬಳಗೋಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.