ಬೆಂಗಳೂರು: ರಸ್ತೆ ಬದಿ ದೀರ್ಘಕಾಲದಿಂದ ಬಿಟ್ಟುಹೋಗಿರುವ ವಾಹನಗಳ ವಿರುದ್ಧ ನಗರದಲ್ಲಿ ಕಾರ್ಯಾಚರಣೆ ತೀವ್ರಗೊಂಡಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಬೆಂಗಳೂರು ಸಂಚಾರ ಪೊಲೀಸರು ಇಂತಹ ವಾಹನಗಳಿಗೆ 7 ದಿನಗಳ ನೋಟಿಸ್ ಅಂಟಿಸಿ ತೆರವು ಕಾರ್ಯಾಚರಣೆ ನಡೆಸುತ್ತಿರುವ ಬೆನ್ನಲ್ಲೇ, ವಶಪಡಿಸಿಕೊಳ್ಳುವ ವಾಹನಗಳನ್ನು ಇರಿಸಲು ಐದು ನಗರ ಪಾಲಿಕೆಗಳು ಪ್ರತ್ಯೇಕ ಜಾಗಗಳನ್ನು ಗುರುತಿಸಿವೆ.
ಜಿಬಿಎ ಮೂಲಗಳ ಪ್ರಕಾರ, ಬೆಂಗಳೂರು ದಕ್ಷಿಣ ನಗರ ಪಾಲಿಕ ಅತಿ ಹೆಚ್ಚು ಆರು ಸ್ಥಳಗಳನ್ನು ವಾಹನಗಳ ಸಂಗ್ರಹಕ್ಕಾಗಿ ಗುರುತಿಸಿದೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಮೂರು ಸ್ಥಳಗಳನ್ನು ಗುರುತಿಸಿದ್ದರೆ, ಕೇಂದ್ರ, ಪೂರ್ವ ಹಾಗೂ ಉತ್ತರ ನಗರ ಪಾಲಿಕೆಗಳು ತಲಾ ಒಂದು ಸ್ಥಳವನ್ನು ಆಯ್ಕೆ ಮಾಡಿವೆ ಎಂದು ತಿಳಿದುಬಂದಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳುವ ವಾಹನಗಳನ್ನು ಲಕ್ಕಸಂದ್ರದಲ್ಲಿರುವ ಯಾರ್ಡ್ಗೆ ಸ್ಥಳಾಂತರಿಸಲಾಗುತ್ತದೆ.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ವಾಹನಗಳನ್ನು ಹೋಪ್ ಫಾರ್ಮ್ ಜಂಕ್ಷನ್ ಸಮೀಪದ ಸರ್ಕಾರಿ ಜಾಗಕ್ಕೆ, ಉತ್ತರ ನಗರ ಪಾಲಿಕೆ ವ್ಯಾಪ್ತಿಯ ವಾಹನಗಳನ್ನು ಕೋಗಿಲು ಗ್ರಾಮದ ಸರ್ವೇ ಸಂಖ್ಯೆ 99ರ ಜಾಗದಲ್ಲಿ ಇರಿಸಲಾಗುತ್ತದೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಚಿಕ್ಕಲಸಂದ್ರ ಬಸ್ ನಿಲ್ದಾಣದ ಸಮೀಪ, ಚಂದ್ರ ಲೇಔಟ್ನ ಬಡಾವಣೆ ಅಭಿವೃದ್ಧಿ ಪ್ರಾಧಿಕಾರದ (BDA) ಸರ್ವೇ ಸಂಖ್ಯೆ 78ರ ಜಾಗ ಹಾಗೂ ಮಲ್ಲೇಶ್ವರದಲ್ಲಿರುವ ಮೈಸೂರು ಲ್ಯಾಂಪ್ಸ್ ಆವರಣವನ್ನು ವಾಹನಗಳ ಸಂಗ್ರಹಕ್ಕೆ ಗುರುತಿಸಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ ಸಮೀಪದ ಜಾಗ, ರಾಗಿಗುಡ್ಡ ಮೆಟ್ರೋ ನಿಲ್ದಾಣದ ಪಕ್ಕದ ಪ್ರದೇಶ, ಕದರೇನಹಳ್ಳಿ, ಎಇಸಿಎಸ್ ಲೇಔಟ್, ವಿಜಯ ಬ್ಯಾಂಕ್ ಲೇಔಟ್ ಹಾಗೂ ಬಿಟಿಎಂ ಲೇಔಟ್ ಪೊಲೀಸ್ ಕ್ವಾರ್ಟರ್ಸ್ ಸಮೀಪದ ಖಾಲಿ ಜಾಗಗಳನ್ನು ವಾಹನ ಸಂಗ್ರಹ ಕೇಂದ್ರಗಳಾಗಿ ಗುರುತಿಸಿದೆ.
ಜುಲೈ 10ರಿಂದ 21ರವರೆಗೆ ಜಿಬಿಎ ಸಿಬ್ಬಂದಿ 1,286 ಬಿಟ್ಟು ಹೋಗಿರುವ ವಾಹನಗಳಿಗೆ ನೋಟಿಸ್ ಅಂಟಿಸಿದ್ದು, ಇದುವರೆಗೆ 23 ವಾಹನಗಳನ್ನು ಮಾತ್ರ ವಶಕ್ಕೆ ಪಡೆದು ಸ್ಥಳಾಂತರಿಸಲಾಗಿದೆ.
ನೋಟಿಸ್ ನೀಡಿದ ಬಳಿಕವೂ ಮಾಲೀಕರು ವಾಹನಗಳನ್ನು ತೆರವುಗೊಳಿಸದಿದ್ದರೆ, ಅವುಗಳನ್ನು ವಶಪಡಿಸಿಕೊಂಡು ಗುರುತಿಸಲಾದ ಸ್ಥಳಗಳಿಗೆ ಸಾಗಿಸಲಾಗುವುದು. ನಂತರ ಮಾಲೀಕರು ವಾಹನಗಳನ್ನು ಪಡೆದುಕೊಳ್ಳದಿದ್ದರೆ ನಿಯಮಾನುಸಾರ ಹರಾಜು ಪ್ರಕ್ರಿಯೆ ನಡೆಸುವ ಸಾಧ್ಯತೆಯಿದೆ.