ಬೆಂಗಳೂರು: ನೀಟ್ ಪ್ರತಿಭಟನೆ ವೇಳೆ ಉಮರ್ ಖಾಲಿದ್ ಪರ ಪೋಸ್ಟರ್ ಪ್ರದರ್ಶಿಸಿದ್ದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸಮರ್ಥಿಸಿಕೊಂಡಿದ್ದು, ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, 2020ರ ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್ ಅವರನ್ನು ಐದು ವರ್ಷಗಳಿಂದ ಜೈಲಿನಲ್ಲಿಟ್ಟಿದ್ದೀರಿ, ಸೂಕ್ತ ಚಾರ್ಜ್ಶೀಟ್ ಏಕೆ ಹಾಕಿಲ್ಲ? ಇದೇನು ಪಾಕಿಸ್ತಾನವೇ? ಕೇಂದ್ರ ಸರ್ಕಾರವು ಪಾಕಿಸ್ತಾನದ ಮಾದರಿಯನ್ನು ಅನುಸರಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಹರಿದಾಯ್ದಿದ್ದಾರೆ.
ಶುಕ್ರವಾರ ನಗರದಲ್ಲಿ ನಡೆದ ನೀಟ್ ಹೋರಾಟದ ವೇಳೆ ಕೆಲವರು ‘Ukhad Le BLR Police’ ಎಂಬ ಬರಹಗಳಿದ್ದ ಪೋಸ್ಟರ್ ಹಾಗೂ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಪರ ಘೋಷಣೆಗಳಿದ್ದ ಪೋಸ್ಟರ್ಗಳನ್ನು ಪ್ರದರ್ಶಿಸಿದ್ದರು. ಇದನ್ನು ಗಮನಿಸಿದ ಸ್ಥಳೀಯ ಪೊಲೀಸರು ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಕ್ಷಣವೇ ಆ ಪೋಸ್ಟರ್ಗಳನ್ನು ವಶಕ್ಕೆ ಪಡೆದರು.
ಈ ವೇಳೆ ಕ್ಷಣಕಾಲ ಗೊಂದಲ ಮತ್ತು ಬಿಗುವಿನ ವಾತಾವರಣ ನಿರ್ಮಾಣವಾದರೂ, ಪೊಲೀಸರು ಹಾಗೂ ಆಯೋಜಕರು ಚಾಣಾಕ್ಷತನದಿಂದ ಪರಿಸ್ಥಿತಿ ನಿಭಾಯಿಸಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದೆ ಪ್ರತಿಭಟನೆ ಶಾಂತಿಯುತವಾಗಿ ಮುಂದುವರಿಯಿತು.
ಮತ್ತೊಂದೆಡೆ, ಉಮರ್ ಖಾಲಿದ್ ಪರ ಪೋಸ್ಟರ್ ಹಿಡಿದು ಬಂದಿದ್ದ ಯುವತಿಗೆ ಪ್ರತಿಭಟನೆಯಲ್ಲಿದ್ದ ಇತರ ವಿದ್ಯಾರ್ಥಿಗಳೇ ನೇರವಾಗಿಯೇ ಕ್ಲಾಸ್ ತೆಗೆದುಕೊಂಡ ಪ್ರಸಂಗವೂ ನಡೆಯಿತು. “ಇಂತಹ ಅನಗತ್ಯ ಪೋಸ್ಟರ್ಗಳು ಮತ್ತು ವಿಷಯಗಳು ನಮ್ಮ ನೀಟ್ ಪ್ರತಿಭಟನೆಯ ಮೂಲ ಉದ್ದೇಶ ಹಾಗೂ ಹೋರಾಟದ ಹಾದಿಯನ್ನೇ ತಪ್ಪಿಸುತ್ತವೆ” ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಬಗ್ಗೆ ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. ಕೇವಲ ಧರ್ಮಂದ್ರ ಪ್ರಧಾನ್ ರಾಜಿನಾಮೆ ನೀಡಿದರೆ ಸಾಲುವುದಿಲ್ಲ, ಗೃಹ ಸಚಿವ ಅಮಿತ್ ಶಾ ಕೂಡ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.