ಬೆಂಗಳೂರು: ನಾಮಕರಣ ಶಾಸ್ತ್ರಕ್ಕೆ ಪತ್ನಿ ಮತ್ತು ಆಕೆಯ ಕುಟುಂಬದವರು ತಡವಾಗಿ ಬಂದರು ಎಂಬ ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡ ತಂದೆಯೊಬ್ಬ, ತನ್ನದೇ 11 ತಿಂಗಳ ಹೆಣ್ಣು ಮಗುವನ್ನು ನೆಲಕ್ಕೆ ಎಸೆದು ಕ್ರೌರ್ಯ ಮೆರೆದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಮಗುವಿನ ತಲೆಬುರುಡೆ ಮುರಿತವಾಗಿದ್ದು (Skull Fracture), ಆಸ್ಪತ್ರೆಯ ಐಸಿಯುನಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ನಗರದ ಕಲ್ಯಾಣ ಮಂಟಪವೊಂದರಲ್ಲಿ ಬೆಳಿಗ್ಗೆ 9:30 ರಿಂದ 10:30 ರ ಶುಭ ಮುಹೂರ್ತದಲ್ಲಿ ಮಗುವಿನ ನಾಮಕರಣ ಶಾಸ್ತ್ರವನ್ನು ಆಯೋಜಿಸಲಾಗಿತ್ತು. ಪತಿ ನಿಗದಿತ ಸಮಯಕ್ಕಿಂತ ಮೊದಲೇ ಬಂದಿದ್ದನು. ಆದರೆ, ಪತ್ನಿ ಹಾಗೂ ಆಕೆಯ ಪೋಷಕರು ಸ್ವಲ್ಪ ತಡವಾಗಿ ಬಂದಿದ್ದಾರೆ.
ಇದರಿಂದ ಆಕ್ರೋಶಗೊಂಡ ಪತಿ, ನೂರಾರು ಅತಿಥಿಗಳ ಸಮ್ಮುಖದಲ್ಲೇ ಪತ್ನಿಯೊಂದಿಗೆ ಜಗಳ ತೆಗೆದಿದ್ದಾನೆ. ಎಲ್ಲರ ಮುಂದೆ ತನಗೆ ಅವಮಾನ ಮಾಡಿದ್ದೀರಿ ಎಂದು ಕೂಗಾಡಿ, ಪತ್ನಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ.
ಇದನ್ನು ತಡೆಯಲು ಬಂದ ಮಾವನ ಮೇಲೂ ಆತ ಮುಗಿಬಿದ್ದಿದ್ದಾನೆ. ಅಷ್ಟಕ್ಕೇ ನಿಲ್ಲದ ಈತ, ಮಾವನ ಕಂಕುಳಲ್ಲಿದ್ದ 11 ತಿಂಗಳ ಮಗುವನ್ನು ಬಲವಂತವಾಗಿ ಕಸಿದುಕೊಂಡು ಜೋರಾಗಿ ನೆಲಕ್ಕೆ ಎಸೆದಿದ್ದಾನೆ.
ಮಗು ಕೆಳಗೆ ಬಿದ್ದ ರಭಸಕ್ಕೆ ತಲೆಗೆ ಗಂಭೀರ ಗಾಯಗಳಾಗಿವೆ. ಗಲಾಟೆ ಬಿಡಿಸಲು ಬಂದ ಹೋಟೆಲ್ ಸಿಬ್ಬಂದಿಗೂ ಈತ ಕಚ್ಚಿ ಗಾಯಗೊಳಿಸಿದ್ದಾನೆ.
ಈ ಸಂಬಂಧ ಮಗುವಿನ ತಾಯಿ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪತಿ ಹಾಗೂ ಆತನಿಗೆ ಪ್ರಚೋದನೆ ನೀಡಿದ ಅತ್ತೆಯ ವಿರುದ್ಧ ಜುವೆನೈಲ್ ಜಸ್ಟಿಸ್ (JJ Act) ಕಾಯ್ದೆಯಡಿ ಕಠಿಣ ಮೊಕದ್ದಮೆ ದಾಖಲಿಸಲಾಗಿದೆ. ಸದ್ಯ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.