ಬೆಂಗಳೂರು: ಸಿಲಿಕಾನ್ ಸಿಟಿಯ ಹೃದಯಭಾಗದಲ್ಲಿರುವ ಐತಿಹಾಸಿಕ ಕೆಂಪೇಗೌಡ (ಮೆಜೆಸ್ಟಿಕ್) ಬಸ್ ನಿಲ್ದಾಣವು ಶೀಘ್ರದಲ್ಲೇ ಜಾಗತಿಕ ಮಟ್ಟದ ಸಾರಿಗೆ ಹಬ್ ಆಗಿ ಬದಲಾಗಲಿದೆ.
ಈ ಬಹುನಿರೀಕ್ಷಿತ 4,997 ಕೋಟಿ ರೂ. ವೆಚ್ಚದ ನವೀಕರಣ ಯೋಜನೆಗೆ ರಾಜ್ಯ ಸಾರಿಗೆ ಇಲಾಖೆ ಮತ್ತು ಏಕಗವಾಕ್ಷಿ ಸಮಿತಿಯು ಅನುಮೋದನೆ ನೀಡಿದ್ದು, ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿ (SHLCC) ಅಂತಿಮ ಅನುಮೋದನೆ ನೀಡಬೇಕಿದೆ.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ನಡೆದ ಎಸ್ಎಲ್ಎಸ್ಡಬ್ಲ್ಯೂಎ ಸಭೆಯಲ್ಲಿ ಒಟ್ಟು ರೂ.12,936.86 ಕೋಟಿ ಅಂದಾಜು ವೆಚ್ಚದ ಏಳು ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಲಾಯಿತು.
ಪ್ರವಾಸೋದ್ಯಮ, ಆತಿಥ್ಯ, ಸಾಗರ ಮೂಲಸೌಕರ್ಯ, ತೋಟಗಾರಿಕೆ, ಚಲನಚಿತ್ರ ಹಾಗೂ ನಗರ ಸಾರಿಗೆ ಕ್ಷೇತ್ರಗಳಿಗೆ ಸಂಬಂಧಿಸಿದ ಈ ಯೋಜನೆಗಳನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಸಭೆಯಲ್ಲಿ 285.43 ಕೋಟಿ ರೂ. ಮೊತ್ತದ ನಾಲ್ಕು ಯೋಜನೆಗಳಿಗೆ ಎಸ್ಎಲ್ಎಸ್ಡಬ್ಲ್ಯೂಎ ನೇರ ಅನುಮೋದನೆ ನೀಡಿದೆ. ಆದರೆ, ರೂ. 500 ಕೋಟಿಗೂ ಅಧಿಕ ವೆಚ್ಚದ ಮೂರು ಯೋಜನೆಗಳನ್ನು, ಮೆಜೆಸ್ಟಿಕ್ ಬಸ್ ನಿಲ್ದಾಣ ಪುನರ್ಅಭಿವೃದ್ಧಿ ಸೇರಿದಂತೆ, ಅಂತಿಮ ಅನುಮೋದನೆಗಾಗಿ ಎಸ್ಎಚ್ಎಲ್ಸಿಸಿಗೆ ಶಿಫಾರಸು ಮಾಡಲಾಗಿದೆ.
ಎಸ್ಎಲ್ಎಸ್ಡಬ್ಲ್ಯೂಎ ಅನುಮೋದನೆ ಪಡೆದ ಯೋಜನೆಗಳಲ್ಲಿ ಮಂಗಳೂರಿನ ಲೈಟ್ಹೌಸ್ ಪ್ರವಾಸೋದ್ಯಮ ಮತ್ತು ಆತಿಥ್ಯ ಮೂಲಸೌಕರ್ಯ ಅಭಿವೃದ್ಧಿಗೆ ರೂ.60 ಕೋಟಿ, ಗುರುಪುರ ನದಿ ದ್ವೀಪಗಳ (ಉತ್ತರ) ಅಭಿವೃದ್ಧಿಗೆ ರೂ.59.14 ಕೋಟಿ, ಗುರುಪುರ ನದಿ ದ್ವೀಪಗಳ (ದಕ್ಷಿಣ) ಅಭಿವೃದ್ಧಿಗೆ ರೂ.66.29 ಕೋಟಿ ಹಾಗೂ ಊಟಿಯ ಫರ್ನ್ ಹಿಲ್ನ ಕರ್ನಾಟಕ ಸಿರಿ ತೋಟಗಾರಿಕಾ ಉದ್ಯಾನದಲ್ಲಿ ಪ್ರವಾಸಿಗರ ಸೌಲಭ್ಯಗಳ ಅಭಿವೃದ್ಧಿಗೆ ರೂ.100 ಕೋಟಿ ಸೇರಿವೆ.
ಇನ್ನು ಅಂತಿಮ ಅನುಮೋದನೆಗಾಗಿ ಎಸ್ಎಚ್ಎಲ್ಸಿಸಿಗೆ ಕಳುಹಿಸಿರುವ ಇತರೆ ಎರಡು ಬೃಹತ್ ಯೋಜನೆಗಳೆಂದರೆ ಮೈಸೂರಿನಲ್ಲಿ ರೂ.729.43 ಕೋಟಿ ವೆಚ್ಚದ ಫಿಲ್ಮ್ ಸಿಟಿ ನಿರ್ಮಾಣ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮಾಂಕಿ ಬಂದರಿನಲ್ಲಿ ರೂ.6,925 ಕೋಟಿ ವೆಚ್ಚದ ಬಹುಉದ್ದೇಶ ಬಂದರು ಮತ್ತು ಹಡಗು ನಿರ್ಮಾಣ ಕೇಂದ್ರ ಅಭಿವೃದ್ಧಿ ಯೋಜನೆ.
ಈ ಪಿಪಿಪಿ ಯೋಜನೆಗಳು ರಾಜ್ಯದಲ್ಲಿ ಆಧುನಿಕ ಸಾರ್ವಜನಿಕ ಮೂಲಸೌಕರ್ಯ ನಿರ್ಮಾಣ, ಖಾಸಗಿ ಹೂಡಿಕೆ ಆಕರ್ಷಣೆ, ಪ್ರವಾಸೋದ್ಯಮ ಮತ್ತು ನಗರ ಸೇವೆಗಳ ಸುಧಾರಣೆ, ಸಾಗರ ಮತ್ತು ಲಾಜಿಸ್ಟಿಕ್ಸ್ ಸಾಮರ್ಥ್ಯ ವೃದ್ಧಿ ಹಾಗೂ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳ ಸೃಷ್ಟಿಗೆ ನೆರವಾಗಲಿವೆ ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.