ಬೆಂಗಳೂರು: ಡಿಕೆ ಶಿವಕುಮಾರ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಅವರ ಪುತ್ರಿ ಐಶ್ವರ್ಯ DKS ಹೆಗ್ಡೆ ಮಾಡಿರುವ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣ ಇನ್ಸಾಟಾಗ್ರಾಮ್ ನಲ್ಲಿ ಅಭಿನಂದನೆಗಳು ಅಪ್ಪ' ಎಂಬ ಸಂದೇಶದೊಂದಿಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದು, ಜನರು ಕೂಡಾ ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಈ ಹಿಂದೆ ಐಶ್ವರ್ಯಾ ಮಾತನಾಡಿದ್ದ ವಿಡಿಯೋವೊಂದು ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ನಮ್ಮ ಅಪ್ಪ ಯಾಕೆ ಸಿಎಂ ಆಗಬೇಕು ಎಂದು ಅವರು ವಿವರಿಸಿದ್ದಾರೆ.
ಇವತ್ತು ಜನ ಬಂಡೆ ಎಂದು ಕರೆಯಬಹುದು. ಆದರೆ, ಆ ಬಂಡೆ ರೂಪುಗೊಳ್ಳುವುದಕ್ಕೆ ಎಷ್ಟು ಸಮಯ ತೆಗೆದುಕೊಂಡಿದೆ ಅಂತಾ ನಾವು ಚಿಕ್ಕ ವಯಸ್ಸಿನಿಂದ ನೋಡಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಅಪ್ಪ ಏನು ಮಾಡುತ್ತಾರೋ? ಏನೆಲ್ಲಾ ಬದಲಾವಣೆ ತರುತ್ತಾರೋ ಎಂದು ನಾವೆಲ್ಲಾ ಕುತೂಹಲದಿಂದ ಕಾಯುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ನಮ್ಮ ಅಪ್ಪ ಯಾವಾಗಲೂ ಒಂದು ಮಾತು ಹೇಳುತ್ತಿರುತ್ತಾರೆ, ಮಗಳೇ ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ. ಅವಕಾಶಗಳನ್ನು ಮಾತ್ರ ಕೊಡ್ತಾನೆ. ನಮ್ಮ ಅಪ್ಪ ದೊಡ್ಡ ಮಹತ್ವಾಕಾಂಕ್ಷೆಯ, ಧ್ಯೇಯ ಹೊಂದಿರುವ ವ್ಯಕ್ತಿ. ಜನಗಳಿಗಾಗಿ ಏನು ಮಾಡಬೇಕು ಎಂಬುದು ಅವರಿಗೆ ಗೊತ್ತು. ಅವರ ಮುಂದಿನ ಹಾದಿ ಸುಗಮವಾಗಿರಲಿ. ಲವ್ ಯು ಅಪ್ಪ ಎಂದು ಅವರು ಹೇಳಿದ್ದರು.