ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ (KMVSTDCL) ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಸಿಬಿಐ ಮಂಗಳವಾರ ಇಲ್ಲಿನ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮಾಜಿ ಸಚಿವ ಬಿ. ನಾಗೇಂದ್ರ ಸೇರಿದಂತೆ 30 ಜನರ ಪಾತ್ರ ಈ ಹಗರಣದಲ್ಲಿ ಕೇಳಿಬಂದಿದ್ದು, ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಿಗೆ 1.20 ಕೋಟಿ ರೂ. ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ ವಾಲ್ಮೀಕಿ ನಿಗಮದ ದುಡ್ಡಲ್ಲಿ ಬೇನಾಮಿ ಕಾರು ಖರೀದಿಸಿದ್ದರು ಎಂದು ಸಿಬಿಐ ತನಿಖೆಯಿಂದ ತಿಳಿದುಬಂದಿದೆ.
"ಸಿಬಿಐ ತನಿಖೆಯನ್ನು ಪೂರ್ಣಗೊಳಿಸಿದ್ದು, ಮೂರು ಸಂಸ್ಥೆಗಳಲ್ಲಿ (KMVSTDCL) ಎಸ್ಟಿ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ) ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಆರೋಪಪಟ್ಟಿಗಳನ್ನು ಸಲ್ಲಿಸಿದೆ. ಮೂರು ಆರೋಪಪಟ್ಟಿಗಳಲ್ಲಿ ಆಗಿನ ಸಚಿವ ಬಿ. ನಾಗೇಂದ್ರ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದೆ ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಬೆಂಗಳೂರಿನ ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ಶಾಖೆಯ ಮೂವರು ಅಧಿಕಾರಿಗಳು ಮತ್ತು ಇತರರನ್ನು ಹೆಸರಿಸಿ ಸಲ್ಲಿಸಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ ಹೈಕೋರ್ಟ್ ನಿಯಮಿತ ಸ್ಥಿತಿಗತಿ ಪರಿಶೀಲನೆ ಮೂಲಕ ತನಿಖೆಯನ್ನು ಮೇಲ್ವಿಚಾರಣೆ ಮಾಡಿತು. ತನಿಖೆ ವೇಳೆ ರಾಜ್ಯ ಸರ್ಕಾರಿ ಸಂಸ್ಥೆಗಳಾದ ಎಸ್ಟಿ ಕಲ್ಯಾಣ ಇಲಾಖೆ ಮತ್ತು KGTTI ಗಳಲ್ಲಿ ನಡೆದ ವಂಚನೆ ಕೂಡ ಬೆಳಕಿಗೆ ಬಂದಿತು ಮತ್ತು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಈ ಎರಡು ಸಂಸ್ಥೆಗಳನ್ನು ಒಳಗೊಂಡ ವಂಚನೆ ಕುರಿತ ಸಿಬಿಐ ತನಿಖೆಯನ್ನು ವಿಸ್ತರಿಸಲು ಜುಲೈ 1, 2025 ರಂದು ನ್ಯಾಯಾಲಯ ಆದೇಶಿಸಿತು.
ಸಿಬಿಐ ತನಿಖೆ ವೇಳೆ ನಾಗೇಂದ್ರ, ಅವರ ಆಪ್ತ ಸಹಚರ ನೆಕ್ಕಂಟಿ ನಾಗರಾಜ್ ಮತ್ತು KMVSTDCL ಎಂಡಿ ಪದ್ಮನಾಭ ಜೆಜಿ ಅವರ ಯೋಜಿತ ಪಿತೂರಿಯನ್ನು ಬಹಿರಂಗಪಡಿಸಿತು. ಹೈದರಾಬಾದ್ನ ಸತ್ಯನಾರಾಯಣ ವರ್ಮಾ ಈ ವಂಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ವರ್ಮಾ ಈ ಹಿಂದೆ ಛತ್ತೀಸ್ಗಢದಲ್ಲಿ ಇದೇ ರೀತಿಯ ವಂಚನೆ ಮಾಡಿದ್ದರು. ಹೈದರಾಬಾದ್ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್ನ ಅಧ್ಯಕ್ಷ ಎಟಕರಿ ಸತ್ಯನಾರಾಯಣ್ ಅವರೊಂದಿಗೆ ಸೇರಿ ನಕಲಿ ನೋಂದಣಿ ಪ್ರಮಾಣಪತ್ರಗಳು ಮತ್ತು ನಕಲಿ KYC ದಾಖಲೆಗಳನ್ನು ಬಳಸಿಕೊಂಡು ಸುಳ್ಳು ವ್ಯವಹಾರ ಸಂಸ್ಥೆಗಳ ಹೆಸರಿನಲ್ಲಿ 18 ನಕಲಿ ಬ್ಯಾಂಕ್ ಖಾತೆಗಳನ್ನು ತೆರೆಯುವಲ್ಲಿ ಸಂಚು ರೂಪಿಸಿದ್ದರು.
KMVSTDCL ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಖಾತೆ ಅಧಿಕಾರಿ ನೆಕ್ಕಂಟಿ ನಾಗರಾಜ್ ಮತ್ತು ಇತರ ಆರೋಪಿಗಳ ಮೂಲಕ ವರ್ಮಾ ಅವರೊಂದಿಗೆ ಮಾದರಿ ಸಹಿಗಳು ಮತ್ತು ಸೂಕ್ಷ್ಮ ಬ್ಯಾಂಕಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದರು. KMVSTDCL ನ ವ್ಯವಸ್ಥಾಪಕ ನಿರ್ದೇಶಕ ಮತ್ತು AO ಅವರ ನಕಲಿ ರಬ್ಬರ್ ಸೀಲುಗಳು, ಮುದ್ರೆಗಳನ್ನು ಹೈದರಾಬಾದ್ನ ಗ್ರಾಫಿಕ್ ಡಿಸೈನರ್ ಮೂಲಕ ನಕಲಿ ಮಾಡಿ ಮೋಸದ ಬ್ಯಾಂಕಿಂಗ್ ವಹಿವಾಟುಗಳನ್ನು ನಡೆಸಲು ಬಳಸಲಾಗಿತ್ತು. MD ಮತ್ತು AO ಸೇರಿ ಸುಮಾರು 187 ಕೋಟಿ ರೂ.ಗಳನ್ನು ಯೂನಿಯನ್ ಬ್ಯಾಂಕ್ ಇಂಡಿಯಾದ KMVSTDCL ಖಾತೆಗೆ ಸೇರಿಸಿದ್ದರು.
ನಕಲಿ ಚೆಕ್ಗಳು ಮತ್ತು RTGS ವಹಿವಾಟುಗಳ ಮೂಲಕ 89.63 ಕೋಟಿ ರೂ.ಗಳನ್ನು ಬೇರೆಯವರ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಅಲ್ಲದೇ ಹಣವನ್ನು ಸುಮಾರು 600 ಬ್ಯಾಂಕ್ ಖಾತೆಗಳಿಗೆ ಕಳುಹಿಸಿ, ಅವರಿಂದ ಹಣ ಪಡೆದು ಕಾರುಗಳನ್ನು ಆರೋಪಿಗಳು ಖರೀದಿಸಿದ್ದರು. UBI ಎಂಜಿ ರಸ್ತೆ ಶಾಖೆಯ ಅಧಿಕಾರಿಗಳು ಬ್ಯಾಂಕಿಂಗ್ ನಿಯಮಗಳನ್ನು ಉಲ್ಲಂಘಿಸಿ ಈ ವಹಿವಾಟುಗಳಿಗೆ ಸಹಕರಿಸಿದ್ದಾರೆ.
ಕೆಎಂವಿಎಸ್ಟಿಡಿಸಿಎಲ್ನ ಹಣ ವರ್ಗಾವಣೆಯಿಂದ ನಾಗೇಂದ್ರ ಬೇನಾಮಿ ಕಾರು ಖರೀದಿಸಿದ್ದರು. ಅಕ್ರಮವಾಗಿ ಪಡೆದ ಹಣವನ್ನು ನೆಕ್ಕೆಂಟಿ ನಾಗರಾಜ್ ಮತ್ತು ಅವರ ಸಂಬಂಧಿಕರು ಪಡೆದಿದ್ದಾರೆ ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ.