ಬೆಂಗಳೂರು: ಕರ್ನಾಟಕದ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದು ಡಿಕೆಶಿ ಜೊತೆಯಲ್ಲಿ 13 ಪ್ರಭಾವಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಡಿಕೆಶಿ ಪ್ರಮಾಣ ವಚನಕ್ಕೆ ಲೋಕಭವನದ ಗಾಜಿನ ಮನೆಯಲ್ಲಿ ಸಕಲ ಸಿದ್ಧತೆ ನಡೆದಿದೆ. ವೇದಿಕೆಯಲ್ಲಿ 20 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸ್ವಾಮೀಜಿ, ಫಾದರ್ ಹಾಗೂ ಮೌಲ್ವಿ ಸೇರಿದಂತೆ ಸರ್ವಧರ್ಮಗಳ 55 ಸ್ವಾಮೀಜಿಗಳಿಗೆ ಆಹ್ವಾನ ನೀಡಲಾಗಿದ್ದು, ಅವರ ಸಮ್ಮುಖದಲ್ಲಿ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ, ವೇಣುಗೋಪಾಲ್, ಸುರ್ಜೇವಾಲಾ ಸೇರಿದಂತೆ ಹಲವು ಗಣ್ಯರಿಗೆ ಪ್ರಮಾಣವಚನಕ್ಕೆ ಆಹ್ವಾನ ನೀಡಲಾಗಿದೆ. ಈಗಾಗಲೇ ಕೇರಳ ಸಿಎಂ ಸತೀಶನ್ ಬೆಂಗಳೂರಿಗೆ ಬಂದಿದ್ದಾರೆ. 80ರ ದಶಕದಿಂದ ಸುದೀರ್ಘ ರಾಜಕೀಯ ಜೀವನ, ರಾಜಕಾರಣ ಆಳ-ಅಗಲದ ಅನುಭವ, ಐಟಿ-ಇಡಿ ತನಿಖೆ ಹಾಗೂ ಜೈಲುವಾಸದ ನಂತರ ಮುಖ್ಯಮಂತ್ರಿ ಪಟ್ಟ ಅಲಂಕರಿಸುತ್ತಿದ್ಧಾರೆ.
13 ಶಾಸಕರಿಗೆ ಮಂತ್ರಿ ಹುದ್ದೆ
ಡಿ.ಕೆ. ಶಿವಕುಮಾರ್ ಜೊತೆ 13 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ಸೇರಿದ್ದ ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜೇವಾಲ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಸಚಿವರ ಪಟ್ಟಿಯನ್ನು ಫೈನಲ್ ಮಾಡಿದ್ದಾರೆ.
ಸಂಜೆ ಎಐಸಿಸಿ ಸಂಘಟನಾ ಕಾರ್ಯದರ್ಶಿ ವೇಣುಗೋಪಾಲ್ ನಿವಾಸದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿದ್ದ ಕೈ ನಾಯಕರು ಪಟ್ಟಿ ಅಂತಿಮಗೊಳಿಸಿದ್ದಾರೆ. ಹೈಕಮಾಂಡ್ ಭೇಟಿ ಬಳಿಕ ಬೆಂಗಳೂರಿಗೆ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಒಟ್ಟಿಗೆ ಆಗಮಿಸುತ್ತಿದ್ದು, ಇಂದು ಬಹುತೇಕ 13 ಮಂದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸಚಿವರ ಪಟ್ಟಿ ಇಂತಿದೆ
ಡಾ. ಜಿ. ಪರಮೇಶ್ವರ್, ಕೊರಟಗೆರೆ ಶಾಸಕ, ದಲಿತ ಸಮುದಾಯ
ಯು.ಟಿ. ಖಾದರ್, ಮಂಗಳೂರು ಶಾಸಕ, ಮುಸ್ಲಿ ಸಮುದಾಯ
ರಾಮಲಿಂಗಾರೆಡ್ಡಿ, ಬಿಟಿಎಂ ಲೇಔಟ್ ಶಾಸಕ,
ಕೆ.ಜೆ.ಜಾರ್ಜ್, ಸರ್ವಜ್ಞ ನಗರ, ಕ್ರಿಶ್ಚಿಯನ್ ಸಮುದಾಯ
ಪ್ರಿಯಾಂಕ್ ಖರ್ಗೆ, ಚಿತ್ತಾಪುರ ಶಾಸಕ, ದಲಿತ ಸಮುದಾಯ
ಸತೀಶ್ ಜಾರಕಿಹೊಳಿ, ಯಮಕನಮರಡಿ ಶಾಸಕ, ದಲಿತ ಸಮುದಾಯ
ಎಂ.ಬಿ.ಪಾಟೀಲ್, ಬಬಲೇಶ್ವರ ಶಾಸಕ, ಲಿಂಗಾಯತ ಸಮುದಾಯ
ಕೃಷ್ಣಬೈರೇಗೌಡ, ಬ್ಯಾಟರಾಯನಪುರ ಶಾಸಕ, ಒಕ್ಕಲಿಗ ಸಮುದಾಯ
ಯತೀಂದ್ರ ಸಿದ್ದರಾಮಯ್ಯ, ಪರಿಷತ್ ಸದಸ್ಯ, ಕುರುಬ ಸಮುದಾಯ
ಬೈರತಿ ಸುರೇಶ್, ಹೆಬ್ಬಾಳ ಶಾಸಕ, ಕುರುಬ ಸಮುದಾಯ
ಕೆ.ಎಚ್.ಮುನಿಯಪ್ಪ, ದೇವನಹಳ್ಳಿ ಶಾಸಕ, ದಲಿತ ಸಮುದಾಯ
ಅಂತೆಯೇ ಈಶ್ವರ್ ಖಂಡ್ರೆ ಮತ್ತು ಶರಣಪ್ರಕಾಶ್ ಪಾಟೀಲ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.