ಬೆಂಗಳೂರು: ಬೆಂಗಳೂರಿನಲ್ಲಿ ಮತದಾರರಪಟ್ಟಿ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಚುರುಕು ಪಡೆದುಕೊಳ್ಳುತ್ತಿದೆ.
ಮತದಾರರ ಪಟ್ಟಿಯಿಂದ ಅನರ್ಹ ಮತದಾರರ ಹೆಸರನ್ನು ತೆಗೆಯುವ ಮತ್ತು ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಉದ್ದೇಶವನ್ನು ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಹೊಂದಿದ್ದು, ಇದರಲ್ಲಿ ಮತಗಟ್ಟೆ ಅಧಿಕಾರಿ (ಬಿಎಲ್ಒ)ಗಳ ಗರಿಷ್ಠ ಪಾತ್ರ, ಜವಾಬ್ದಾರಿ ಇದೆ ಎಂದು ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ ಹೇಳಿದ್ದಾರೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹಾಗೂ ಚುನಾವಣೆ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ. ಅವರು ಜೂನ್ 1ರ ಮಂಗಳವಾರ ವಿಜಯನಗರ, ಬಸವನಗುಡಿ ಹಾಗೂ ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು ಎಸ್.ಐ.ಆರ್ ನಲ್ಲಿ ಮ್ಯಾಪಿಂಗ್ ಪ್ರಕ್ರಿಯೆ ಬಹಳ ಮುಖ್ಯವಾಗಿದ್ದು, ಬಿಎಲ್ಒಗಳು, ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕರು (ಬಿಎಲ್ಒ ಸೂಪರ್ವೈಸರ್) ಗಳು, ಮತದಾರರ ನೋಂದಣಾಧಿಕಾರಿಗಳು (ಇಆರ್ಒ), ಸಹಾಯಕ ಮತದಾರರ ನೋಂದಣಾಧಿಕಾರಿಗಳು (ಎಇಆರ್ಒ) ಈ ಬಗ್ಗೆ ಸಮರ್ಪಕವಾಗಿ ಕೆಲಸಗಳನ್ನು ಮುಗಿಸಿಕೊಳ್ಳಬೇಕು. ನೂತನ ಬಿಎಲ್ಒಗಳಿಗೆ ಅಗತ್ಯ ತರಬೇತಿ ನೀಡಬೇಕು ಎಂದು ಆಯುಕ್ತರು ನಿರ್ದೇಶಿಸಿದ್ದಾರೆ.
ಉಳಿದ ಎರಡು ತಿಂಗಳುಗಳಲ್ಲಿ ಮ್ಯಾಪಿಂಗ್, ಅನ್-ಮ್ಯಾಪಿಂಗ್, ರೀ-ಮ್ಯಾಪಿಂಗ್ ಇತ್ಯಾದಿ ಪ್ರಕ್ರಿಯೆಗಳಿಗೆ ಪ್ರಾಮಾಣಿಕ ಪ್ರಯತ್ನದ ಅಗತ್ಯವಿದೆ. ರಾಜಕೀಯ ಪಕ್ಷಗಳಿಂದ ನೇಮಿಸಲ್ಪಟ್ಟ ಬೂತ್ ಮಟ್ಟದ ಏಜೆಂಟ್ಗಳನ್ನು ಬಿಎಲ್ಒಗಳು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಅವರ ಸಹಾಯವನ್ನು ಪಡೆಯಬೇಕು ಮತ್ತು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು. ಬಿಎಲ್ಒಗಳು, ಮೇಲ್ವಿಚಾರಕರು, ಇಆರ್ಒಗಳು ಮತ್ತು ಎಇಆರ್ಒಗಳು ಮತಗಟ್ಟೆಗಳಲ್ಲಿ ಇಂಟರ್ನೆಟ್ನಂತಹ ಸೌಲಭ್ಯಗಳನ್ನು ವ್ಯವಸ್ಥೆ ಮಾಡಬೇಕು" ಎಂದು ಅವರು ಹೇಳಿದರು.
ಎಸ್ಐಆರ್ ಸಂಪೂರ್ಣವಾಗಿ ತಂತ್ರಜ್ಞಾನ ಆಧಾರಿತವಾಗಿದೆ ಮತ್ತು ಈ ವ್ಯಾಯಾಮದ ಸಮಯದಲ್ಲಿ, ಬಿಎಲ್ಒಗಳು ದೈಹಿಕ ಮತ್ತು ಮಾನಸಿಕ ಪರಿಶ್ರಮದಿಂದಾಗಿ ಒತ್ತಡವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳುವುದು, ವ್ಯವಸ್ಥಿತ ಯೋಜನೆಯನ್ನು ರೂಪಿಸುವುದು ಮತ್ತು ಕೆಲಸ ಮಾಡಲು ಪ್ರಾರಂಭಿಸುವುದು ಅತ್ಯಗತ್ಯ" ಎಂದು ಅವರು ಹೇಳಿದರು.