ಹೊಸಪೇಟೆ: ರಾಜ್ಯದಲ್ಲೇ ಮೊದಲ ಬಾರಿಗೆ ಬೃಹತ್ ಪ್ರಮಾಣದ ಜಪಾನ್ ಶೈಲಿಯ ‘ಮಿಯಾವಾಕಿ’ ಮಾದರಿಯ ದಟ್ಟ ಅರಣ್ಯ ನಿರ್ಮಾಣ ಯೋಜನೆಗೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಚಾಲನೆ ಸಿಗುತ್ತಿದೆ.
ಜೂನ್ 5 ರ ವಿಶ್ವ ಪರಿಸರ ದಿನದ ಅಂಗವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಈ ಮಹತ್ವಾಕಾಂಕ್ಷೆಯ ಪರಿಸರ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಕೂಡ್ಲಿಗಿ ತಾಲ್ಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆ ಆರಂಭವಾಗಲಿದ್ದು, ಮುಂದಿನ ಎರಡು ವರ್ಷಗಳಲ್ಲಿ ಮಿಯಾವಾಕಿ ವಿಧಾನದಲ್ಲಿ ಒಂದು ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಕಡಿಮೆ ಜಾಗದಲ್ಲಿ ಅತಿ ವೇಗವಾಗಿ ದಟ್ಟ ಅರಣ್ಯ ಬೆಳೆಸುವ ಜಪಾನ್ ಮೂಲದ ಮಿಯಾವಾಕಿ ತಂತ್ರಜ್ಞಾನವನ್ನು ಈ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ.
ಯೋಜನೆಯ ಮೊದಲ ಹಂತದಲ್ಲಿ ತೋಟಗಾರಿಕಾ ಇಲಾಖೆಗೆ ಸೇರಿದ 10 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಸುಮಾರು 15 ಸಾವಿರ ಸಸಿಗಳನ್ನು ನೆಡಲಾಗುತ್ತದೆ. ಇದಕ್ಕಾಗಿ ಭೂಮಿ ಸ್ವಚ್ಛಗೊಳಿಸುವುದು ಮತ್ತು ಗುಂಡಿ ತೋಡುವ ಕಾಮಗಾರಿ ಈಗಾಗಲೇ ಭರದಿಂದ ಸಾಗುತ್ತಿದೆ.
ಈ ಯೋಜನೆಯ ಮುಖ್ಯ ಉದ್ದೇಶ ಕೂಡ್ಲಿಗಿ ತಾಲ್ಲೂಕಿನಲ್ಲಿರುವ ಬಂಜರು ಹಾಗೂ ಬಳಕೆಯಾಗದ ಭೂಮಿಯನ್ನು ಹಸಿರುಮಯಗೊಳಿಸುವುದಾಗಿದೆ. ಸರ್ಕಾರಿ ಜಮೀನುಗಳ ಜೊತೆಗೆ ಆಸಕ್ತ ರೈತರ ಖಾಸಗಿ ಜಮೀನುಗಳಲ್ಲೂ ಮಿಯಾವಾಕಿ ಮಾದರಿಯ ಅರಣ್ಯ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗುತ್ತಿದೆ.
ಯೋಜನೆಯಡಿ ಹುಣಸೆ, ಸೇಬು, ನೆಲ್ಲಿಕಾಯಿ, ನೇರಳೆ, ನಿಂಬೆ ಮತ್ತು ಇತರ ಸ್ಥಳೀಯ ಜಾತಿಯ ಸಸಿಗಳನ್ನು, ಬೇವು ಮತ್ತು ಹೊಂಗೆ ಮರಗಳನ್ನು ನೆಡಲಾಗುತ್ತದೆ. ಸ್ಥಳೀಯ ಪರಿಸರಕ್ಕೆ ಹೊಂದಿಕೊಳ್ಳುವ ಹಾಗೂ ದೀರ್ಘಕಾಲಿಕವಾಗಿ ಪರಿಸರ ಸಮತೋಲನ ಕಾಪಾಡುವ ಜಾತಿಗಳಿಗೆ ಆದ್ಯತೆ ನೀಡಲಾಗುತ್ತಿದೆ.
ಈ ಕುರಿತು ಮಾತನಾಡಿದ ಕೂಡ್ಲಿಗಿ ಶಾಸಕ ಎನ್.ಟಿ.ಶ್ರೀನಿವಾಸ್ ಅವರು, ಮಿಯಾವಾಕಿ ಅರಣ್ಯ ಕೃಷಿ ಮಾದರಿಯು ಮಳೆ ಆಧಾರಿತ ಪ್ರದೇಶವಾದ ಕೂಡ್ಲಿಗಿಯಲ್ಲಿ ಹಸಿರು ವಾತಾವರಣ ನಿರ್ಮಿಸಲು ಸಹಕಾರಿಯಾಗಲಿದೆ. ಜೊತೆಗೆ ಬಳಕೆಯಾಗದ ಜಮೀನುಗಳನ್ನು ಪರಿಸರ ಸ್ನೇಹಿ ರೀತಿಯಲ್ಲಿ ಅಭಿವೃದ್ಧಿಪಡಿಸಿ, ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ನೆರವಾಗಲಿದೆ ಎಂದು ಹೇಳಿದ್ದಾರೆ.