ಸಂಗ್ರಹ ಚಿತ್ರ 
ರಾಜ್ಯ

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ: ಸಾರಿಗೆ ನಿಗಮಗಳಿಗೆ ಕೋಟಿ ಕೋಟಿ ರೂ. ನಷ್ಟ ಆತಂಕ..!

ಉಚಿತ ಬಸ್ ಪಾಸ್ ಯೋಜನೆಯಿಂದ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳ ಕುಟುಂಬಗಳ ಮೇಲಿನ ಸಾರಿಗೆ ವೆಚ್ಚದ ಹೊರೆ ಗಣನೀಯವಾಗಿ ಕಡಿಮೆಯಾಗಲಿದೆ. ವಿಶೇಷವಾಗಿ ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗೆ ಇದು ಹೆಚ್ಚಿನ ನೆರವಾಗಲಿದೆ.

ಬೆಂಗಳೂರು: ರಾಜ್ಯದ ಎಲ್ಲಾ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ರಾಜ್ಯ ಸರ್ಕಾರದ ನಿರ್ಧಾರವು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಾಗಲಿದ್ದರೂ, ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಆದಾಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಪ್ರಸ್ತುತ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಪ್ರತಿವರ್ಷ ಸುಮಾರು ಏಳು ಲಕ್ಷ ವಿದ್ಯಾರ್ಥಿಗಳಿಂದ ಬಸ್ ಪಾಸ್ ಶುಲ್ಕ ರೂಪದಲ್ಲಿ ಆದಾಯ ಗಳಿಸುತ್ತಿವೆ. ಹೊಸ ಯೋಜನೆ ಜಾರಿಗೆ ಬಂದರೆ ಈ ಆದಾಯ ಸಂಪೂರ್ಣವಾಗಿ ನಿಲ್ಲಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಂದ ಪ್ರತಿವರ್ಷ ಸುಮಾರು 9 ಲಕ್ಷ ವಿದ್ಯಾರ್ಥಿ ಬಸ್ ಪಾಸ್‌ಗಳನ್ನು ವಿತರಿಸಲಾಗುತ್ತದೆ. ಇದರಲ್ಲಿ ಸುಮಾರು 7 ಲಕ್ಷ ವಿದ್ಯಾರ್ಥಿಗಳು ಪಾಸ್‌ಗೆ ಹಣ ಪಾವತಿಸುತ್ತಾರೆ. ಉಳಿದವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಾಗಿದ್ದು, ಅವರು ಈಗಾಗಲೇ ಉಚಿತ ಪ್ರಯಾಣ ಸೌಲಭ್ಯ ಪಡೆಯುತ್ತಿದ್ದಾರೆ.

ಒಂದು ವಿದ್ಯಾರ್ಥಿ ಬಸ್ ಪಾಸ್‌ಗೆ ಸರಾಸರಿ ವರ್ಷಕ್ಕೆ 1,000 ರೂಪಾಯಿ ವೆಚ್ಚವಾಗುತ್ತದೆ. ಹೊಸ ಯೋಜನೆಯಿಂದ ಈ ಏಳು ಲಕ್ಷ ವಿದ್ಯಾರ್ಥಿಗಳಿಂದ ಬರುತ್ತಿದ್ದ ಆದಾಯ ಸಾರಿಗೆ ನಿಗಮಗಳಿಗೆ ದೊರೆಯುವುದಿಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಅಂಕಿ-ಅಂಶಗಳ ಪ್ರಕಾರ, 2025-26ನೇ ಸಾಲಿನಲ್ಲಿ ಒಟ್ಟು 1.78 ಲಕ್ಷ ವಿದ್ಯಾರ್ಥಿ ಪಾಸ್‌ಗಳನ್ನು ವಿತರಿಸಲಾಗಿದೆ. ಇದರಲ್ಲಿ 1.41 ಲಕ್ಷ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ, ಸುಮಾರು 31 ಸಾವಿರ ಎಸ್‌ಸಿ ವಿದ್ಯಾರ್ಥಿಗಳಿಗೆ ಹಾಗೂ ಸುಮಾರು 5 ಸಾವಿರ ಎಸ್‌ಟಿ ವಿದ್ಯಾರ್ಥಿಗಳಿಗೆ ಪಾಸ್‌ಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿಗಳಿಗೆ ಮಹತ್ವದ ನೆರವು

ಉಚಿತ ಬಸ್ ಪಾಸ್ ಯೋಜನೆಯಿಂದ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳ ಕುಟುಂಬಗಳ ಮೇಲಿನ ಸಾರಿಗೆ ವೆಚ್ಚದ ಹೊರೆ ಗಣನೀಯವಾಗಿ ಕಡಿಮೆಯಾಗಲಿದೆ. ವಿಶೇಷವಾಗಿ ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗೆ ಇದು ಹೆಚ್ಚಿನ ನೆರವಾಗಲಿದೆ.

ಪ್ರತಿವರ್ಷದ ಪ್ರಯಾಣ ವೆಚ್ಚವನ್ನು ಸಂಪೂರ್ಣವಾಗಿ ತೆಗೆದುಹಾಕುವುದರಿಂದ ಶಿಕ್ಷಣದ ಲಭ್ಯತೆ ಹೆಚ್ಚುವುದು, ವಿದ್ಯಾರ್ಥಿಗಳ ಹಾಜರಾತಿ ಸುಧಾರಿಸುವುದು, ಶಾಲೆ ಹಾಗೂ ಕಾಲೇಜು ತೊರೆಯುವವರ ಸಂಖ್ಯೆ ಕಡಿಮೆಯಾಗುವುದು ಮತ್ತು ಗ್ರಾಮೀಣ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಸಿಗುವುದು ಎಂಬ ನಿರೀಕ್ಷೆ ಇದೆ.

ಶಿಕ್ಷಣವನ್ನು ಹೆಚ್ಚು ಸುಲಭವಾಗಿ ಮತ್ತು ಎಲ್ಲರಿಗೂ ಲಭ್ಯವಾಗಿಸುವ ಉದ್ದೇಶದಿಂದಲೇ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಶಕ್ತಿ ಯೋಜನೆ ನಡುವೆಯೇ ಹೊಸ ಸವಾಲು

ಈ ಘೋಷಣೆ ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಾರಿಗೆ ನಿಗಮಗಳಿಗೆ ಮತ್ತೊಂದು ಸವಾಲಾಗಿ ಪರಿಣಮಿಸಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ 'ಶಕ್ತಿ' ಯೋಜನೆಯಿಂದ ನಾಲ್ಕು ಸಾರಿಗೆ ನಿಗಮಗಳ ಮೇಲೆ ಭಾರೀ ಆರ್ಥಿಕ ಒತ್ತಡ ಉಂಟಾಗಿದೆ.

2023ರ ಜೂನ್ 11ರಂದು ಶಕ್ತಿ ಯೋಜನೆ ಆರಂಭವಾದ ಬಳಿಕ ಅದರ ಅನುಷ್ಠಾನಕ್ಕಾಗಿ ನಾಲ್ಕು ನಿಗಮಗಳು ಒಟ್ಟಾರೆ ಸುಮಾರು 17,000 ಕೋಟಿ ರೂಪಾಯಿ ವೆಚ್ಚ ಮಾಡಿವೆ. ಸರ್ಕಾರ ಇದೂವರೆಗೆ ಸುಮಾರು 13,000 ಕೋಟಿ ರೂಪಾಯಿ ಮರುಪಾವತಿ ಮಾಡಿದ್ದು, 2026ರ ಫೆಬ್ರವರಿ 28ರ ವೇಳೆಗೆ ಸುಮಾರು 4,000 ಕೋಟಿ ರೂಪಾಯಿ ಬಾಕಿ ಉಳಿದಿದೆ.

ಇದೀಗ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಸೌಲಭ್ಯ ವಿಸ್ತರಿಸಿರುವುದರಿಂದ ರಾಜ್ಯ ಸರ್ಕಾರದಿಂದ ಸಮರ್ಪಕ ಮರುಪಾವತಿ ದೊರೆಯದಿದ್ದರೆ ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿಯ ಮೇಲೆ ಮತ್ತಷ್ಟು ಒತ್ತಡ ಬೀಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೋದಿ ಮೇಲೆ ಒತ್ತಡ ಹೇರುವುದು ವ್ಯರ್ಥ, ಭಾರತ-ರಷ್ಯಾ ಸಂಬಂಧ ದುರ್ಬಲಗೊಳಿಸುವ ಪಾಶ್ಚಾತ್ಯ ರಾಷ್ಟ್ರಗಳ ತಂತ್ರ ಫಲಿಸುವುದಿಲ್ಲ: ಪುಟಿನ್

ಮೋದಿ ನನ್ನ ಉತ್ತಮ ಸ್ನೇಹಿತ, ಶೀಘ್ರದಲ್ಲೇ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಡೊನಾಲ್ಡ್ ಟ್ರಂಪ್

ಖರ್ಗೆ, ಮನ್ಸೂರ್ ಖಾನ್, ಪವನ್ ಖೇರಾಗೆ ರಾಜ್ಯಸಭೆ ಟಿಕೆಟ್; ಮೇಲ್ಮನೆ ಚುನಾವಣೆ ಮೇಲೆ 'ಕೈ' ಕಮಾಂಡ್ ಫುಲ್ ಫೋಕಸ್, ತಂತ್ರ ರೂಪಿಸಲು ಬೆಂಗಳೂರಿಗೆ ರಾಹುಲ್..!

'ಒಬ್ಬರಿಗೆ ಒಂದು ಹುದ್ದೆ' ಸೂತ್ರ ಪಾಲನೆ: ಸಿಎಂ ಆಗಲು ಕೆಪಿಸಿಸಿ ಅಧ್ಯಕ್ಷರಾಗಿರಬೇಕೆಂಬ ನಿಯಮವಿಲ್ಲ, ಸಿದ್ದು ಉದಾಹರಣೆ ನೀಡಿದ ಸತೀಶ್ ಜಾರಕಿಹೊಳಿ

ವಿಧಾನ ಪರಿಷತ್ ಚುನಾವಣೆ; ಕಾಂಗ್ರೆಸ್ ಪಕ್ಷದಿಂದ ಐವರು ಅಭ್ಯರ್ಥಿಗಳು ಕಣಕ್ಕೆ: ಸಿಎಂ ಡಿ.ಕೆ. ಶಿವಕುಮಾರ್

SCROLL FOR NEXT