ಬೆಂಗಳೂರು: ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ವ್ಯಾಪಿಸಿರುವ ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಪಶ್ಚಿಮ ಘಟ್ಟಗಳ (Western Ghats) ಸಂರಕ್ಷಣೆಗಾಗಿ ರಾಷ್ಟ್ರೀಯ ನೀತಿಯನ್ನು ರೂಪಿಸುವಂತೆ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಪ್ರಸ್ತಾಪಿಸಿದೆ.
ಈ ಕುರಿತು ಸಮಿತಿಯು ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ, ಕರ್ನಾಟಕ ಸರ್ಕಾರಕ್ಕೆ ಹಾಗೂ ಪಶ್ಚಿಮ ಘಟ್ಟಗಳು ಸುಮಾರು 1,600 ಕಿ.ಮೀ. ವ್ಯಾಪ್ತಿಯಲ್ಲಿ ಹರಡಿರುವ ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೆ ಪತ್ರ ಬರೆದಿದೆ. ಆದರೆ, ಪಶ್ಚಿಮ ಘಟ್ಟಗಳ ಪರ್ವತ ಪ್ರದೇಶದ ಸುಮಾರು ಶೇಕಡಾ 75 ಭಾಗ ಕರ್ನಾಟಕದಲ್ಲಿದೆ.
ಸಹ್ಯಾದ್ರಿ ಪರ್ವತ ಶ್ರೇಣಿಯ ಸಂರಕ್ಷಣೆಯಲ್ಲಿ ತೊಡಗಿರುವ ತಜ್ಞರು, ಕೇವಲ ದೊಡ್ಡ ಮೂಲಸೌಕರ್ಯ ಯೋಜನೆಗಳಷ್ಟೇ ಅಲ್ಲದೆ, ಹೆಚ್ಚುತ್ತಿರುವ ರಿಸಾರ್ಟ್ಗಳು ಮತ್ತು ಹೋಂಸ್ಟೇಗಳಂತಹ ವಾಣಿಜ್ಯ ಅಭಿವೃದ್ಧಿಗಳಿಂದಲೂ ಈ ಪ್ರದೇಶ ತುಂಡಾಗುತ್ತಿದ್ದು, ಅದರ ಪರಿಸರ ಸಮತೋಲನಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಹಲವು ಬಾರಿ ಎಚ್ಚರಿಕೆ ನೀಡಿದ್ದಾರೆ.
ಇದು ಸಣ್ಣ ಸಮಸ್ಯೆಯಂತೆ ಕಂಡರೂ, ಆಳವಾದ ಅಧ್ಯಯನದಲ್ಲಿ ಇದು ಗಂಭೀರ ಸಮಸ್ಯೆಯಾಗಿದೆ ಎಂಬುದು ಗೊತ್ತಾಗಿದೆ. ವಿವಿಧ ಗಾತ್ರದ ಜಾಗಗಳನ್ನು ರಿಸಾರ್ಟ್ಗಳು ಮತ್ತು ಹೋಂಸ್ಟೇಗಳಾಗಿ ಪರಿವರ್ತಿಸಲಾಗುತ್ತಿದೆ. ಅವುಗಳಲ್ಲಿ ಕೆಲವು ಕಾನೂನುಬದ್ಧವಾಗಿದ್ದರೆ, ಕೆಲವು ಅಕ್ರಮವಾಗಿವೆ.
ಈ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಆರು ರಾಜ್ಯಗಳನ್ನೊಳಗೊಂಡ ಸಮಗ್ರ ನೀತಿ ಅಗತ್ಯವಾಗಿದೆ. ಆದ್ದರಿಂದ ರಾಷ್ಟ್ರೀಯ ನೀತಿಯನ್ನು ಪ್ರಸ್ತಾಪಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಮೊಹಮ್ಮದ್ ತಬ್ರೇಜ್ ಆಲಂ ಶರೀಫ್ ತಿಳಿಸಿದ್ದಾರೆ.
ಎಷ್ಟು ಹೋಂಸ್ಟೇಗಳು ಮತ್ತು ರೆಸಾರ್ಟ್ಗಳಿಗೆ ಅನುಮತಿ ನೀಡಬೇಕು ಎಂಬುದರ ಕುರಿತು ಸ್ಪಷ್ಟ ಮಾರ್ಗಸೂಚಿಗಳು ಇಲ್ಲ. ಹೊಸ ನೀತಿಯು ಸೂಕ್ತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು ಒದಗಿಸಲಿದೆ ಎಂದರು.
ಕರ್ನಾಟಕದಲ್ಲಿ ವಿಶೇಷವಾಗಿ ಚಿಕ್ಕಮಗಳೂರು, ಕೊಡಗು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಿಸಾರ್ಟ್ಗಳು ಮತ್ತು ಹೋಂಸ್ಟೇಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ದೊಡ್ಡ ಜಮೀನುಗಳನ್ನು ಸಣ್ಣ ತುಂಡುಗಳಾಗಿ ವಿಭಜಿಸಿ, ವಿಲ್ಲಾಗಳು ಅಥವಾ ಸ್ವತಂತ್ರ ಮನೆಗಳ ನಿರ್ಮಾಣಕ್ಕಾಗಿ ಮಾರಾಟ ಮಾಡಲಾಗುತ್ತಿದೆ. ನಂತರ ಅವುಗಳನ್ನು ಗುತ್ತಿಗೆ, ಉಪಗುತ್ತಿಗೆ ಅಥವಾ ಬಾಡಿಗೆಗೆ ನೀಡಲಾಗುತ್ತಿದೆ.
ಇವು ತಳಮಟ್ಟದಲ್ಲಿ ಸಣ್ಣ ಬೆಳವಣಿಗೆಯಂತೆ ಕಂಡರೂ, ಪಶ್ಚಿಮ ಘಟ್ಟಗಳ ನೈಸರ್ಗಿಕ ಭೂದೃಶ್ಯವನ್ನು ತುಂಡರಿಸುತ್ತಿದ್ದು, ಮಾನವ-ವನ್ಯಜೀವಿ ಸಂಘರ್ಷಕ್ಕೂ ಕಾರಣವಾಗುತ್ತಿವೆ ಎಂದು ಅವರು ಹೇಳಿದರು.
ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಾರ್ಯಪಡೆ ಸಮಿತಿಯ ಪ್ರಕಾರ, ಅರಣ್ಯ ಪ್ರದೇಶಗಳು ಮತ್ತು ಪಶ್ಚಿಮ ಘಟ್ಟಗಳ ಸುತ್ತಮುತ್ತ ಎಷ್ಟು ಹೊಟೇಲ್, ರೆಸಾರ್ಟ್ಗಳು ಮತ್ತು ಹೋಂಸ್ಟೇಗಳಿವೆ ಎಂಬುದರ ಕುರಿತು ಒಟ್ಟಾರೆ ಸಮಗ್ರ ಅಂಕಿಅಂಶಗಳು ಲಭ್ಯವಿಲ್ಲ.
ಸಮಿತಿಯು 2026ರ ಸೆಪ್ಟೆಂಬರ್ನಿಂದ ನೀತಿ ರೂಪಿಸುವ ಕಾರ್ಯ ಆರಂಭಿಸಿ, 2027ರ ಜನವರಿಯೊಳಗೆ ಪೂರ್ಣಗೊಳಿಸಿ ಸಚಿವಾಲಯಕ್ಕೆ ಸಲ್ಲಿಸುವ ಗುರಿ ಹೊಂದಿದೆ. ಈ ಸಂಬಂಧ ಸದಸ್ಯರು ಇತರ ರಾಜ್ಯಗಳ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದು, ವರದಿ ಸಿದ್ಧಪಡಿಸುತ್ತಿದ್ದಾರೆ.
ಪಶ್ಚಿಮ ಘಟ್ಟಗಳ ಧಾರಣಾ ಸಾಮರ್ಥ್ಯ (Carrying Capacity) ಅಧ್ಯಯನ ನಡೆಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಅಲ್ಲದೆ, ಸಂಪೂರ್ಣ ಪಶ್ಚಿಮ ಘಟ್ಟ ಪ್ರದೇಶವನ್ನು ಒಳಗೊಂಡಂತೆ ಇಂತಹ ಅಧ್ಯಯನವನ್ನು ಆರಂಭಿಸುವ ಮೊದಲ ರಾಜ್ಯವೂ ಕರ್ನಾಟಕವೇ ಆಗಲಿದೆ.