ದಾವಣಗೆರೆ: ಹರಿಹರದ ಪಂಚಮಸಾಲಿ ಮಠಕ್ಕೆ ಭಕ್ತರು ನೀಡಿದ್ದ 1 ಕೆಜಿಗೂ ಹೆಚ್ಚು ಚಿನ್ನಾಭರಣ ನಾಪತ್ತೆಯಾಗಿದೆ ಎಂದು ರಾಜ್ಯ ಗಡಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಸೋಮಣ್ಣ ಬೇವಿನಮರದ ಗಂಭೀರ ಆರೋಪ ಮಾಡಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟ್ರಸ್ಟ್ನವರು ಸದ್ಯ ಕೇವಲ 27 ಕೋಟಿ ರೂಪಾಯಿಗಳ ನಗದು ಲೆಕ್ಕವನ್ನು ಮಾತ್ರ ಸಮಾಜದ ಮುಂದೆ ಇಟ್ಟಿದ್ದಾರೆ. ಆದರೆ ಮಠಕ್ಕೆಂದು ಭಕ್ತರು ನೀಡಿದ್ದ 1 ಕೆಜಿಗೂ ಹೆಚ್ಚು ಚಿನ್ನಾಭರಣದ ಬಗ್ಗೆ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದರು.
ಹರಿಹರದ ಪಂಚಮಸಾಲಿ ಮಠ 2008ರ ಫೆಬ್ರವರಿ 18ರಂದು ಸ್ಥಾಪನೆಯಾಗಿತ್ತು. ಆ ದಿನ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಮಠದ ಶ್ರೀಗಳಿಗೆ ಚಿನ್ನದ ಉಂಗುರ, ಚಿನ್ನದ ಕಡಗ ಹಾಗೂ ಭವ್ಯವಾದ ಚಿನ್ನದ ಕಿರೀಟ ಸೇರಿದಂತೆ ಸುಮಾರು ಒಂದೂವರೆ ಕೆಜಿ ಚಿನ್ನಾಭರಣಗಳನ್ನು ದಾನವಾಗಿ ನೀಡಿದ್ದರು. ಸ್ವಾಮೀಜಿಯವರಿಗೆ ನೀಡಲಾಗಿದ್ದ ಈ ಎಲ್ಲ ಆಭರಣಗಳನ್ನು ಸದ್ಯ ಮಠದ ಟ್ರಸ್ಟ್ನವರೇ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಕೂಡಲೇ ಮಠದ ಹೆಸರಿನಲ್ಲಿರುವ ಒಟ್ಟು ಚಿನ್ನಾಭರಣ, ಬೆಳ್ಳಿ ವಸ್ತುಗಳು ಎಷ್ಟು? ಮಠಕ್ಕೆ ಸೇರಿದ ಜಮೀನು ಎಲ್ಲೆಲ್ಲಿದೆ? ಈ ಎಲ್ಲ ಅಧಿಕೃತ ದಾಖಲೆಗಳನ್ನು ಟ್ರಸ್ಟ್ನವರು ತಕ್ಷಣವೇ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.