ತುಮಕೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪ್ರಕಟಿಸಿದ್ದ ಸರ್ಕಾರಿ ಜಾಹೀರಾತಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರ ಮಾತ್ರ ಪ್ರಕಟವಾಗಿದ್ದು, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಚಿತ್ರವನ್ನು ಕೈಬಿಟ್ಟಿರುವ ವಿಚಾರ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಈ ವಿಚಾರವನ್ನು ತೀವ್ರವಾಗಿ ಟೀಕಿಸಿರುವ ಜೆಡಿಎಸ್, ಸಾಮಾಜಿಕ ನ್ಯಾಯದ ಬಗ್ಗೆ ನಿರಂತರವಾಗಿ ಮಾತನಾಡುವ ಕಾಂಗ್ರೆಸ್ನ ನಿಜವಾದ ಮುಖ ಇಂದು ಬಯಲಾಗಿದೆ ಎಂದು ಆರೋಪಿಸಿದೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, "ನೀವೇ ಉಪ ಮುಖ್ಯಮಂತ್ರಿಯಾಗಿದ್ದಾಗ ನಿಮ್ಮ ಫೋಟೋ ಕಡ್ಡಾಯವಾಗಿತ್ತು. ಆದರೆ, ಈಗ ಒಬ್ಬ ದಲಿತ ನಾಯಕ ಉಪ ಮುಖ್ಯಮಂತ್ರಿಯಾಗಿದ್ದಾಗ ಅವರ ಫೋಟೋಗೆ ಜಾಗ ಇಲ್ಲವೇ ಮುಖ್ಯಮಂತ್ರಿಗಳೇ?" ಎಂದು ಪ್ರಶ್ನಿಸಿದೆ.
ಅಲ್ಲದೆ, "ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯದ ಏಳಿಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದ ದೇವರಾಜ ಅರಸು ಅವರ ಕಾರ್ಯಕ್ರಮದ ಜಾಹೀರಾತಿನಲ್ಲೇ ಹಾಲಿ ಉಪ ಮುಖ್ಯಮಂತ್ರಿ ಹಾಗೂ ಪ್ರಮುಖ ದಲಿತ ನಾಯಕ ಡಾ. ಜಿ. ಪರಮೇಶ್ವರ್ ಅವರ ಚಿತ್ರವನ್ನು ಸಂಪೂರ್ಣವಾಗಿ ಕೈಬಿಡುವ ಮೂಲಕ ಡಿ.ಕೆ. ಶಿವಕುಮಾರ್ ತಮ್ಮ ಏಕಸ್ವಾಮ್ಯ ಧೋರಣೆ ಮತ್ತು ಅಹಂಕಾರವನ್ನು ಪ್ರದರ್ಶಿಸಿದ್ದಾರೆ ಎಂದು ಕಿಡಿಕಾರಿದೆ.
"ಸಾಮಾಜಿಕ ನ್ಯಾಯದ ಮಾತುಗಳನ್ನಾಡುವ ಕಾಂಗ್ರೆಸ್, ದಲಿತ ನಾಯಕರಿಗೆ ನೀಡುವ ಗೌರವ ಇದೇನಾ? ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕೃತ ಜಾಹೀರಾತಿನಲ್ಲೇ ದಲಿತ ನಾಯಕನನ್ನು ನಿರ್ಲಕ್ಷಿಸಿರುವುದು ಖಂಡನೀಯ. ದಲಿತರನ್ನು ಕೇವಲ ಮತಬ್ಯಾಂಕ್ ಆಗಿ ಬಳಸುವ ಕಾಂಗ್ರೆಸ್ನ ಅಹಂಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ" ಎಂದು ವಾಗ್ದಾಳಿ ನಡೆಸಿದೆ.
ಇದರ ಜೊತೆಗೆ, ಇತ್ತೀಚೆಗೆ ಪ್ರಕಟಗೊಂಡಿದ್ದ 'ಭೂ ಗ್ಯಾರಂಟಿ' ಯೋಜನೆಯ ಜಾಹೀರಾತಿನಲ್ಲೂ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಭಾವಚಿತ್ರ ಪ್ರಕಟಿಸಿರಲಿಲ್ಲ ಎಂಬುದನ್ನೂ ಜೆಡಿಎಸ್ ಪ್ರಸ್ತಾಪಿಸಿದೆ.
ಇದು ಕಾಂಗ್ರೆಸ್ ಸರ್ಕಾರದ ಯೋಜನೆಯ ಪ್ರಚಾರವೋ ಅಥವಾ ವ್ಯಕ್ತಿ ಪೂಜೆಯ ಹಪಾಹಪಿಯೋ? ಗ್ರೇಟರ್ ಬೆಂಗಳೂರು ಪ್ರಾಧಿಕಾರದ 'ನನ್ನ ಇ-ಖಾತಾ' ಜಾಹೀರಾತಿನಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಭಾವಚಿತ್ರವೇ ಕಾಣೆಯಾಗಿದೆ. ಡಿಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಶಿಷ್ಟಾಚಾರಕ್ಕೆ ಸಂಪೂರ್ಣ ತಿಲಾಂಜಲಿ ಇಟ್ಟು, ಸರ್ಕಾರದಲ್ಲಿ ʼಒನ್ ಮ್ಯಾನ್ ಶೋʼ ಮಾಡುತ್ತಿರುವುದಕ್ಕೆ ಈ ಜಾಹೀರಾತೇ ಸಾಕ್ಷಿ ಎಂದು ಆರೋಪಿಸಿದೆ.