ಕಲಬುರಗಿ: ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಗಡಿ ಭಾಗದಲ್ಲಿರುವ ಭೂಮಿ ವಿವಾದ ಇದೀಗ ಶಾದಿಪುರ ಗ್ರಾಮದ ಎಸ್ಸಿ/ಎಸ್ಟಿ ಸಮುದಾಯದ ಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ.
ಚಿಂಚೋಳಿ ತಾಲ್ಲೂಕಿನ ಶಾದಿಪುರ ಗ್ರಾಮದ 54 ಫಲಾನುಭವಿಗಳಿಗೆ 2002ರಲ್ಲಿ ಕರ್ನಾಟಕ ಸರ್ಕಾರ 188 ಎಕರೆ ಭೂಮಿಯನ್ನು ಮಂಜೂರು ಮಾಡಿದ್ದರೂ, ಅದೇ ಭೂಮಿಯ ಮೇಲೆ ತೆಲಂಗಾಣದ ಗ್ರಾಮಸ್ಥರು ಹಕ್ಕು ಪ್ರತಿಪಾದಿಸುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಸಂಕೀರ್ಣಗೊಂಡಿದೆ.
ಸರ್ಕಾರವು ಸರ್ವೆ ನಂ.126 ಮತ್ತು 127ರ ವ್ಯಾಪ್ತಿಯ 188 ಎಕರೆ ಭೂಮಿಯನ್ನು ಎಸ್ಸಿ/ಎಸ್ಟಿ ಸಮುದಾಯದವರು, ಭೂಹೀನರು ಹಾಗೂ ಮಾಜಿ ಸೈನಿಕರು ಸೇರಿದಂತೆ 54 ಮಂದಿಗೆ ಹಂಚಿಕೆ ಮಾಡಿತ್ತು.
ಫಲಾನುಭವಿಗಳ ಹೆಸರಲ್ಲಿ ಪಹಣಿ (RTC) ದಾಖಲೆಗಳನ್ನೂ ನೀಡಲಾಗಿತ್ತು. ಆದರೆ, ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಉಮ್ಲಾ ನಾಯಕ್ ತಾಂಡಾ ನಿವಾಸಿಗಳು ಈ ಭೂಮಿ ತಮ್ಮದಾಗಿದೆ ಎಂದು ವಾದಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಜೂನ್ 3ರಂದು ಸೇಡಂ ಸಹಾಯಕ ಆಯುಕ್ತ ಪ್ರಭು ರೆಡ್ಡಿ, ಚಿಂಚೋಳಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಭೂದಾಖಲೆಗಳ ಉಪನಿರ್ದೇಶಕ ಮಹೇಶ್ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಶಾದಿಪುರ ಗ್ರಾಮಕ್ಕೆ ಭೇಟಿ ನೀಡಿ ಭೂಮಿಯ ಗಡಿಯನ್ನು ಗುರುತಿಸುವ ಕಾರ್ಯ ಕೈಗೊಳ್ಳಲು ಮುಂದಾಗಿತ್ತು. ಆದರೆ, ಉಮ್ಲಾ ನಾಯಕ್ ತಾಂಡಾದ ಕೆಲ ಗ್ರಾಮಸ್ಥರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ,ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ.
ಇದರಿಂದ ಅಧಿಕಾರಿಗಳ ತಂಡ ಗಡಿ ಗುರುತಿಸುವ ಕಾರ್ಯ ಪೂರ್ಣಗೊಳಿಸದೇ ಹಿಂದಿರುಗಬೇಕಾಯಿತು. ಇದೇ ವೇಳೆ ಶಾದಿಪುರ ಗ್ರಾಮಸ್ಥರು ಸರ್ವೆ ನಂ.126ರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ ಎಂದು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಭೂ ವಿವಾದವನ್ನು ಬಗೆಹರಿಸಲು ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಕಂದಾಯ, ಭೂದಾಖಲೆ ಹಾಗೂ ಗಣಿ ಇಲಾಖೆಗಳ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಬೇಕೆಂದು ಚಿಂಚೋಳಿ ತಹಸೀಲ್ದಾರ್ ಸೇಡಂ ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಲಬುರಗಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಉಭಯ ರಾಜ್ಯಗಳ ಅಧಿಕಾರಿಗಳು ಮತ್ತು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ಅಗತ್ಯವಿದ್ದರೆ ವಿಷಯವನ್ನು ಕಂದಾಯ ಆಯುಕ್ತರ ಗಮನಕ್ಕೂ ತರಲಾಗುವುದು ಎಂದು ತಿಳಿಸಿದ್ದಾರೆ.