ಬೆಂಗಳೂರು: ಬೆಂಗಳೂರು ಪಶ್ಚಿಮ ನಗರ ಪಾಲಿಕೆ (BWCC) ವ್ಯಾಪ್ತಿಯ ಸುಂಕಲ್ ಪಾಳ್ಯ ಕೆರೆಯಲ್ಲಿ ಕಲುಷಿತ ನೀರು ಹಾಗೂ ಆಮ್ಲಜನಕದ ಮಟ್ಟ ಕುಸಿದಿದ್ದರಿಂದ ನೂರಾರು ಮೀನುಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.
ಕೆರೆಯಲ್ಲಿ ತೇಲುತ್ತಿದ್ದ ಮೀನುಗಳನ್ನು ಕೆಲವರು ಗಮನಿಸಿದ್ದು, ಬಳಿಕ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಈ ಕುರಿತು ಮಾತನಾಡಿದ ಸುಂಕಲ್ ಪಾಳ್ಯ ನಿವಾಸಿ ದೀಪು ನಾಯರ್, ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದೆ. ಆದರೆ, ಅವರು ಇತರ ಅಧಿಕಾರಿಗಳ ನಂಬರ್ ನೀಡಿ, ಈ ವಿಷಯ ಕುರಿತು ತಿಳಿಸುವಂತೆ ಹೇಳಿದೆ. ಇದು ಹೀಗೆಯೇ ಇದೆ, ಸಮಸ್ಯೆಯನ್ನು ಪರಿಹರಿಸಲಾಗಿಲ್ಲ ಎಂದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಹಿರಿಯ ಅಧಿಕಾರಿಯೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಆದರೆ ಯಾವುದೇ ಉತ್ತರ ಬರಲಿಲ್ಲ. ಕೆರೆಗಳ ನಿರ್ವಹಣೆಯನ್ನು ಬಿಡಿಎಯಿಂದ ಜಿಬಿಎಗೆ ವರ್ಗಾಯಿಸಲಾಗಿದೆ ಎಂಬುದು ತದನಂತರ ಗೊತ್ತಾಯಿತು ಎಂದು ಅವರು ತಿಳಿಸಿದರು.
ಮೃತಪಟ್ಟ ಮೀನುಗಳನ್ನು ಸಂಗ್ರಹಿಸಲು ಕೆಲವು ಕಾರ್ಮಿಕರನ್ನು ಅಧಿಕಾರಿಗಳು ನಿಯೋಜಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಇದು ನಡೆಯುತ್ತಿದೆ. ಈ ವಿಚಾರ ಹೊರಗೆ ಬಾರದಂತೆ ಮಾಡಲಾಗುತ್ತಿದೆ. ಸತ್ತ ಮೀನುಗಳನ್ನು ತೆಗೆದುಹಾಕದಿದ್ದರೆ, ದುರ್ವಾಸನೆ ಅಸಹನೀಯವಾಗುತ್ತಿತ್ತು ಮತ್ತು ಸಮಸ್ಯೆ ದೊಡ್ಡದಾಗುತ್ತಿತ್ತು ಎಂದು ಅವರು ಹೇಳಿದರು.
ಬಿಡಬ್ಲ್ಯೂಸಿಸಿಯ ಕಾರ್ಯನಿರ್ವಾಹಕ ಎಂಜಿನಿಯರ್ (ಕೆರೆಗಳು) ಗೀತಾ ಮಾತನಾಡಿ, ಬಿಜಿಎಸ್ ಆಸ್ಪತ್ರೆ ಬದಿಯ ಬಳಿಯಿರುವ ಬಡಾವಣೆಗಳಲ್ಲಿ ಸೂಕ್ತವಾದ ಒಳಚರಂಡಿಯ ಅಗತ್ಯವಿದೆ. 15.4 ಎಕರೆ ವಿಸ್ತೀರ್ಣದ ಕೆರೆಗೆ ಒಳಚರಂಡಿ ನೀರು ಹರಿಯುವುದನ್ನು ತಡೆಯಲು ತಿರುವು ಮಾರ್ಗವನ್ನು ಸ್ಥಾಪಿಸಲಾಗುವುದು ಎಂದು BWSSB ತಿಳಿಸಿರುವುದಾಗಿ ಹೇಳಿದರು.
ನಾವು ಈ ವಿಷಯವನ್ನು ತಿಳಿಸಿದ್ದೇವೆ ಮತ್ತು ಕೆರೆಯು ಒಳಚರಂಡಿಯಿಂದ ಕಲುಷಿತವಾಗದಂತೆ ನೋಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದೇವೆ. ನಾಗರಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಸಹ ಭರವಸೆ ನೀಡಿದ್ದಾರೆ ಎಂದು ಗೀತಾ ತಿಳಿಸಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಸ್ವಾಯತ್ತ ಸಂಸ್ಥೆಯಾಗಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ನೋಟಿಸ್ ನೀಡುವ ಮೂಲಕ ಮತ್ತು ಬಿಡಬ್ಲ್ಯೂಎಸ್ಎಸ್ಬಿಯನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.“KSPCB ಜಲಮಂಡಳಿಯನ್ನು ತರಾಟೆಗೆ ತೆಗೆದುಕೊಂಡರೆ, ಕಾಮಗಾರಿಗಳು ವೇಗ ಪಡೆಯುತ್ತವೆ ಮತ್ತು ಕೆರೆ ಮಾಲಿನ್ಯವನ್ನು ಸರಿಪಡಿಸಬಹುದು” ಎಂದು ಅಧಿಕಾರಿ ಹೇಳಿದರು.