ಬೆಂಗಳೂರು: ರಾಜ್ಯಕ್ಕೆ ಸೇವೆ ಮಾಡಿರುವ ಹಿರಿಯರ ಅನುಭವ ಹಾಗೂ ಮಾರ್ಗದರ್ಶನ ಕೇಳಬೇಕು" ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಬೆಂಗಳೂರಿನಲ್ಲಿರುವ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಜಗದೀಶ್ ಶೆಟ್ಟರ್, ಸದಾನಂದ ಗೌಡ ಅವರ ನಿವಾಸಕ್ಕೆ ಶಿವಕುಮಾರ್ ಅವರು ಸೋಮವಾರ ಸಂಜೆ ಭೇಟಿ ನೀಡಿ ಆಶೀರ್ವಾದ ಪಡೆದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಭೇಟಿಯ ಬಗ್ಗೆ ಕೇಳಿದಾಗ, "ನಾನು ಮೊಯ್ಲಿ ಅವರನ್ನು ಮಾತ್ರವಲ್ಲ, ಜಗದೀಶ್ ಶೆಟ್ಟರ್, ಸದಾನಂದ ಗೌಡರು ಮತ್ತು ಬೊಮ್ಮಾಯಿ ಅವರನ್ನು ಭೇಟಿ ಮಾಡಿರುವೆ. ಸಮಯ ಕೊಟ್ಟರೆ ಕುಮಾರಸ್ವಾಮಿ ಅವರನ್ನೂ ಭೇಟಿ ಮಾಡುವೆ. ಇವರೆಲ್ಲರೂ ರಾಜ್ಯಕ್ಕೆ ಸೇವೆ ಮಾಡಿದ್ದು, ಅವರಿಗೆ ನೀಡಬೇಕಾದ ಗೌರವ ಕೊಡಲೇಬೇಕು" ಎಂದರು.
"ಈ ನಾಯಕರು ರಾಜ್ಯದ ಹಿತಕ್ಕೆ ಕೆಲಸ ಮಾಡಿದವರು. ಪ್ರತಿಯೊಬ್ಬರೂ ಜನರ ಹಿತಕ್ಕಾಗಿ ನಿರ್ಧಾರ ಕೈಗೊಂಡಿದ್ದಾರೆ. ಉದಾಹರಣೆಗೆ ಸದಾನಂದ ಗೌಡರು ಸಕಾಲ ಜಾರಿಗೆ ತಂದಿದ್ದಾರೆ. ಅವರು ನನಗಿಂತ ಹಿರಿಯರು. ಅವರ ಮಾರ್ಗದರ್ಶನ ಪಡೆಯಲು ಬಂದಿರುವೆ.
ನಮ್ಮ ನಡುವೆ ಪಕ್ಷ ಹಾಗೂ ಸೈದ್ದಾಂತಿಕ ಭಿನ್ನಾಭಿಪ್ರಾಯ ಇರುವುದು ಬೇರೆ ವಿಚಾರ" ಎಂದರು.ಇಂದು ನಡೆದ ಇಂಡಿಯಾ ಒಕ್ಕೂಟ ಸಭೆ ಬಗ್ಗೆ ಕೇಳಿದಾಗ, "ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿ ಬೆಳೆಯಲಿದ್ದು, ನಾವೆಲ್ಲರೂ ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಣೆ ಮಾಡಬೇಕಿದೆ" ಎಂದು ತಿಳಿಸಿದರು.