ಬೆಂಗಳೂರು: ಕ್ರಿಪ್ಟೋ ಕರೆನ್ಸಿ(ಬಿಟ್ ಕಾಯಿನ್)ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಮಂಗಳವಾರ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಅವರ ಇಬ್ಬರು ಪುತ್ರರಿಗೆ ಸಮನ್ಸ್ ಜಾರಿ ಮಾಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಮೊಹಮ್ಮದ್ ಹ್ಯಾರಿಸ್ ನಲಪಾಡ್ ಮತ್ತು ಒಮರ್ ಫಾರೂಕ್ ನಲಪಾಡ್ ಅವರಿಗೆ ಜೂನ್ 11 ರಂದು ಕೇಂದ್ರ ತನಿಖಾ ಸಂಸ್ಥೆಯ ಕಚೇರಿಯ ಮುಂದೆ ಹಾಜರಾಗಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ) ಅಡಿಯಲ್ಲಿ ಹೇಳಿಕೆ ದಾಖಲಿಸುವಂತೆ ಸೂಚಿಸಲಾಗಿದೆ.
ಕಳೆದ ಏಪ್ರಿಲ್ನಲ್ಲಿ ಇದೇ ಪ್ರಕರಣ ಸಂಬಂಧ ಇಡಿ ಮತ್ತು ನಲಪಾಡ್ ಹಾಗೂ ಇತರರ ಮೇಲೆ ಇಡಿ ದಾಳಿ ನಡೆಸಿತ್ತು.
ದಾಳಿ ಬಳಿಕ ಮಾತನಾಡಿದ ಕರ್ನಾಟಕ ಯುವ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಲಪಾಡ್, ತಮ್ಮ ಮತ್ತು ಅವರ ಸಹೋದರನ ಮನೆಯಲ್ಲಿ ಇಡಿ ನಡೆಸಿದ 21 ಗಂಟೆಗಳ ಶೋಧದಲ್ಲಿ ಏನೂ ಸಿಗಲಿಲ್ಲ ಎಂದು ಹೇಳಿದ್ದರು. ಅಲ್ಲದೆ ಇಡಿಯ ಕ್ರಮವನ್ನು "ರಾಜಕೀಯ ಸೇಡು" ಎಂದು ಟೀಕಿಸಿದ್ದರು.
2017 ರ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಚಾರ್ಜ್ಶೀಟ್ ಸಲ್ಲಿಸಿದ್ದು, ಅದರಲ್ಲಿ ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ ಹೆಸರು ಕೂಡ ಸೇರ್ಪಡೆಯಾಗಿದೆ ಎಂದು ತಿಳಿದು ಬಂದಿದೆ.
ಚಾರ್ಜ್ ಶೀಟ್ನಲ್ಲಿ ನಲಪಾಡ್ಗೆ ಹಣ ಸಂದಾಯದ ಬಗ್ಗೆ ಉಲ್ಲೇಖ ಮಾಡಲಾಗಿದ್ದು, ಬಿಟ್ ಕಾಯಿನ್ ನಗದೀಕರಣಕ್ಕೆ ಶ್ರೀಕಿ ಎಂಬಾತ ನಲಪಾಡ್ ಸಂಪರ್ಕ ಮಾಡಿದ್ದನಂತೆ. ನಲಪಾಡ್ ತನ್ನ ಸ್ನೇಹಿತರ ಮೂಲಕ ಹಣ ನಗದೀಕರಣ ಮಾಡಿದ್ದಾರೆ ಎನ್ನುವ ಆರೋಪವಿದ್ದು, ಈ ಬಗ್ಗೆ ಚಾರ್ಜ್ ಶೀಟ್ನಲ್ಲೂ ಉಲ್ಲೇಖ ಮಾಡಲಾಗಿದೆ.