ಬೆಂಗಳೂರು : ಪ್ರಿಯಾಂಕ್ ಖರ್ಗೆ ರಾಜ್ಯದ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಆರ್ ಎಸ್ ಎಸ್ ವಿಚಾರದಲ್ಲಿ ರಾಜ್ಯ ಬಿಜೆಪಿ ಮತ್ತು ಸರ್ಕಾರದ ನಡುವಿನ ವಾಕ್ಸಮರ ಮತ್ತಷ್ಟು ಹೆಚ್ಚಾಗುತ್ತಿದೆ. ರಾಜ್ಯ ಗೃಹ ಇಲಾಖೆ ಒಬ್ಬರು ಅಸಮರ್ಥ ಸಚಿವರ ಕೈಯಲ್ಲಿ ಸಿಲುಕಿಕೊಂಡಿದೆ ಎನ್ನುವ ಬಿಜೆಪಿ ಟೀಕೆಗೆ ತಿರುಗೇಟು ನೀಡಿದ್ದಾರೆ. ನೋಂದಣಿಗೆ ಅಗತ್ಯವಿರುವ ದಾಖಲೆಗಳನ್ನು ರೆಡಿಯಾಗಿ ಇಟ್ಟುಕೊಳ್ಳಲು RSSಗೆ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) ತಿಳಿಸಿ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಅಂದು ಗೊತ್ತಿಲ್ಲ ಸಚಿವರಿದ್ದರು. ಇಂದು ನನಗೆ ಎಲ್ಲವೂ ಗೊತ್ತು ಎನ್ನುವ ಮೈಕ್ ಮಿನಿಸ್ಟರ್ .ಇಂತಹ ಅಸಮರ್ಥ ಸಚಿವರ ಕೈಯಲ್ಲಿ ಸಿಲುಕಿರುವ ಗೃಹ ಇಲಾಖೆಯಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಹೇಗೆ ಸಾಧ್ಯ ಎಂದು ಕರ್ನಾಟಕ ಬಿಜೆಪಿ ಘಟಕ ಟ್ವೀಟ್ ಮಾಡಿತ್ತು.
ಇದಕ್ಕೆ ಕೌಂಟರ್ ಕೊಟ್ಟಿರುವ ಪ್ರಿಯಾಂಕ್ ಖರ್ಗೆ, ಸುಧೀರ್ ಬಂಗೇರ ಎಂಬ ವ್ಯಕ್ತಿಯಿಂದ ಬಂದ ಜೀವ ಬೆದರಿಕೆಯ ಟ್ವೀಟ್ ರೀ ಪೋಸ್ಟ್ ಮಾಡಿದ್ದಾರೆ. ನಾನು ಗೃಹ ಸಚಿವನಾಗಿ ಅಧಿಕಾರ ವಹಿಸಿಕೊಂಡು 48 ಗಂಟೆಗಳು ಕೂಡ ಆಗಿಲ್ಲ, ನಿಮ್ಮ ಭಯ, ನಿಮ್ಮಲ್ಲಿನ ಆತಂಕ, ನಿಮ್ಮಲ್ಲಿನ ದುಗುಡ ಎಲ್ಲವೂ ವ್ಯಕ್ತವಾಗುತ್ತಿದೆ ಮತ್ತು ಈಗಾಗಲೇ RSSನ್ನು ಬಳಸಿಕೊಂಡು ನನ್ನನ್ನು ನಿಂದಿಸುತ್ತಿದ್ದೀರಿ ಹಾಗೂ ನನಗೆ ಜೀವ ಬೆದರಿಕೆ ಹಾಕುತ್ತಿದ್ದೀರಿ. ನೀವು ಮಾಡೋದನ್ನ ಮಾಡಿ. ಮುಖ್ಯವಾಗಿ, ದಯವಿಟ್ಟು ನಿಮ್ಮ Body of individuals ಗೆ ನನ್ನ ನಮಸ್ಕಾರವನ್ನೂ ತಿಳಿಸಿ ಹಾಗು ನಿಮ್ಮ ರಾಜಕೀಯ ಮೇಲಾಧಿಕಾರದ ಸಂಘಟನೆಯ ನೋಂದಣಿಗಾಗಿ ದಾಖಲೆಗಳನ್ನು ಸಿದ್ಧವಾಗಿಡಲು ಹೇಳಿ ಎಂದು ತಿರುಗೇಟು ನೀಡಿದ್ದಾರೆ.
ನಾವು ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸುತ್ತಿಲ್ಲ. ಬದಲಿಗೆ, ಸಂಘದ ಚಟುವಟಿಕೆಯ ವಿಚಾರದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕಾಗಿ ಒತ್ತಾಯಿಸುತ್ತಿದ್ದೇವೆ ಎಂದು ಖರ್ಗೆ ಸ್ಪಷ್ಟ ಪಡಿಸಿದ್ದಾರೆ.
ಕಳೆದ ವರ್ಷದ ವಿಜಯದಶಮಿಯ ಸಂಘದ ಪಥಸಂಚಲನದ ಕಾರ್ಯಕ್ರಮದ ನಂತರ ಪ್ರಿಯಾಂಕ್ ಖರ್ಗೆ ಮತ್ತು ಆರ್ಎಸ್ಎಸ್/ಬಿಜೆಪಿ ನಡುವಿನ ಸಂಘರ್ಷ ತಾರಕಕ್ಕೇರಿತ್ತು. ಯಾವುದೇ ಸರ್ಕಾರಿ ಸ್ಥಳಗಳಲ್ಲಿ, ಮುಜರಾಯಿ ದೇವಾಲಯಗಳ ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಡೆಸುವ ಮುನ್ನ, ಸರ್ಕಾರದ ಅನುಮತಿಯನ್ನು ಪಡೆಯಬೇಕು ಎಂದು ಅಂದಿನ ಸಿದ್ದರಾಮಯ್ಯ ಸರ್ಕಾರ ಕಾನೂನು ಜಾರಿಗೆ ತಂದಿತ್ತು. ಇದು, ಪ್ರಿಯಾಂಕ್ ಮತ್ತು ಬಿಜೆಪಿ ನಡುವಿನ ತಿಕ್ಕಾಟಕ್ಕೆ ಕಾರಣವಾಗಿತ್ತು.
ಚಿತ್ತಾಪುರದಲ್ಲಿಆರ್ ಎಎಸ್ ಪಥಸಂಚಲನ: ಪ್ರಿಯಾಂಕ್ ಖರ್ಗೆಯವರ ತವರು ಕ್ಷೇತ್ರ ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನಕ್ಕೆ ಸರ್ಕಾರ ಅನುಮತಿಯನ್ನು ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಸಂಘ ಕೋರ್ಟ್ ಮೆಟ್ಟಲೇರಿತ್ತು. ನ್ಯಾಯಾಲಯ, ಕೆಲವೊಂದು ಷರತ್ತುಗಳನ್ನು ವಿಧಿಸಿ, ಅನುಮತಿಯನ್ನು ನೀಡಿತ್ತು. ಪ್ರಿಯಾಂಕ್ ಖರ್ಗೆ ಮತ್ತು ಸಂಘದ ನಡುವಿನ ಸಂಘರ್ಷ, ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯನ್ನು ಮಾಡಿತ್ತು. ಈಗ, ಪ್ರಿಯಾಂಕ್ ಖರ್ಗೆಯವರು ಗೃಹ ಸಚಿವರಾಗಿರುವ ಹಿನ್ನಲೆಯಲ್ಲಿ ಸಂಘದ ವಿಚಾರದಲ್ಲಿ ಬಿಜೆಪಿ ಮತ್ತು ಸರ್ಕಾರದ ನಡುವೆ, ವಾಕ್ಸಮರ ಇನ್ನಷ್ಟು ಜಾಸ್ತಿಯಾಗಲಿದೆಯಾ ಎನ್ನುವುದು ಪ್ರಶ್ನೆಯಾಗಿದೆ.