ಬೆಂಗಳೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಪದತ್ಯಾಗಕ್ಕೂ ಮುನ್ನವೇ ಕುರುಬ ಸಮುದಾಯಕ್ಕೆ ಭರ್ಜರಿ ಗಿಫ್ಟ್ ನೀಡಿದ್ದು, ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ತರಾತುರಿಯಲ್ಲೇ ಕುರುಬ ಸಮುದಾಯಕ್ಕೆ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ನೂತನ ಸಿಎಂ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರಕ್ಕೂ ಒಂದು ದಿನ ಮೊದಲೇ ಆರ್ಥಿಕ ಇಲಾಖೆಯು ವಿವಿಧ ಸಂಸ್ಥೆಗಳಿಗೆ ₹71.85 ಕೋಟಿ ಅನುದಾನ ಮಂಜೂರು ಮಾಡಿದೆ. ಸಮುದಾಯ ಭವನ ಹಾಸ್ಟೆಲ್ ನಿರ್ಮಾಣಕ್ಕೆ ಮೀಸಲಿಟ್ಟ ಬಜೆಟ್ನ ಶೇ 52 ರಷ್ಟು ಅನುದಾನ ಇದೀಗ ಕೆಲವೇ ಸಮುದಾಯದ ಸಂಸ್ಥೆಗಳಿಗೆ ಮಂಜೂರಾಗಿದೆ.
2026-27 ಸಾಲಿನ ಬಜೆಟ್ನಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ 136 ಕೋಟಿ ಮೀಸಲಿಟ್ಟಿದ್ದ ಸರ್ಕಾರ ಈ ಪೈಕಿ ಶೇ 52 ರಷ್ಟು ಅನುದಾನವನ್ನು ಕೇವಲ ಮೂರ್ನಾಲ್ಕು ಸಮುದಾಯಗಳಿಗೆ ಮಾತ್ರ ಮಂಜೂರು ಮಾಡಿದೆ. 8 ಮಡಿವಾಳ ಸಮುದಾಯ ಸಂಘಗಳು, 2 ಯಾದವ ಸಮುದಾಯ ಸಂಘಗಳು, 1 ಹೆಳವ ಸಮುದಾಯ ಸಂಘ, 1 ಸವಿತಾ ಸಮಾಜದ ಸಂಘ ಮತ್ತು ಟೀ ನರಸೀಪುರ ತಾಲೂಕಿಗೆ 13 ಸಮುದಾಯ ಭವನಗಳನ್ನು ಮಂಜೂರು ಮಾಡಲಾಗಿದೆ. ಜೊತೆಗೆ ಕುರುಬ ಸಮುದಾಯದ 89 ಸಂಘ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಗದಗದ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ಗೂ ₹50 ಲಕ್ಷ ಅನುದಾನ ಬಿಡುಗಡೆಯಾಗಿದೆ ಎನ್ನಲಾಗಿದೆ.
ತರಾತುರಿಯಲ್ಲಿ ಅನುದಾನ ಮಂಜೂರು
ಹಿಂದುಳಿದ ವರ್ಗಗಳ ಸಮುದಾಯದ ಅಡಿಯಲ್ಲಿ ಸಾವಿರಕ್ಕೂ ಹೆಚ್ಚು ಜಾತಿಗಳು ಬರುತ್ತವೆ. ಪ್ರವರ್ಗ 1ರಲ್ಲಿಯೇ 147 ಜಾತಿಗಳಿದ್ದು, ಇವೆಲ್ಲವನ್ನೂ ಕಡೆಗಣಿಸಿ ಕೇವಲ ಮೂರ್ನಾಲ್ಕು ಸಮುದಾಯಕ್ಕೆ ತರಾತುರಿಯಲ್ಲಿ ಅನುದಾನ ಮಂಜೂರು ಮಾಡಲಾಗಿದ್ದು, ಅನುಮಾನ ವ್ಯಕ್ತವಾಗಿದೆ. ಹಿಂದುಳಿದ ವರ್ಗಗಳ ಪೈಕಿ ಕುರುಬ ಸಮುದಾಯಕ್ಕೆ ಹೆಚ್ಚಿನ ಅನುದಾನ ನೀಡಿದ್ದು, ಅಧಿಕಾರದಿಂದ ಇಳಿಯುವ ವೇಳೆ ತರಾತುರಿಯಲ್ಲಿ ಸಿದ್ದರಾಮಯ್ಯ ಈ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.