ನವದೆಹಲಿ: ಗುರುವಾರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಐವರು ವಿಶೇಷ ಚೇತನರಿಗೆ ವಿಮಾನದಲ್ಲಿ ಪ್ರಯಾಣಿಸಲು ಪ್ರಮುಖ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ ಕ್ಯಾಥೆ ಪೆಸಿಫಿಕ್ ನಿರಾಕರಿಸಿದೆ. ಅಂಗವೈಕಲ್ಯ ಮತ್ತು ಹೆಚ್ಚುವರಿ ಸಾಮಾನುಗಳಿಗೆ ದೋಷಪೂರಿತ ಪಾವತಿ ಲಿಂಕ್ ಕಾರಣದಿಂದ ವಿಮಾನದಲ್ಲಿ ಸಂಚರಿಸಲು ಕ್ಯಾಥೆ ಪೆಸಿಫಿಕ್ ಪ್ರವೇಶ ನಿರಾಕರಿಸಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಈ ಮಧ್ಯೆ ವಿಮಾನ ಹತ್ತಲು ಯುವಕರ ತಂಡ ಸಮಯಕ್ಕೆ ಸರಿಯಾಗಿ ಪಾವತಿ ಮಾಡಿರಲಿಲ್ಲ ಎಂದು ವಿಮಾನಯಾನ ಸಂಸ್ಥೆ ಹೇಳಿಕೊಂಡಿದೆ.
26 ರಿಂದ 33 ವರ್ಷ ವಯಸ್ಸಿನ ಈ ಯುವಕರ ತಂಡ ಯುಎಸ್ನಾದ್ಯಂತ ಮೂರು ತಿಂಗಳ ಸಂಗೀತ ಪ್ರವಾಸದಲ್ಲಿ ಭಾಗವಹಿಸಲು ಹೊರಟಿತ್ತು. ಅವರ ಉದ್ಯೋಗದಾತ ಸಮರ್ಥನಂ ಟ್ರಸ್ಟ್ ಫಾರ್ ದಿ ಡಿಸೇಬಲ್ಡ್, ಅವರಿಗಾಗಿ ಬ್ರಿಟಿಷ್ ಏರ್ವೇಸ್ ಮೂಲಕ 6,24,430 ರೂ. ಪಾವತಿಸಿ ಸ್ಪಾಟ್ ಟಿಕೆಟ್ಗಳನ್ನು ಬುಕ್ ಮಾಡಿದೆ. ಇದರ ಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿ ಮಹಾಂತೇಶ್ ಜಿ ಕೆ ಅಸಮಾಧಾನಗೊಂಡಿದ್ದು, ಅಂಗವೈಕಲ್ಯ ಪ್ರಯಾಣಿಕರ ವಿರುದ್ಧ ನಿರ್ಲಕ್ಷ್ಯ ತೋರಿದ ಕ್ಯಾಥೆ ಪೆಸಿಫಿಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಯೋಜಿಸಿದ್ದಾರೆ.
ಬುಧವಾರ ರಾತ್ರಿ 11 ಗಂಟೆಯ ನಂತರ ಟರ್ಮಿನಲ್ 2 ರಲ್ಲಿ ಈ ಘಟನೆ ನಡೆದಿದ್ದು, ವಿಶ್ವ ಅಂಧರ ಕ್ರಿಕೆಟ್ ಚಾಂಪಿಯನ್ ಲೋಕೇಶ ಮತ್ತು ಸಂಪೂರ್ಣ ದೃಷ್ಟಿಹೀನ ಸಂಗೀತಗಾರರಾದ ಪ್ರಣಯ್ ಥಾಪಾ (ಪಶ್ಚಿಮ ಬಂಗಾಳ ಮೂಲದವರು), ನಾಮ್ಚಾಂಗ್ಬುಯಿಂಗ್ ಜೆಮೆ (ಅಸ್ಸಾಂ) ಮತ್ತು ಕರ್ನಾಟಕದ ಅಶೋಕ ಹನುಮಂತಪ್ಪ (ದಾವಣಗೆರೆ) ಮತ್ತು ಬಡೇಸಾಬ್ ನದಾಫ್ (ಕರಡಿಗುಡ್ಡ) ಅವರು ಗುರುವಾರ ಬೆಳಗಿನ ಜಾವ 1.15 ಕ್ಕೆ ಹೊರಡಬೇಕಿದ್ದ ತಮ್ಮ ವಿಮಾನ CX-624 ಗಾಗಿ ಚೆಕ್-ಇನ್ ಗಾಗಿ ಟರ್ಮಿನಲ್ 2 ರಲ್ಲಿರುವ ಕ್ಯಾಥೆ ಪೆಸಿಫಿಕ್ ಕೌಂಟರ್ಗೆ ಬಂದಿದ್ದಾರೆ. ವಿಮಾನಯಾನ ಸಂಸ್ಥೆಯು ಪ್ರತಿ ವ್ಯಕ್ತಿಗೆ ಗರಿಷ್ಠ 23 ಕೆಜಿ ಲಗೇಜ್ ಅನ್ನು ಅನುಮತಿಸಿದೆ. ಐವರು ವಿಮಾನ ಹತ್ತಲು ನಿರಾಕರಿಸಿದ್ದಲ್ಲದೆ, ಟರ್ಮಿನಲ್ ಕಟ್ಟಡದಿಂದ ಹೊರಹೋಗುವಂತೆ ವಿಮಾನಯಾನ ಸಿಬ್ಬಂದಿ ಆದೇಶಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕತ್ತಲೆಯಲ್ಲಿ ಹೊರಗೆ ಸಿಲುಕಿಕೊಂಡಿದ್ದ ಸಂಗೀತಗಾರರು ಈ ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು ಎಂದು ಲೋಕೇಶ ಹೇಳಿದರು. ನಮ್ಮ ಸಾಮಾನುಗಳ ತೂಕ ಮಿತಿಯಲ್ಲಿದೆ. ಆದರೆ ಅನೇಕ ಸಣ್ಣ ಸಣ್ಣ ವಸ್ತುಗಳನ್ನು ಕೊಂಡೊಯ್ಯುತ್ತಿದ್ದು, ಅದಕ್ಕೆ ಹೆಚ್ಚುವರಿ ಶುಲ್ಕ ಪಾವತಿಸಬೇಕು ಎಂದು ವಿಮಾನಯಾನ ಚೆಕ್-ಇನ್ ಸಿಬ್ಬಂದಿ ಹೇಳಿದ್ದಾರೆ. ಮೊದಲು ಅದಕ್ಕೆ 60,000 ರೂ.ಗಳಿಗಿಂತ ಸ್ವಲ್ಪ ಹೆಚ್ಚು ಎಂದು ನಮಗೆ ತಿಳಿಸಲಾಯಿತು. ಅದಕ್ಕೆ ನಾವು ಒಪ್ಪಿಕೊಂಡೆವು. ನಂತರ ಸಂಪೂರ್ಣವಾಗಿ 1,12,000 ರೂ. ಪಾವತಿಸಬೇಕೆಂದು ಅವರು ಹೇಳಿದರು. ಕಾರ್ಯ ನಿರ್ವಹಿಸದ ಲಿಂಕ್ ಮೂಲಕ ಪಾವತಿಸಲು ನಮ್ಮನ್ನು ಕೇಳಲಾಯಿತು. ನಾವು ಹತ್ತು ಬಾರಿ ಪ್ರಯತ್ನಿಸಿದೆವು. ಪ್ರಸ್ತುತ ಅಮೆರಿಕದಲ್ಲಿರುವ ನಮ್ಮ ಸಂಘದ ಸಿಬ್ಬಂದಿ ಕೂಡ ಪ್ರಯತ್ನಿಸಿದರು ಆದರೆ ಅದು ಕೆಲಸ ಮಾಡಲಿಲ್ಲ ಎಂದು ತಿಳಿಸಿದರು.
ಕ್ಯೂಆರ್ ಕೋಡ್ ಆಯ್ಕೆ ಲಭ್ಯವಿದ್ದರೂ, ಕೇವಲ ಒಂದು ಸ್ಕ್ಯಾನ್ ಮೂಲಕ ಪಾವತಿ ಮಾಡಬೇಕೆಂದು ತಿಳಿಸಲಾಯಿತು. ಸಂಘವು ಅಕೌಂಟ್ ಗೆ ಹಣ ಕಳುಹಿಸಿತು. ಕ್ರೆಡಿಟ್ ಕಾರ್ಡ್ ವಿವರಗಳನ್ನು ಕಳುಹಿಸಿದೆ ಆದರೆ ಅವರು ಸ್ವೀಕರಿಸಲಿಲ್ಲ ಅಂತಿಮವಾಗಿ ನಾನು ಅವರಲ್ಲಿ ನಾಲ್ವರು ಸಾಮಾನುಗಳಿಲ್ಲದೆ ಪ್ರಯಾಣಿಸಲು ಅವಕಾಶ ನೀಡಬೇಕೆಂದು ಸೂಚಿಸಿದೆ ಮತ್ತು ಹೆಚ್ಚುವರಿ ಸಾಮಾನು ಪಾವತಿಯ ನಂತರ ಐದನೇ ವ್ಯಕ್ತಿ ಮರುದಿನ ಪ್ರಯಾಣಿಸುತ್ತಾನೆ ಎಂದು ಕೇಳಿಕೊಂಡೆ. ಆರಂಭದಲ್ಲಿ ಒಪ್ಪಿಕೊಂಡರು ಆದರೆ ನಂತರ ತಮ್ಮ ಮನಸ್ಸನ್ನು ಬದಲಾಯಿಸಿದರು ಎಂದು ಅವರ ಆಗಮನಕ್ಕಾಗಿ ಅಮೆರಿಕದಲ್ಲಿ ಕಾಯುತ್ತಿದ್ದ ಮಹಾಂತೇಶ್ ತಿಳಿಸಿದರು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಸಿಬ್ಬಂದಿ ನಮ್ಮನ್ನು ಬೆಂಬಲಿಸಿದರು. ವಿಮಾನದಲ್ಲಿ ಪ್ರಯಾಣಿಸಲು ಅನುಮತಿಸುವಂತೆ ಟರ್ಮಿನಲ್ ಮ್ಯಾನೇಜರ್ ಅವರನ್ನು ಪದೇ ಪದೇ ಮನವಿ ಮಾಡಿಕೊಂಡರು ಎಂದು ತಂಡ ಹೇಳಿದೆ. ಇದು ಸ್ಪಷ್ಟ ತಾರತಮ್ಯ. ಕಳೆದ ಎರಡು ದಶಕಗಳಿಂದ ನಾನು ಪ್ರಪಂಚದಾದ್ಯಂತ ಪ್ರಯಾಣಿಸುತ್ತಿದ್ದೇನೆ. ನನ್ನ ಸಿಬ್ಬಂದಿಯೂ ಹಾಗೆಯೇ ಇದ್ದಾರೆ. ನಮಗೆ ವೀಲ್ಚೇರ್ಗಳು ಅಥವಾ ಹೆಚ್ಚುವರಿ ಸಹಾಯವನ್ನು ನೀಡುವ ವಿಮಾನ ನಿಲ್ದಾಣಗಳು ಮಾತ್ರ ಇವೆ. ಆದರೆ ಪ್ರಯಾಣಕ್ಕೆ ಅವಕಾಶ ನೀಡುತ್ತಿಲ್ಲ. ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಮಹಾಂತೇಶ್ ಹೇಳಿದರು.
ಘಟನೆಯ ಕುರಿತು ಪ್ರತಿಕ್ರಿಯಿಸಿದ ವಿಮಾನಯಾನ ವಕ್ತಾರರು, ಇದು ಕ್ಯಾಥೆ ಪೆಸಿಫಿಕ್ಗೆ ಗೊತ್ತಾಗಿದೆ. ಇದು ಪ್ರಯಾಣಿಕರ ಅಂಗವೈಕಲ್ಯಕ್ಕೆ ಸಂಬಂಧಿಸಿದಲ್ಲ. ಗುಂಪು ಮಿತಿ ಮೀರಿದ ಸಾಮಾನುಗಳೊಂದಿಗೆ ಪ್ರಯಾಣಿಸುತ್ತಿತ್ತು. ಪರಿಣಾಮವಾಗಿ, ಆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡಿಲ್ಲ ಎಂದು ಹೇಳಿದರು. ವಿಮಾನ ಹೊರಡುವ ಮುನ್ನ ಸರಿಯಾಗಿ ಪೇಮೆಂಟ್ ಮಾಡದ ಕಾರಣ ಅವರು ಪ್ರಯಾಣಿಕರಿಗೆ ಅವಕಾಶ ನೀಡಿಲ್ಲ. ಇದರಿಂದ ಉಂಟಾದ ತೊಂದರೆ ಮತ್ತು ಅನಾನುಕೂಲತೆಗಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೊಂಡಿದೆ. ಕ್ಯಾಥೆ ಪೆಸಿಫಿಕ್ ಎಲ್ಲಾ ಗ್ರಾಹಕರನ್ನು ಘನತೆ, ಕಾಳಜಿ ಮತ್ತು ಗೌರವದಿಂದ ನಡೆಸಿಕೊಳ್ಳಲು ಬದ್ಧವಾಗಿದೆ ಎಂದು ಸಂಸ್ಥೆ ಹೇಳಿದೆ.