ಆರ್ಎಸ್ಎಸ್ ತನ್ನನ್ನು ಅಧಿಕೃತವಾಗಿ ನೋಂದಾಯಿಸಿಕೊಳ್ಳಬೇಕು, ತನ್ನ ಕಾನೂನುಬದ್ಧ ಸ್ಥಾನಮಾನವನ್ನು ಸ್ಪಷ್ಟಪಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮೋಹನ್ ಭಾಗವತ್ ಅವರಿಗೆ ಬರೆದಿರುವ ಪತ್ರಕ್ಕೆ ಬಿಜೆಪಿ ಟೀಕಿಸಿದೆ.
ಎಕ್ಸ್ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ಪ್ರಿಯಾಂಕ್ ಖರ್ಗೆ ಅವರನ್ನು ಟೀಕಿಸಿ, ಪ್ರಥಮ ಬಾರಿಗೆ ಗೃಹ ಸಚಿವರಾಗಿರುವ ಉತ್ಸಾಹದಲ್ಲಿ ಅವರು ತಮ್ಮ ನಾಯಕ ರಾಹುಲ್ ಗಾಂಧಿ ಅವರ ಮೆಚ್ಚುಗೆ ಗಳಿಸಲು ಪ್ರಯತ್ನಿಸುತ್ತಿರುವಂತೆ ಕಾಣುತ್ತದೆ ಎಂದು ಹೇಳಿತು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಆರ್ಎಸ್ಎಸ್ ಬಗ್ಗೆ ಮಾತನಾಡದೆ ಇದ್ದರೆ ನಿದ್ದೆ ಬರುವುದಿಲ್ಲವೆನ್ನಿಸುತ್ತದೆ. ಹಿಂಬಾಗಿಲಿನಿಂದ Karnataka Forum for Dignity ಮತ್ತು Popular Front of India ಮುಂತಾದ ರಾಷ್ಟ್ರವಿರೋಧಿ ಸಂಘಟನೆಗಳನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಲ್ಪಡುವ ಕಾಂಗ್ರೆಸ್ ಇಂದು ದೇಶಭಕ್ತ ಸಂಸ್ಥೆಯಾದ ಆರ್ಎಸ್ಎಸ್ನ ನೋಂದಣಿಯ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಆರೋಪಿಸಿದೆ.
ಆರ್ಎಸ್ಎಸ್ ಸ್ಥಾಪನೆಯಾದ ದಿನದಿಂದಲೂ ಲಕ್ಷಾಂತರ ಸ್ವಯಂಸೇವಕರು ದೇಶಸೇವೆಗೆ ತಮ್ಮ ಜೀವವನ್ನೇ ಪಣಕ್ಕಿಟ್ಟಿದ್ದಾರೆ ಎಂದು ಬಿಜೆಪಿ ಹೇಳಿದೆ.
ಸಂವಿಧಾನದ ವಿವಿಧ ವಿಧಿಗಳು ಸಂಘಗಳು ಮತ್ತು ಸಂಸ್ಥೆಗಳ ನೋಂದಣಿ ಕಡ್ಡಾಯವಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಶತಮಾನ ಪೂರೈಸಿದ ಸಂಸ್ಥೆಯನ್ನು ರಾಜಕೀಯ ಅಧಿಕಾರದ ಮೂಲಕ ನಿಯಂತ್ರಿಸಬಹುದು ಎಂದು ಭಾವಿಸುವುದು ಮೂರ್ಖತನದ ಪರಮಾವಧಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಆರ್ಎಸ್ಎಸ್ನ ನೋಂದಣಿ ಅಥವಾ ಲೆಕ್ಕಪರಿಶೋಧನೆ ಬಗ್ಗೆ ಪ್ರಶ್ನಿಸಿದ ಮೊದಲ ವ್ಯಕ್ತಿ ಪ್ರಿಯಾಂಕ್ ಖರ್ಗೆ ಅಲ್ಲ ಎಂದು ಟೀಕಿಸಿದರು.
ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಂಘಟನೆಗಳು ಮತ್ತು ಸಂಘಗಳನ್ನು ರಚಿಸುವ ಹಕ್ಕನ್ನು ನೀಡಿದೆ. ಈ ಹಕ್ಕನ್ನು ಪ್ರಿಯಾಂಕ್ ಖರ್ಗೆ ನೀಡಿಲ್ಲ; ಅದನ್ನು ಬಿ ಆರ್ ಅಂಬೇಡ್ಕರ್ ನೀಡಿದ್ದಾರೆ ಎಂದು ಹೇಳಿದರು.