ಬೆಂಗಳೂರು: ಸೈಬರ್ ಅಪರಾಧದ ವಿರುದ್ಧದ ಪ್ರಮುಖ ಕಾರ್ಯಾಚರಣೆಯಲ್ಲಿ, "ಡಿಜಿಟಲ್ ಅರೆಸ್ಟ್" ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಗ್ಯಾಂಗ್ ಅನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯ ಸಮಯದಲ್ಲಿ, ವಂಚಿಸಿದ್ದ ಮೊತ್ತದಲ್ಲಿ 1,03,142 ರೂ.ಗಳನ್ನು ಫ್ರೀಜ್ ಮಾಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಮೂರು ಮೊಬೈಲ್ ಫೋನ್ಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜನವರಿ 19, 2026 ರಂದು, ದೂರುದಾರರೊಬ್ಬರು ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್(NCRP) ನಲ್ಲಿ ದಾಖಲಿಸಿದ ದೂರಿನ ಆಧಾರದ ಮೇಲೆ ಪೊಲೀಸರು ಸೈಬರ್ ವಂಚನೆ ಪ್ರಕರಣ ದಾಖಲಿಸಿದ್ದರು ಎಂದು ಅವರು ಹೇಳಿದ್ದಾರೆ.
ದೂರಿನ ಪ್ರಕಾರ, ಜನವರಿ 8, 2026 ರಂದು, ಟೆಲಿಕಾಂ ಕಂಪನಿಯ ಉದ್ಯೋಗಿ ಎಂದು ಹೇಳಿಕೊಂಡ ಮಹಿಳೆಯೊಬ್ಬರು ತಮಗೆ ಕರೆ ಮಾಡಿ, ಬೆಂಗಳೂರಿನಲ್ಲಿ ಅಕ್ರಮ ಗೇಮಿಂಗ್ ಚಟುವಟಿಕೆಗಳಿಗೆ ನಿಮ್ಮ ಆಧಾರ್ ಕಾರ್ಡ್ ಬಳಸಿ ನೀಡಲಾದ ಮೊಬೈಲ್ ಸಂಖ್ಯೆಯನ್ನು ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ.
ನಂತರ ದೂರುದಾರರನ್ನು, ಬೆಂಗಳೂರಿನ ಇಂದಿರಾ ನಗರ ಪೊಲೀಸ್ ಠಾಣೆಯ ಸಬ್-ಇನ್ಸ್ಪೆಕ್ಟರ್ ಎಂದು ಪರಿಚಯಿಸಿಕೊಂಡ ವ್ಯಕ್ತಿಗೆ ವಿಡಿಯೋ ಕರೆಯ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ತರುವಾಯ, ಇತರ ವಂಚಕರು ಹಿರಿಯ ಪೊಲೀಸ್ ಅಧಿಕಾರಿಗಳಂತೆ ನಟಿಸಿ, ದೂರುದಾರರಿಗೆ ನಿಮ್ಮ ವಿರುದ್ಧ ತನಿಖೆ ನಡೆಯುತ್ತಿದೆ ಹೇಳುವ ಮೂಲಕ ಬೆದರಿಸಿದ್ದಾರೆ.
ವಂಚಕರು ದೂರುದಾರರನ್ನು ನಿರಂತರ ವಿಡಿಯೋ ಕಣ್ಗಾವಲಿನಲ್ಲಿ ಇರಿಸಿಕೊಂಡು ಅವರ ಬ್ಯಾಂಕ್ ಖಾತೆಗಳು, ಸ್ಥಿರ ಠೇವಣಿಗಳು, ಮ್ಯೂಚುವಲ್ ಫಂಡ್ಗಳು, ಷೇರುಗಳು ಮತ್ತು ಇತರ ಸ್ವತ್ತುಗಳ ವಿವರಗಳನ್ನು ಪಡೆದಿದ್ದಾರೆ. ಬಳಿಕ ಅವರ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳು ಮತ್ತು ಯುಪಿಐ ಐಡಿಗಳಿಗೆ ವರ್ಗಾಯಿಸಲು ಸೂಚಿಸಿದ್ದಾರೆ.
ಹಣವನ್ನು ಪರಿಶೀಲನೆಗಾಗಿ ಆರ್ಬಿಐ ಲೆಕ್ಕಪರಿಶೋಧಕರ ಎಸ್ಕ್ರೊ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ ಮತ್ತು ತನಿಖೆಯ ನಂತರ ಹಿಂತಿರುಗಿಸಲಾಗುವುದು ಎಂದು ಆರೋಪಿಗಳು ಹೇಳಿಕೊಂಡಿದ್ದಾರೆ. ದೂರುದಾರರ ವಿಶ್ವಾಸ ಗಳಿಸಲು, ಅವರು ನಕಲಿ ಆರ್ಬಿಐ ರಶೀದಿಗಳನ್ನು ಸಹ ಕಳುಹಿಸಿದ್ದಾರೆ.
ಜನವರಿ 9 ಮತ್ತು ಜನವರಿ 16, 2026 ರ ನಡುವೆ, ದೂರುದಾರರು, ವಂಚಕರ ವಿವಿಧ ಖಾತೆಗಳಿಗೆ ಒಟ್ಟು 15,31,997 ರೂ.ಗಳನ್ನು ವರ್ಗಾಯಿಸಿದ್ದಾರೆ. ನಂತರ ಅವರಿಗೆ ಟೆಲಿಕಾಂ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಮೋಸ ಮಾಡಿದ್ದಾರೆ ಎಂದು ಅರಿವಾಗಿದೆ.
ಅಂಕಿತ್ ಹೆಸರಿನಲ್ಲಿರುವ ಯೂನಿಯನ್ ಬ್ಯಾಂಕ್ ಖಾತೆಗೆ 1,98,000 ರೂ. ಸಿಕ್ಕಿದೆ. ಅಮನ್ ಕುಮಾರ್ ಹೆಸರಿನಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ಖಾತೆಯಲ್ಲಿ 98,000 ರೂ. ಸಿಕ್ಕಿದೆ.
ತಾಂತ್ರಿಕ ಕಣ್ಗಾವಲು ಮತ್ತು ಸ್ಥಳೀಯ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಪೊಲೀಸ್ ತಂಡವು ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಪೋಸ್ಟ್ ಮಿಘೋಲಿಯ ವಿಲೇಜ್ ದೀಪಾರಿಯಲ್ಲಿ ದಾಳಿ ನಡೆಸಿ ಆರೋಪಿ ಅಂಕಿತ್ನನ್ನು ಬಂಧಿಸಿಗೆ. ವಿಚಾರಣೆಯ ಸಮಯದಲ್ಲಿ, ಸೈಬರ್ ವಂಚನೆಗಳಲ್ಲಿ ಬಳಸುವ ಮ್ಯೂಲ್ ಬ್ಯಾಂಕ್ ಖಾತೆಗಳನ್ನು ವ್ಯವಸ್ಥೆ ಮಾಡಿದ ಮೊಹಮ್ಮದ್ ನೂರ್ ಆಲಂಗಾಗಿ ತಾನು ಕೆಲಸ ಮಾಡಿದ್ದೇನೆ ಎಂದು ಬಹಿರಂಗಪಡಿಸಿದ್ದಾನೆ. ಅಂಕಿತ್ ನಾಲ್ಕು ಬ್ಯಾಂಕ್ ಖಾತೆಗಳು, ಬ್ಯಾಂಕಿಂಗ್ ದಾಖಲೆಗಳು, ಸಿಮ್ ಕಾರ್ಡ್ಗಳು, ಆಧಾರ್ ಕಾರ್ಡ್ ಪ್ರತಿಗಳು ಮತ್ತು ಒಪ್ಪಿಗೆ ಪತ್ರಗಳನ್ನು ಒದಗಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.
ಹೆಚ್ಚಿನ ತನಿಖೆಯ ಸಮಯದಲ್ಲಿ, ಮತ್ತೊಬ್ಬ ಆರೋಪಿ ಸೈಮ್ ಅನ್ಸಾರಿಯನ್ನು ಬಂಧಿಸಲಾಗಿದ್ದು, ಸೈಬರ್ ವಂಚನೆ ಚಟುವಟಿಕೆಗೆ ಬಳಸಲು ಅವನು ತನ್ನ ಬ್ಯಾಂಕ್ ಖಾತೆಯನ್ನು ಒದಗಿಸಿದ್ದನು ಮತ್ತು ಸ್ನ್ಯಾಪ್ಚಾಟ್ ಮೂಲಕ ಗ್ಯಾಂಗ್ನ ನಿರ್ವಾಹಕರೊಂದಿಗೆ ಸಂಪರ್ಕದಲ್ಲಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿಂಗ್ಪಿನ್ ಮೊಹಮ್ಮದ್ ನೂರ್ ಆಲಂನನ್ನು ಫರಿದಾಬಾದ್ನ ಇಸ್ಮಾಯಿಲ್ಪುರದಲ್ಲಿ ಬಂಧಿಸಲಾಯಿತು. ತನಿಖೆಯಲ್ಲಿ ಅವನು ಮ್ಯೂಲ್ ಖಾತೆಗಳ ವ್ಯವಸ್ಥೆ ಮಾಡಿದ್ದಾನೆ ಮತ್ತು ಪಾಕಿಸ್ತಾನ ಮೂಲದ ಬಿಲಾಲ್ ಎಂಬ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದನು ಎಂದು ತಿಳಿದುಬಂದಿದೆ.
ವಂಚನೆಯ ಹಣವನ್ನು ಮೊದಲು ಅವನು ವ್ಯವಸ್ಥೆ ಮಾಡಿದ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ನೂರ್ ಆಲಂ ತಿಳಿಸಿದ್ದಾನೆ. ನಂತರ ಅವನು ಹಣವನ್ನು USDT (ಕ್ರಿಪ್ಟೋಕರೆನ್ಸಿ) ಆಗಿ ಪರಿವರ್ತಿಸಿ ಪಾಕಿಸ್ತಾನದ ಬಿಲಾಲ್ಗೆ ವರ್ಗಾಯಿಸಿದ್ದಾನೆ. ಪ್ರತಿಯಾಗಿ, ಅವನು USDT ಯಲ್ಲಿ ಕಮಿಷನ್ ಪಡೆದಿದ್ದು, ಅದನ್ನು ವಿವಿಧ ಬ್ಯಾಂಕ್ ಖಾತೆಗಳ ಮೂಲಕ ನಗದು ರೂಪದಲ್ಲಿ ಪಡೆದಿದ್ದಾನೆ.