'ಡಿಜಿಟಲ್ ಅರೆಸ್ಟ್': ₹84 ಲಕ್ಷ ಕಳೆದುಕೊಳ್ಳುತ್ತಿದ್ದ ವೃದ್ಧ ದಂಪತಿ ರಕ್ಷಿಸಿದ ಪೊಲೀಸರು, ಬ್ಯಾಂಕ್ ಮ್ಯಾನೇಜರ್!

ಉತ್ತರ ಪ್ರದೇಶದ ಸಿಐಡಿ ಪೊಲೀಸರಂತೆ ನಟಿಸಿದ ವಂಚಕರು, ಹಣವನ್ನು ವರ್ಗಾಯಿಸಲು ವಿಫಲವಾದರೆ ಬಂಧಿಸಲಾಗುವುದು ಎಂದು ಸಂತ್ರಸ್ತರನ್ನು ಬೆದರಿಸಿದ್ದಾರೆ.
Digital arrest
ಡಿಜಿಟಲ್ ಅರೆಸ್ಟ್
Updated on

ಮಂಗಳೂರು: ಮುಲ್ಕಿ ಪೊಲೀಸರು ಮತ್ತು ಬ್ಯಾಂಕ್ ಮ್ಯಾನೇಜರ್ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಆನ್‌ಲೈನ್ 'ಡಿಜಿಟಲ್ ಅರೆಸ್ಟ್' ಹಗರಣವನ್ನು ವಿಫಲಗೊಳಿಸಿದ್ದು, ಲಕ್ಷಾಂತರ ರೂಪಾಯಿ ವಂಚನೆಯಿಂದ ವೃದ್ಧ ದಂಪತಿಯನ್ನು ಪಾರು ಮಾಡಿದ್ದಾರೆ.

ಉತ್ತರ ಪ್ರದೇಶದ ಸಿಐಡಿ ಪೊಲೀಸರಂತೆ ನಟಿಸಿದ ವಂಚಕರು ಸಂತ್ರಸ್ತರನ್ನು ಬೆದರಿಸಿದ್ದಾರೆ. ಆದರೆ, ಪೊಲೀಸರು ಮತ್ತು ಬ್ಯಾಂಕ್ ಮ್ಯಾನೇಜರ್ ಅವರ ತ್ವರಿತ ಹಸ್ತಕ್ಷೇಪದಿಂದಾಗಿ, ದಂಪತಿಯ ಹಣ ಉಳಿದಿದೆ.

ಮುಲ್ಕಿ ಇನ್ಸ್‌ಪೆಕ್ಟರ್ ಮಂಜುನಾಥ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಮಾಹಿತಿ ಪ್ರಕಾರ, ಈ ಹಿಂದೆ ಗಲ್ಫ್‌ನಲ್ಲಿ ಕೆಲಸ ಮಾಡುತ್ತಿದ್ದ ವೃದ್ಧ ದಂಪತಿ 84 ವರ್ಷದ ಬೆನೆಡಿಕ್ಟ್ ಫೆರ್ನಾಂಡಿಸ್ ಮತ್ತು 71 ವರ್ಷದ ಲಿಲ್ಲಿ ಸಿಸಿಲಿಯಾ ಫೆರ್ನಾಂಡಿಸ್ ಅವರಿಗೆ ಎರಡು ದಿನಗಳ ಹಿಂದೆ ಕಾನ್ಸ್‌ನಿಂದ ವಾಟ್ಸಾಪ್ ಕರೆಯೊಂದು ಬಂದಿದ್ದು, ಅವರ ಬ್ಯಾಂಕ್ ಖಾತೆಗಳಿಂದ 6 ಕೋಟಿ ರೂ. ಅಕ್ರಮ ಹಣದ ವಹಿವಾಟು ನಡೆದಿದೆ ಮತ್ತು ಅವರ ಮೇಲೆ ಹಣ ವರ್ಗಾವಣೆ ಪ್ರಕರಣ ದಾಖಲಿಸಲಾಗಿದೆ ಎಂದು ನಂಬಿಸಿದ್ದಾರೆ. ದಂಡ ಪಾವತಿಸದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

ಅವರ ವೈಯಕ್ತಿಕ ವಿವರಗಳು, ಬ್ಯಾಂಕ್ ಖಾತೆಗಳನ್ನು ಒದಗಿಸುವಂತೆ ಮತ್ತು ಹಣವನ್ನು ವರ್ಗಾಯಿಸಲು ವಿಫಲವಾದರೆ ಬಂಧಿಸಲಾಗುವುದು ಎಂದು ಬೆದರಿಸಿದ್ದಾರೆ. ನೀವು 'ಡಿಜಿಟಲ್ ಅರೆಸ್ಟ್' ಆಗಿದ್ದೀರಿ ಎಂದಿದ್ದಾರೆ. ಆಗ ವೃದ್ಧ ಮಹಿಳೆ ಕಿನ್ನಿಗೋಳಿಯ ಬ್ಯಾಂಕಿಗೆ ಹೋಗಿ ವಂಚಕರು ನೀಡಿದ ಖಾತೆಯ ಮಾಹಿತಿಗಳನ್ನು ಬ್ಯಾಂಕ್ ಅಧಿಕಾರಿಗಳಿಗೆ ನೀಡಿ ತಮ್ಮ ಸ್ಥಿರ ಠೇವಣಿಗಳಿಂದ 84 ಲಕ್ಷ ರೂ.ಗಳನ್ನು ವರ್ಗಾಯಿಸುವಂತೆ ಹೇಳಿದ್ದಾರೆ.

Digital arrest
ತಿಂಗಳುಗಟ್ಟಲೆ ಡಿಜಿಟಲ್ ಅರೆಸ್ಟ್; ಬರೋಬ್ಬರಿ 31.83 ಕೋಟಿ ರೂ ಕಳೆದುಕೊಂಡ ಬೆಂಗಳೂರಿನ ಮಹಿಳೆ!

ಇಷ್ಟು ದೊಡ್ಡ ಮೊತ್ತವನ್ನು ಏಕೆ ವರ್ಗಾಯಿಸುತ್ತಿದ್ದಾರೆಂದು ಉತ್ತರಿಸಲು ವೃದ್ಧ ದಂಪತಿ ವಿಫಲವಾದಾಗ ಬ್ಯಾಂಕ್ ಮ್ಯಾನೇಜರ್ ರಾಯ್‌ಸ್ಟನ್‌ ಅವರಿಗೆ ಅನುಮಾನ ಬಂದಿದೆ. ದಂಪತಿ ನೀಡಿದ ಬ್ಯಾಂಕ್ ವಿವರಗಳನ್ನು ಪರಿಶೀಲಿಸಿದಾಗ, ಅದು ಉತ್ತರ ಪ್ರದೇಶದ ಔಷಧಾಲಯ ಕಂಪನಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಬ್ಯಾಂಕ್ ಮ್ಯಾನೇಜರ್ ಹಣವನ್ನು ವರ್ಗಾಯಿಸದೆಯೇ ದಂಪತಿಯನ್ನು ಮನೆಗೆ ಕಳುಹಿಸಿದ್ದಾರೆ. ಬದಲಾಗಿ, ಅವರು ಮುಲ್ಕಿ ಪೊಲೀಸ್ ಸಿಬ್ಬಂದಿ ಯಶವಂತ್ ಕುಮಾರ್ ಮತ್ತು ಕಿಶೋರ್ ಅವರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವೃದ್ಧ ದಂಪತಿ ಮನೆಗೆ ಹೋಗಿದ್ದಾರೆ. ಅದೇ ವೇಳೆಗೆ ವಂಚಕರು ವಿಡಿಯೋ ಕರೆ ಮಾಡಿ, ಹಣವನ್ನು ವರ್ಗಾಯಿಸುವಂತೆ ಬೆದರಿಕೆ ಹಾಕಿದ್ದಾರೆ.

'ವಂಚಕರು ವಿಡಿಯೋ ಕರೆ ಮಾಡಿದಾಗ ನಾವು ಸ್ಕ್ರೀನ್‌ಶಾಟ್ ಪಡೆಯಲು ಪ್ರಯತ್ನಿಸಿದೆವು. ಆದರೆ, ನಾವು ಪೊಲೀಸರು ಎಂದು ಅವರು ಅರಿತುಕೊಂಡರು ಮತ್ತು ಬೇಗನೆ ಕರೆಯನ್ನು ಕಡಿತಗೊಳಿಸಿದರು. ನಾವು ಪ್ರಕರಣವನ್ನು ಮತ್ತಷ್ಟು ತನಿಖೆ ಮಾಡುತ್ತಿದ್ದೇವೆ' ಎಂದು ಇನ್ಸ್‌ಪೆಕ್ಟರ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com