ಬೆಂಗಳೂರು: 13 ದಿನಗಳ ಖಾತೆ ಹಂಚಿಕೆ, ಅಧಿಕಾರ ಹಂಚಿಕೆಯ ಅಸಮಾಧಾನ ನಂತರ ಸಚಿವ ಕೃಷ್ಣ ಭೈರೇಗೌಡ ಅವರು ಇಂದು ಮಂಗಳವಾರ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಖಾತೆ ಹಂಚಿಕೆಯಲ್ಲಿ ಪೂರ್ಣ ಪ್ರಮಾಣದ ಅಧಿಕಾರ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅವರು ಬೇಸರಗೊಂಡಿದ್ದರು. ಆದರೆ ಸಚಿವರ ಮುನಿಸನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ ಮನವೊಲಿಸುವ ಮೂಲಕ ಶಮನ ಮಾಡಿದರು.
ಈ ಬೆನ್ನಲ್ಲೇ ಇಂದು ಜಿಬಿಎ ಕೇಂದ್ರ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿಯೇ ಮೊದಲ ಸಭೆಯನ್ನು ಸಚಿವ ಕೃಷ್ಣ ಭೈರೇಗೌಡ ನಡೆಸಿದ್ದಾರೆ. ಈ ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಬೆಂಗಳೂರಿನ ಐದು ಪಾಲಿಕೆಗಳ ಆಯುಕ್ತರು ಹಾಗೂ ಮುಖ್ಯ ಇಂಜಿನಿಯರ್ಗಳು ಭಾಗವಹಿಸಿದ್ದರು.
ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವರು ಬೆಂಗಳೂರಿನ ಸಮಸ್ಯೆ ಬಗ್ಗೆ ನಾನಾ ಪ್ರಶ್ನೆ ಕೇಳಿದ್ದಾರೆ. ಜಿಬಿಎ ಅಧಿಕಾರಿಗಳಿಗೆ ನಗರದ ರಸ್ತೆಗಳ ಪರಿಸ್ಥಿತಿ ಬಗ್ಗೆ ಪ್ರಶ್ನೆ ಮಾಡಿದ್ದು, ರಸ್ತೆಯಲ್ಲಿ ಗುಂಡಿ ಯಾಕೆ ಬೀಳುತ್ತೆ?ರಸ್ತೆ ನಿರ್ಮಾಣ ಮಾಡೋದು ರಾಕೆಟ್ ಸೈನ್ಸಾ? ರಸ್ತೆ ಗುಂಡಿ ದುರಸ್ತಿ ಮಾಡೋದೆ ವರ್ಷಪೂರ್ತಿ ಅಂತಾರೆ ಪಾಟ್ಹೋಲ್ ಇಲ್ಲದೆ ರಸ್ತೆ ಮಾಡಲು ಆಗಲ್ವಾ? ಎಂದು ಅಧಿಕಾರಿಗಳನ್ನ ಸಚಿವರು ಖಾರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇ-ಖಾತಾ ಬಗ್ಗೆ ಮಾಹಿತಿ
ನಗರದಲ್ಲಿ ಇದುವರೆಗೆ ಅಗಿರುವ ಕಾಮಗಾರಿಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಮಾಹಿತಿ ಪಡೆದ ಸಚಿವರು, ಸದ್ಯ ನಗರದಲ್ಲಿ ನಡೆಯುತ್ತಿರುವ ವೈಟ್ ಟ್ಯಾಪಿಂಗ್, ಕೆರೆಗಳ ಅಭಿವೃದ್ಧಿ, ರಸ್ತೆ ಅಭಿವೃದ್ಧಿ ಬಗ್ಗೆ ಮಾಹಿತಿ ಪಡೆದರು. ಕಂದಾಯ ವಸೂಲಿ, ಬಾಕಿ ಇರುವ ಕಂದಾಯದ ವಸೂಲಿ ಬಗ್ಗೆ ಚರ್ಚೆ ನಡೆಸಿದ್ದು, ಇ ಖಾತಾ ಎಷ್ಟು ಅಗಿದೆ. ಎಷ್ಟು ಅರ್ಜಿ ಬಂದಿದೆ ಅನ್ನೋ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಇಂಜಿನಿಯರ್ಗಳ ಮೇಲೆ ಕ್ರಮ
ರಾಜಕಾಲುವೆ ಹೂಳು ಎತ್ತುವ ಬಗ್ಗೆ ಇಂಜಿನಿಯರ್ಗಳಿಗೆ ಪ್ರಶ್ನೆ ಮಾಡಿದ ಸಚಿವರು, ಮಳೆ ಬಂದಾಗ ನಗರದ ರಾಜಕಾಲುವೆ ಮೋರಿ ನೀರು ರಸ್ತೆಯಲ್ಲಿ ಹರಿಯುತ್ತದೆ. ಈ ಬಗ್ಗೆ ಇದುವರೆಗೆ ಕ್ರಮ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಮಳೆ ಬಂದಾಗ ರಾಜಕಾಲುವೆ ನೀರು ರಸ್ತೆಗೆ ಬಂದರೆ ಇಂಜಿನಿಯರ್ ಮೇಲೆ ಕ್ರಮದ ಎಚ್ಚರಿಕೆ ನೀಡಿದ್ದಾರೆ.
'ನನ್ನ ಕನಸಿನ ಬೆಂಗಳೂರು ಸಿಂಪಲ್'
ನನ್ನ ಕನಸಿನ ಬೆಂಗಳೂರು ಸಿಂಪಲ್ ಇದೆ. ಇಲ್ಲಿ ವಾಸ ಮಾಡುವ ಜನರೇ ನನಗೆ ಪ್ರಾಮುಖ್ಯ ಇವತ್ತಿಗೂ ಸಹ ಬೆಂಗಳೂರಲ್ಲಿ ಇರುವಷ್ಟು ರಿಯಲ್ಎಸ್ಟೇಟ್ ಡಿಮ್ಯಾಂಡ್ ಬೇರೆ ಎಲ್ಲಿಯೂ ಇಲ್ಲ. ಬೇರೆ ನಗರದಲ್ಲಿ ಸಮಸ್ಯೆ ಇಲ್ಲವಾ, ದೆಹಲಿಯಲ್ಲಿ ಟ್ರಾಫಿಕ್ ಸಮಸ್ಯೆ ಇಲ್ವಾ? ಆದರೆ ಬೆಂಗಳೂರಿನ ಸಮಸ್ಯೆ ಹೆಚ್ಚು ಸುದ್ದಿ ಆಗುತ್ತದೆ, ಏನಾದರೂ ಒಂದು ರೂಪದಲ್ಲಿ ಸಮಸ್ಯೆ ಬಗಹರಿಸುತ್ತೇವೆ ಎಂದರು.
ಖಾತೆ ಕ್ಯಾತೆ ಬಗ್ಗೆ ಹೇಳಿದ್ದೇನು?
ನನ್ನ ಅಭಿಪ್ರಾಯವನ್ನ ನಾನು ಸಿಎಂ ಹಾಗೂ ವರಿಷ್ಠರಿಗೆ ತಿಳಿಸಿದ್ದೇನೆ. ಇಲ್ಲಿ ಸಮರ್ಪಕವಾಗಿ ಕೆಲಸ ಆಡಳಿತ ನಡೆಸಲು ಪೂರ್ಣ ಖಾತೆ ಅವಶ್ಯಕವಿದೆ ಎಂದು ಸಿಎಂ ಹಾಗೂ ವರಿಷ್ಠರಿಗೆ ಹೇಳಿದ್ದೇನೆ. ಕ್ಲಾರಿಟಿ ಸಿಕ್ಕ ಬಳಿಕವೇ ಅಧಿಕಾರ ಸ್ವೀಕಾರ ಮಾಡಬೇಕು ಅಂದುಕೊಂಡಿದ್ದೆ. ಸಿಎಂ ವಿವೇಚನೆ ಬಳಸಿ ತೀರ್ಮಾನ ಮಾಡಿದ್ದಾರೆ. ಈಗ ವರಿಷ್ಠರ ಸೂಚನೆ ಮೇರೆಗೆ ಇಲಾಖೆಯ ಜವಾಬ್ದಾರಿ ಸ್ವೀಕರಿಸಿದ್ದೇನೆ ಎಂದರು.