ಸಂಗ್ರಹ ಚಿತ್ರ 
ರಾಜ್ಯ

Traffic fine ಶೇ.50ರಷ್ಟು ರಿಯಾಯಿತಿ: 1991ರಿಂದ ದಾಖಲಾಗಿರುವ ಪ್ರಕರಣಗಳಿಗೂ ಅನ್ವಯ; ಜೂನ್ 21ರಿಂದ ಜುಲೈ 10ರವರೆಗೆ ಮಾತ್ರ ಅವಕಾಶ..!

ಉಲ್ಲಂಘನೆ ನಡೆದ ಸಮಯದಲ್ಲಿ ಜಾರಿಯಲ್ಲಿದ್ದ ದಂಡದ ದರದ ಆಧಾರದ ಮೇಲೆ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ. ಉದಾಹರಣೆಗೆ, 1992ರಲ್ಲಿ ಪ್ರಕರಣ ದಾಖಲಾಗಿದ್ದರೆ, ಅಂದಿನ ದಂಡದ ದರವೇ ಅನ್ವಯವಾಗುತ್ತದೆ.

ಬೆಂಗಳೂರು: ಸಾರಿಗೆ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಬಾಕಿ ಉಳಿದಿರುವ ದಂಡಗಳನ್ನು ಪಾವತಿಸಲು ವಾಹನ ಮಾಲೀಕರಿಗೆ ರಾಜ್ಯ ಸಾರಿಗೆ ಇಲಾಖೆ ಸುವರ್ಣಾವಕಾಶ ನೀಡಿದೆ.

ಜೂನ್ 21ರಿಂದ ಜುಲೈ 10ರವರೆಗೆ ಬಾಕಿ ಇರುವ ದಂಡದ ಮೊತ್ತದ ಮೇಲೆ ಶೇ.50ರಷ್ಟು ರಿಯಾಯಿತಿ ನೀಡುವ ವಿಶೇಷ ಯೋಜನೆ ಜಾರಿಯಾಗಲಿದೆ.

ಈ ಯೋಜನೆಯಡಿ 1991ರಿಂದ 2022ರವರೆಗೆ ದಾಖಲಾಗಿರುವ 1.87 ಲಕ್ಷಕ್ಕೂ ಹೆಚ್ಚು ಡಿಪಾರ್ಟ್‌ಮೆಂಟ್ ಸ್ಟ್ಯಾಟ್ಯುಟರಿ ಆಕ್ಷನ್ (DSA) ಪ್ರಕರಣಗಳು ಒಳಪಡಲಿವೆ.

ಪರವಾನಗಿ ಷರತ್ತು ಉಲ್ಲಂಘನೆ, ಅವಧಿ ಮುಗಿದ ಅಥವಾ ಅಮಾನ್ಯ ಚಾಲನಾ ಪರವಾನಗಿ (DL), ಫಿಟ್ನೆಸ್ ಸರ್ಟಿಫಿಕೇಟ್ (FC), ವಿಮೆ (Insurance) ಹಾಗೂ ಮಾಲಿನ್ಯ ಪರೀಕ್ಷಾ ಪ್ರಮಾಣಪತ್ರ (Emission Test Certificate) ಸಂಬಂಧಿತ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯವಾಗಲಿದೆ.

ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತೆ (ಜಾರಿ-ದಕ್ಷಿಣ) ಹಾಗೂ ಯೋಜನೆಯ ನೋಡಲ್ ಅಧಿಕಾರಿ ಓಂಕಾರೇಶ್ವರಿ ಅವರು ಮಾತನಾಡಿ, ಉಲ್ಲಂಘನೆ ನಡೆದ ಸಮಯದಲ್ಲಿ ಜಾರಿಯಲ್ಲಿದ್ದ ದಂಡದ ದರದ ಆಧಾರದ ಮೇಲೆ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ. ಉದಾಹರಣೆಗೆ, 1992ರಲ್ಲಿ ಪ್ರಕರಣ ದಾಖಲಾಗಿದ್ದರೆ, ಅಂದಿನ ದಂಡದ ದರವೇ ಅನ್ವಯವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಈ ಒಂದು ಬಾರಿಯ ಇತ್ಯರ್ಥ (One-Time Settlement) ಯೋಜನೆಯ ಮೂಲಕ ವಾಹನ ಮಾಲೀಕರು ಬಾಕಿ ಪ್ರಕರಣಗಳನ್ನು ಮುಕ್ತಾಯಗೊಳಿಸಲು ಅವಕಾಶ ಸಿಗಲಿದೆ. ಬಾಕಿ ಪ್ರಕರಣಗಳನ್ನು ಹೊಂದಿರುವ ಎಲ್ಲರೂ ಮುಂದೆ ಬಂದರೆ ಸುಮಾರು ರೂ.74.44 ಕೋಟಿ ಆದಾಯ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಅಂಕಿ-ಅಂಶಗಳ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯಲ್ಲಿ 76,487 ಬಾಕಿ ಪ್ರಕರಣಗಳಿದ್ದು, ಸುಮಾರು ರೂ.21.59 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 31,918 ಪ್ರಕರಣಗಳು ಬಾಕಿ ಇದ್ದು, ಅಲ್ಲಿಂದ ರೂ.9.12 ಕೋಟಿ ಆದಾಯ ಬರಬಹುದು ಎಂದು ಅಂದಾಜಿಸಲಾಗಿದೆ.

ಕಳೆದ ಮೂರು ದಶಕಗಳಲ್ಲಿ ರಾಜ್ಯದಾದ್ಯಂತ ನಡೆದ ವಿವಿಧ ಜಾರಿ ಕಾರ್ಯಾಚರಣೆಗಳ ವೇಳೆ ಈ ಪ್ರಕರಣಗಳು ದಾಖಲಾಗಿದ್ದವು. ಇದೀಗ ವಾಹನ ಮಾಲೀಕರು ತಮ್ಮ ದಾಖಲೆಗಳನ್ನು ಸಕ್ರಮಗೊಳಿಸಿ, ಬಾಕಿ ಪ್ರಕರಣಗಳನ್ನು ಮುಕ್ತಾಯಗೊಳಿಸಲು ಈ ಯೋಜನೆ ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಕಿ ಇರುವ DSA ಪ್ರಕರಣಗಳನ್ನು ಹೊಂದಿರುವ ವಾಹನ ಮಾಲೀಕರು ಮತ್ತು ನಿರ್ವಾಹಕರು ತಮ್ಮ ಸಮೀಪದ ಪ್ರಾದೇಶಿಕ ಸಾರಿಗೆ ಕಚೇರಿ (RTO)ಗೆ ಭೇಟಿ ನೀಡಿ, ಈ ಸೀಮಿತ ಅವಧಿಯ ರಿಯಾಯಿತಿಯ ಪ್ರಯೋಜನ ಪಡೆದುಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂದೇ ಉದಯನಿಧಿ ಸ್ಟಾಲಿನ್ ಬಿಡುಗಡೆ ಮಾಡಿ: ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ಆದೇಶ

ಹಿರಿಯ ಶಾಸಕ HK ಪಾಟೀಲ್‌ಗೆ ತಪ್ಪಿದ ಸಚಿವ ಸ್ಥಾನ: 21 ಕಾಂಗ್ರೆಸ್ ಕೌನ್ಸಿಲರ್‌ಗಳ ಸಾಮೂಹಿಕ ರಾಜೀನಾಮೆ!

'ಬಿಜೆಪಿಯ ದುರಹಂಕಾರದ ವಿರುದ್ಧ ಜನಾದೇಶ': ತಮ್ಮ ಐತಿಹಾಸಿಕ ಗೆಲುವಿಗೆ ಮೂರು ಕಾರಣ ನೀಡಿದ ಪ್ರಶಾಂತ್ ಕಿಶೋರ್!

ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕೀಯದ ದರ್ಬಾರು: ಡಿಕೆಶಿ ಸಂಪುಟದಲ್ಲಿಯೂ 2ನೇ ತಲೆಮಾರಿನ ನಾಯಕರ ಕಾರುಬಾರು; ಸಾಮರ್ಥ್ಯಕ್ಕಿಂತ ಸಂಪರ್ಕ ಮುಖ್ಯವೇ?

ನಟಿ ತ್ರಿಶಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಆರೋಪ: ನಾನು ಅವರ ಹೆಸರನ್ನೂ ಉಲ್ಲೇಖಿಸಿದ್ದೇನೆಯೇ? ಬಂಧನದ ಬಳಿಕ ಉದಯನಿಧಿ ಸ್ಟಾಲಿನ್