ಬೆಂಗಳೂರು: ಸ್ವಚ್ಛತಾ ಕಾರ್ಯದ ವೇಳೆ ಬೆಂಗಳೂರಿನ ವರ್ತೂರು ಸಮೀಪದ ಬೆಳಗೆರೆಯ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ (STP) ಆಕಸ್ಮಿಕವಾಗಿ ಬಿದ್ದು ನಾಪತ್ತೆಯಾಗಿರುವ ಇಬ್ಬರು ಕಾರ್ಮಿಕರಿಗಾಗಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (NDRF) ಶೋಧ ಕಾರ್ಯವನ್ನು ಮುಂದುವರಿಸಿದೆ.
ಈ ನಡುವೆ ಘಟನೆ ಕುರಿತು ತನಿಖೆ ನಡೆಸಲು ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮೂರು ಸದಸ್ಯರ ಸಮಿತಿಯನ್ನು ರಚಿಸಿದೆ.
ಮುಖ್ಯ ಎಂಜಿನಿಯರ್ ಕೆ.ಎನ್. ರಾಜೀವ್, ಸಹಾಯಕ ಮುಖ್ಯ ಎಂಜಿನಿಯರ್ ಕೆ.ಎಸ್. ರೇಣುಕುಮಾರ್ ಮತ್ತು ಉಪ ಮುಖ್ಯ ಎಂಜಿನಿಯರ್ ವಿನುತಾ ಡಿ.ಎಸ್. ಅವರನ್ನು ಒಳಗೊಂಡ ಸಮಿತಿಗೆ ಶನಿವಾರ ಮಧ್ಯಾಹ್ನದೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
BWSSB ಅಧಿಕಾರಿಗಳ ಪ್ರಕಾರ, ತಮಿಳುನಾಡಿನ ಅಖಿಲನ್ (29) ಮತ್ತು ಕಾರ್ತಿಕ್ (25) ಹಾಗೂ ಬಿಹಾರದ ಅಖಿಲೇಶ್ (30) ಎಂಬ ಮೂವರು ಕಾರ್ಮಿಕರನ್ನು ಸ್ವಚ್ಛತಾ ಕಾರ್ಯಕ್ಕಾಗಿ ನೇಮಿಸಲಾಗಿತ್ತು.
ಗುರುವಾರ 90 MLD ಸಾಮರ್ಥ್ಯದ ಬೆಳ್ಳಂದೂರು ತ್ಯಾಜ್ಯ ನೀರು ಸಂಸ್ಕರಣಾ ಘಟಕದ 40 ಅಡಿ ಆಳದ ಒಳಚರಂಡಿ ಪಂಪಿಂಗ್ ವೆಟ್ವೆಲ್ನಲ್ಲಿ ಕೆಲಸ ಮಾಡುವಾಗ ಮೂವರು ಆಕಸ್ಮಿಕವಾಗಿ ಬಿದ್ದಿದ್ದಾರೆ.
ಘಟನೆಯಲ್ಲಿ ಕಾರ್ತಿಕ್ ಅವರನ್ನು ಸ್ಥಳದಲ್ಲಿದ್ದ ಸಹೋದ್ಯೋಗಿಗಳು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಖಿಲನ್ ಮತ್ತು ಅಖಿಲೇಶ್ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.
ಇಬ್ಬರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆಯಾದರೂ, ವೆಟ್ವೆಲ್ನಲ್ಲಿ ಸುಮಾರು ಮೂರು ಮೀಟರ್ ಎತ್ತರದ ಕೆಸರು ಮತ್ತು ಹೂಳು ಸಂಗ್ರಹವಾಗಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ BWSSB ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ದುರಂತವಾಗಿದೆ. ಈ ವರ್ಷದ ಜನವರಿಯಲ್ಲಿ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಟಿ.ಕೆ. ಹಳ್ಳಿಯಲ್ಲಿ 14 ವರ್ಷದ ವಿದ್ಯಾರ್ಥಿ ಪ್ರೀತಂ ತೆರೆದ ಸ್ಥಿತಿಯಲ್ಲಿದ್ದ ಪೈಪ್ಲೈನ್ ಜಾಲಕ್ಕೆ ಆಕಸ್ಮಿಕವಾಗಿ ಬಿದ್ದಿದ್ದ. ಬಳಿಕ ಫೆಬ್ರವರಿ 1ರಂದು ಪೈಪ್ಲೈನ್ಗೆ ಸಂಪರ್ಕ ಹೊಂದಿದ್ದ ಸಂಪ್ನಲ್ಲಿ ಬಾಲಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ BWSSB ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.