ಬೆಂಗಳೂರು: ಮೇ 31, 2026ರೊಳಗೆ ನಿರ್ಮಾಣ ಪೂರ್ಣಗೊಂಡಿರುವ ಕಟ್ಟಡಗಳ ಮಾಲೀಕರಿಗೆ ವಿಶೇಷ ವಿನಾಯಿತಿಯಡಿ ವಿದ್ಯುತ್ ಸಂಪರ್ಕ ಪಡೆಯಲು 15 ದಿನಗಳ ಕಾಲಾವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ಶನಿವಾರ ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿಗಳು, ಸರ್ಕಾರದ ಆದೇಶ ಹೊರಬಿದ್ದ ದಿನಾಂಕದಿಂದ ಈ 15 ದಿನಗಳ ಅವಧಿ ಆರಂಭವಾಗಲಿದೆ. ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸುವ ಕಟ್ಟಡ ಮಾಲೀಕರು ತಮ್ಮ ಕಟ್ಟಡದ ಛಾಯಾಚಿತ್ರಗಳು ಹಾಗೂ ಜಿಪಿಎಸ್ ಆಧಾರಿತ ಸ್ಥಳ ಮಾಹಿತಿ (GPS Location) ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.
ಆಕ್ಯುಪೆನ್ಸಿ ಸರ್ಟಿಫಿಕೇಟ್ (OC) ಮತ್ತು ಕಂಪ್ಲೀಷನ್ ಸರ್ಟಿಫಿಕೇಟ್ (CC) ಸಂಬಂಧಿತ ನಿಯಮಗಳನ್ನು ನಾವು ಸರಳಗೊಳಿಸಿದ್ದೇವೆ. ಮೊದಲಿಗೆ ಮೇ 31, 2026ರೊಳಗೆ ಕಟ್ಟಡ ನಿರ್ಮಾಣ ಅನುಮತಿಗೆ ಅರ್ಜಿ ಸಲ್ಲಿಸಿದ್ದವರಿಗೆ ಮಾತ್ರ ಈ ಸೌಲಭ್ಯ ನೀಡಲು ನಿರ್ಧರಿಸಲಾಗಿತ್ತು. ಆದರೆ, ಇದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದು ಗುತ್ತಿಗೆದಾರರು ಮತ್ತು ನಿರ್ಮಾಣ ಕ್ಷೇತ್ರದ ಪ್ರತಿನಿಧಿಗಳು ತಿಳಿಸಿದ್ದರು. ಹೀಗಾಗಿ ಸರ್ಕಾರ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ಕೆಲವು ಗ್ರಾಮೀಣ ಪ್ರದೇಶಗಳ ಕಟ್ಟಡಗಳಿಗೂ ವಿನಾಯಿತಿ ನೀಡಲಾಗಿದೆ. ರೇಷ್ಮೆ ಸಾಕಾಣಿಕೆ ಶೆಡ್ಗಳು, ಜಾನುವಾರು ಶೆಡ್ಗಳು ಸೇರಿದಂತೆ ಕೆಲವು ಕೃಷಿ ಸಂಬಂಧಿತ ಕಟ್ಟಡಗಳಿಗೆ ವಿಶೇಷ ಸಡಿಲಿಕೆ ನೀಡಲಾಗುವುದು ಎಂದು ಹೇಳಿದರು. ಆದರೆ, ಹೊಸದಾಗಿ ನಿರ್ಮಾಣವಾಗುವ ಕಟ್ಟಡಗಳಿಗೆ ಈ ವಿನಾಯಿತಿ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಿರ್ಧಾರ ಕೈಗೊಳ್ಳುವ ಮೊದಲು ಇಂಧನ, ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದೂ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.