ರಾಮನಗರ: ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ (ಜಿಬಿಐಟಿ) ಕೈಬಿಟ್ಟರೆ ಯೋಜನಾ ಪ್ರದೇಶದಲ್ಲಿರುವ ನನ್ನ ಕುಟುಂಬದ 32 ಎಕರೆ ಜಮೀನನ್ನು ಸಾರ್ವಜನಿಕ ಬಳಕೆಗೆ ಬಿಟ್ಟು ಕೊಡುತ್ತೇನೆ. ಸರ್ಕಾರ ಯೋಜನೆ ರದ್ದುಪಡಿಸಲು ತಯಾರಿದೆಯೇ?’ ಎಂದು ಜೆಡಿಎಸ್ ಯುವ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸವಾಲು ಹಾಕಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿ ಹೋಬಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪಾದಯಾತ್ರೆ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಡದಿಯಲ್ಲಿ ಮಾಡಲು ಹೊರಟಿರುವ ಭೂಸ್ವಾಧೀನವನ್ನು ಕೈ ಬಿಟ್ಟರೆ, ನಾನು ನನ್ನ ಹೆಸರಿನಲ್ಲಿರುವ ಜಮೀನನ್ನು ಸರಕಾರಿ ಶಾಲೆ ಅಥವಾ ಆಸ್ಪತ್ರೆ ಕಟ್ಟಿಸಲು ಕೊಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಸರಕಾರಕ್ಕೆ ಸವಾಲು ಹಾಕಿದ್ದಾರೆ
ಈ ಭಾಗದಲ್ಲಿ ಕುಮಾರಸ್ವಾಮಿ 100 ಎಕರೆ ಬೇನಾಮಿ ಆಸ್ತಿ ಹೊಂದಿದ್ದಾರೆ ಅಂತ ಸ್ಥಳೀಯ ಶಾಸಕ ಹೇಳಿದ್ದಾರೆ. ಕೇತಗಾನಹಳ್ಳಿ ಗ್ರಾಮದಲ್ಲಿ 1985ರಲ್ಲಿ ನಮ್ಮ ತಂದೆ ಜಾಗ ಖರೀದಿ ಮಾಡಿದ್ದಾರೆ. ಯಾರ ತಲೆಯನ್ನು ಒಡೆದು ಅದನ್ನು ಖರೀದಿ ಮಾಡಿಲ್ಲ. ಸಿನಿಮಾ ಹಂಚಿಕೆ ಮಾಡಿದ ದುಡ್ಡಲ್ಲಿ ಈ ಜಮೀನನ್ನು ಖರೀದಿ ಮಾಡಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ನಮ್ಮ ತಾಯಿ ಹೆಸರಲ್ಲಿ 27 ಎಕರೆ, ನನ್ನ ಹೆಸರಲ್ಲಿ 5 ಎಕರೆ ಜಾಗವನ್ನು ಈ ಭಾಗದಲ್ಲಿ ಖರೀದಿ ಮಾಡಿದ್ದೇವೆ.
ನಮ್ಮಜಾಗದಲ್ಲಿ ಕಮರ್ಷಿಯಲ್ ಬಿಲ್ಡಿಂಗ್ ಕಟ್ಟಿಲ್ಲ. ರೈತರಿಗೆ ಅನುಕೂಲ ಮಾಡಲು ಹಾಲಿನ ಉತ್ಪನ್ನಗಳ ಉತ್ಪಾದನೆಗೆ ಅದನ್ನು ಬಳಸಲುಇಟ್ಟಿದ್ದೇವೆ. ಸರಕಾರ ಈ ಭೂಸ್ವಾಧೀನವನ್ನು ಕೈ ಬಿಟ್ಟರೆ ನನ್ನ ಹೆಸರಿನಲ್ಲಿರುವ ಜಮೀನನ್ನು ಸರಕಾರಕ್ಕೆ ಶಾಲೆ ಅಥವಾ ಆಸ್ಪತ್ರೆ ಕಟ್ಟಿಸಲು ಬಿಟ್ಟುಕೊಡುತ್ತೇನೆ ಎಂದರು.
ಮಾತೆತ್ತಿದರೆ ಕುಮಾರಣ್ಣ ಕಾಲದಲ್ಲಿ ರೆಡ್ ಜೋನ್ ಆಯ್ತು ಅಂತಾರೆ. ಡಿನೋಟಿಫಿಕೇಷನ್ ಮಾಡಿ ನಾನು ಜೈಲಿಗೆ ಹೋಗಲ್ಲ ಅಂತ ಸಿಎಂ ಹೇಳುತ್ತಾರೆ. ಆದರೆ ದೇವನಹಳ್ಳಿಯಲ್ಲಿ ನಿಮ್ಮದೇ ಪಕ್ಷದ ಸಿಎಂ ಸಿದ್ದರಾಮಯ್ಯ ಡಿನೋಟಿಫಿಕೇಷನ್ ಮಾಡಿದರಲ್ಲವಾ? ಅವರು ಜೈಲಿಗೆ ಹೋದ್ರಾ?,'' ಎಂದು ನಿಖಿಲ್ ಕುಮಾರಸ್ವಾಮಿ ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದರು.