ಚಿಕ್ಕಮಗಳೂರು: ತ್ರಿಕೋನ ಪ್ರೇಮ ಪ್ರಕರಣವೊಂದರಲ್ಲಿ ವಿವಾಹಿತ ಮಹಿಳೆಗಾಗಿ ಇಬ್ಬರ ಪುರುಷರ ನಡುವೆ ಜಗಳವಾಗಿದ್ದು, ಮಚ್ಚೇಟಿನಿಂದ ಓರ್ವ ಪುರುಷನ ಮುಂಗೈ ಕತ್ತರಿಸಿ ಹೋಗಿರುವ ಘಟನೆ ವರದಿಯಾಗಿದೆ.
ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಬಾಳೆ ಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ವಿವಾಹಿತ ಮಹಿಳೆಯ ವಿಚಾರವಾಗಿ ಇಬ್ಬರು ವ್ಯಕ್ತಿಗಳ ನಡುವೆ ಜಗಳ ನಡೆದಿದೆ.
ಈ ಜಗಳ ವಿಕೋಪಕ್ಕೆ ತಿರುಗಿ, ಲಾಂಗ್ನಿಂದ ನಡೆದ ದಾಳಿಯಲ್ಲಿ ಓರ್ವ ವ್ಯಕ್ತಿಯ ಹಸ್ತ ಸಂಪೂರ್ಣವಾಗಿ ತುಂಡಾಗಿದೆ.
ಮೂಲಗಳ ಪ್ರಕಾರ ಗಂಡನಿಂದ ದೂರವಾಗಿ ನೆಲೆಸಿದ್ದ ನಾಗರತ್ನ ಎಂಬ ಮಹಿಳೆಯ ವಿಚಾರದಲ್ಲಿ ಶೇಷಗಿರಿ (40) ಹಾಗೂ ಅರುಣ್ (35) ಎಂಬುವರ ನಡುವೆ ಕಳೆದ ಕೆಲವು ದಿನಗಳಿಂದ ಮನಸ್ತಾಪವಿತ್ತು ಎನ್ನಲಾಗಿದೆ.
ಈ ವಿಚಾರವು ವಿಕೋಪಕ್ಕೆ ತಿರುಗಿ, ಶೇಷಗಿರಿಯು ಅರುಣ್ ಮೇಲೆ ಲಾಂಗ್ನಿಂದ (ಮಚ್ಚು) ದಾಳಿ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಜೀವ ಉಳಿಸಿಕೊಳ್ಳಲು ಅರುಣ್ ತನ್ನ ಕೈಯನ್ನು ಅಡ್ಡ ಕೊಟ್ಟಿದ್ದಾನೆ. ಈ ದಾಳಿಯಿಂದಾಗಿ ಅರುಣ್ ಅವರ ಮುಂಗೈ ಸಂಪೂರ್ಣ ಕತ್ತರಿಸಿ ನೆಲಕ್ಕೆ ಬಿದ್ದಿದೆ.
ದಾಳಿಯ ತೀವ್ರತೆಗೆ ಅರುಣ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ದಾರೆ. ಸ್ಥಳೀಯರು ತಕ್ಷಣವೇ ಅವರನ್ನು ಗಮನಿಸಿ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಹಸ್ತವನ್ನು ಮರುಜೋಡಿಸುವ ಸಾಧ್ಯತೆ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಪೊಲೀಸರು ದೌಡು
ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆ ಬಾಳೆಹೊನ್ನೂರು ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಶೇಷಗಿರಿಯನ್ನು ವಶಕ್ಕೆ ಪಡೆದು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.