ಬೆಂಗಳೂರು: ನಗರದ ಕಾರು ವ್ಯಾಪಾರಿಗೆ ನಕಲಿ ಚಿನ್ನದ ಗಟ್ಟಿಗಳನ್ನು ಮಾರಾಟ ಮಾಡುವ ಮೂಲಕ 25 ಲಕ್ಷ ರೂ. ವಂಚಿಸಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದ್ದು, ಆತನಿಂದ 19.93 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ವಿಜಯನಗರ ನಿವಾಸಿಯಾಗಿರುವ ಸಂತ್ರಸ್ತ, ಮೇ 22 ರಂದು ತಿಲಕ್ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿಗಳು ಹರಪನಹಳ್ಳಿಯ ತಮ್ಮ ಕೃಷಿ ಭೂಮಿಯಲ್ಲಿ ಬೋರವೆಲ್ ಕೊರೆಯುವಾಗ ಸುಮಾರು 1.5 ಕೆಜಿ ಚಿನ್ನದ ಗಟ್ಟಿಗಳು ಸಿಕ್ಕಿವೆ ಎಂದು ಕಾರು ವ್ಯಾಪಾರಿಯನ್ನು ನಂಬಿಸಿದ್ದರು. ಮಾರುಕಟ್ಟೆ ಬೆಲೆಗಿಂತ ಕಡಿಮೆ ದರಕ್ಕೆ ಚಿನ್ನ ನೀಡುವುದಾಗಿ ಹೇಳಿ, ವಾಟ್ಸಾಪ್ನಲ್ಲಿ ಫೋಟೋ ಕಳುಹಿಸಿದ್ದರು. ನಂತರ ತಿಲಕನಗರದ ಹೋಟೆಲ್ ಒಂದರಲ್ಲಿ 2 ಗ್ರಾಂ ಅಸಲಿ ಚಿನ್ನದ ಸ್ಯಾಂಪಲ್ ತೋರಿಸಿ ವ್ಯಾಪಾರಿಯ ನಂಬಿಕೆ ಗಳಿಸಿದ್ದರು.
ಸ್ಯಾಂಪಲ್ ಅಸಲಿ ಎಂದು ಖಾತರಿಯಾದ ನಂತರ, ವ್ಯಾಪಾರಿಯು ಮೊದಲು 2 ಲಕ್ಷ ರೂ. ನಗದು ಹಾಗೂ ಬಳಿಕ ಉಳಿದ 23 ಲಕ್ಷ ರೂ. ಸೇರಿ ಒಟ್ಟು 25 ಲಕ್ಷ ರೂ.ಗಳನ್ನು ಆರೋಪಿಗಳಿಗೆ ನೀಡಿದ್ದರು. ಇದಕ್ಕೆ ಬದಲಿಯಾಗಿ ಆರೋಪಿಗಳು 1.5 ಕೆಜಿ ತೂಕದ ನಕಲಿ ಚಿನ್ನದ ಗಟ್ಟಿಗಳನ್ನು ನೀಡಿ ಪರಾರಿಯಾಗಿದ್ದರು.
ಕಾರು ವ್ಯಾಪಾರಿ ಆ ಚಿನ್ನದ ಗಟ್ಟಿಗಳನ್ನು ಜ್ಯುವೆಲ್ಲರಿ ಶಾಪ್ಗೆ ತೆಗೆದುಕೊಂಡು ಹೋಗಿ ಪರೀಕ್ಷಿಸಿದಾಗ ಅದು ನಕಲಿ ಚಿನ್ನ ಎಂದು ತಿಳಿದುಬಂದಿದೆ. ತಕ್ಷಣವೇ ಅವರು ತಿಲಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಆಧಾರದ ಮೇಲೆ, ತಿಲಕ್ನಗರ ಪೊಲೀಸರು ವಂಚನೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದರು. ದೊರೆತ ಸುಳಿವಿನ ಆಧಾರದ ಮೇಲೆ ಪೊಲೀಸರು ಜೂನ್ 17 ರಂದು ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 48ರ ಡಾಬಾವೊಂದರ ಬಳಿ ಒಬ್ಬ ಆರೋಪಿಯನ್ನು ಬಂಧಿಸಿ, ರೂ. 19.93 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಆರೋಪಿ ವಂಚನೆಯಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಜೂನ್ 18 ರಂದು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಉಳಿದ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಗಳನ್ನು ಮುಂದುವರೆಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.