ಬೆಂಗಳೂರು: ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಡಳಿತಾಧಿಕಾರ ಅವಧಿಯಲ್ಲಿ ಆಯಾಕಟ್ಟಿನ ಜಾಗಕ್ಕೆ ನೇಮಿಸಲಾಗಿದ್ದ ಅಹಿಂದ ಅಧಿಕಾರಿಗಳನ್ನು ಬದಲಾಯಿಸಿ ಒಕ್ಕಲಿಗ ಸಮುದಾಯದ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ.
ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಿಎನ್ ದೇವರಾಜ್ ಅವರನ್ನು ಬದಲಾಯಿಸಿದ್ದು, ಇದೀಗ ಅವರ ಜಾಗಕ್ಕೆ ದಿವಾಕರ್ ಅವರನ್ನು ನೇಮಕ ಮಾಡಲಾಗಿದೆ. ಇನ್ನೂ ಕರ್ನಾಟಕ ಹಾಲು ಒಕ್ಕೂಟಕ್ಕೆ ಶಿವಸ್ವಾಮಿ ಬದಲಿಗೆ ಡಾ. ಎಸ್.ಟಿ. ಸುರೇಶ್ ಅವರನ್ನು ನೇಮಿಸಲಾಗಿದೆ.
ಶಿವಕುಮಾರ್ ಅವರ ಕಿರಿಯ ಸಹೋದರ ಮತ್ತು ಬೆಂಗಳೂರು ಗ್ರಾಮಾಂತರದ ಮಾಜಿ ಸಂಸದ ಡಿಕೆ ಸುರೇಶ್ ಕೆಎಂಎಫ್ ಅಧ್ಯಕ್ಷ ಹುದ್ದೆಯನ್ನು ಬಯಸುತ್ತಿದ್ದರೆ, ಅವರ ಸೋದರ ಮಾವ ಮತ್ತು ಎಂಎಲ್ಸಿ ಎಸ್. ರವಿ ಅಪೆಕ್ಸ್ ಬ್ಯಾಂಕ್ ಮುಖ್ಯಸ್ಥ ಸ್ಥಾನಕ್ಕಾಗಿ ಹಾತೊರೆಯುತ್ತಿದ್ದಾರೆ.
ಹೊಸ ನೇಮಕಗಳು ಕಾಂಗ್ರೆಸ್ನಲ್ಲಿ, ವಿಶೇಷವಾಗಿ ಅಹಿಂದ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಏಕೆಂದರೆ ತುಳಿತಕ್ಕೊಳಗಾದ ಸಮುದಾಯಗಳಿಂದ ಬಂದ ಹೆಚ್ಚಿನ ಅಧಿಕಾರಿಗಳನ್ನು ತೆಗೆದುಹಾಕುತ್ತಿದ್ದು, ಅವರ ಬದಲಿಗೆ ಒಕ್ಕಲಿಗ ಸಮುದಾಯದವರನ್ನು ನೇಮಿಸಲಾಗುತ್ತಿದೆ.
ಈ ನಡೆಯ ಮೂಲಕ, ಒಕ್ಕಲಿಗ ಸಮುದಾಯದವರಾದ ಶಿವಕುಮಾರ್, ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ತಾವೇ ಪರ್ಯಾಯ ನಾಯಕಎಂಬುದನ್ನು ಸಮುದಾಯಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದೇ ಪ್ರವೃತ್ತಿ ಮುಂದುವರಿದರೆ ಪಕ್ಷದ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಹಿರಿಯ ಐಪಿಎಸ್ ಅಧಿಕಾರಿ ಆರ್. ಹಿತೇಂದ್ರ ಅವರನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.