ಬೆಂಗಳೂರು: ಪತಿಗಿಂತ ಹೆಚ್ಚು ಸಂಪಾದಿಸುವ ಪತ್ನಿಗೆ ಜೀವನಾಂಶ ನೀಡಬೇಕಾದ ಅಗತ್ಯ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ಮಹತ್ವದ ಆದೇಶ ನೀಡಿದೆ.
ವಿಚ್ಛೇದನ ಪ್ರಕರಣವೊಂದರಲ್ಲಿ ಪತ್ನಿ ತನಗಿಂತ ಹೆಚ್ಚಿನ ಸಂಬಳ ಪಡೆಯುತ್ತಿದ್ದರೂ ಆಕೆಗೆ ಜೀವನಾಂಶ ನೀಡುವಂತೆ ಆದೇಶಿಸಿದ ಕೆಳಹಂತಕದ ಕೋರ್ಟ್ ತೀರ್ಪು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪತ್ನಿ, ಪತಿಗಿಂತ ಹೆಚ್ಚು ಸಂಪಾದಿಸಿದಾಗ, ವಿಚಾರಣಾ ನ್ಯಾಯಾಲಯಗಳು ತಕ್ಷಣ ಜೀವನಾಂಶ ನೀಡುವಂತೆ ಆದೇಶಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪತಿ ಸಂಬಳವೇ ಪತ್ನಿಗಿಂತ ಕಡಿಮೆಯಿದ್ದಾಗ ಜೀವನಾಂಶಕ್ಕೆ ಬಾದ್ಯಸ್ಥಳಲ್ಲ ಎಂದು ನ್ಯಾಯಮೂರ್ತಿ ಡಾ.ಚಿಲ್ಲಕೂರ್ ಸುಮಲತಾರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದ್ದು, ಜೀವನಾಂಶ ನೀಡಲು ಸೂಚಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.
2024ರಲ್ಲಿ ವಿವಾಹವಾಗಿದ್ದ ದಂಪತಿ ಕೆಲ ತಿಂಗಳಲ್ಲೇ ಪ್ರತ್ಯೇಕವಾಗಿದ್ದು, ಪತಿಗೆ 60,646 ಸಂಬಳವಿದ್ದರೆ ಪತ್ನಿಗೆ ಮಾಸಿಕ 1 ಲಕ್ಷ ಸಂಬಳವಿತ್ತು. ಅಲ್ಲದೆ ಪತ್ನಿಗೆ ಮಕ್ಕಳು, ಇತರೆ ಬಾದ್ಯತೆಗಳಿಲ್ಲದಿರುವುದನ್ನು ಕೋರ್ಟ್ ಪರಿಗಣಿಸಿದ್ದು, ಪತಿ ಸಂಬಳವೇ ಪತ್ನಿಗಿಂತ ಕಡಿಮೆಯಿದ್ದಾಗ ಜೀವನಾಂಶಕ್ಕೆ ಬಾದ್ಯಸ್ಥಳಲ್ಲ ಎಂದು ಹೈಕೋರ್ಟ್ ಹೇಳಿದೆ.
ಅಲ್ಲದೇ ಪತ್ನಿಯನ್ನು ಪತಿಯೇ ಸಲಹಬೇಕು ಎಂಬ ಕಾರಣದ ಮೇರೆಗೆ ಜೀವನಾಂಶವನ್ನು ಮಂಜೂರು ಮಾಡುವ ಆದೇಶವನ್ನು ಹೊರಡಿಸಲು ನ್ಯಾಯಾಲಯಗಳು ಒಲವು ತೋರಬಾರದು ಎಂದು ಹೈಕೋರ್ಟ್ ಸಲಹೆ ನೀಡಿದೆ.
"ಪತ್ನಿ ಆರ್ಥಿಕವಾಗಿ ಸದೃಢಳಾಗಿದ್ದರೆ ಮತ್ತು ಹೆಂಡತಿಯ ಆದಾಯವು ಗಂಡನ ಆದಾಯಕ್ಕಿಂತ ಹೆಚ್ಚಿದ್ದರೆ ಹಾಗೂ ಮಕ್ಕಳನ್ನು ನೋಡಿಕೊಳ್ಳುವಂತಹ ಯಾವುದೇ ಇತರ ಹೊಣೆಗಾರಿಕೆಗಳು ಹೆಂಡತಿಗೆ ಇರದಿದ್ದರೆ, ನ್ಯಾಯಾಲಯಗಳು ಮಹಿಳೆಯರಿಗೆ ಜೀವನಾಂಶ ನೀಡಬೇಕು ಅಥವಾ ಹೆಂಡತಿಯನ್ನು ಅವಳ ಗಂಡನೇ ಸಾಕಬೇಕು ಎಂಬ ಆಧಾರದ ಮೇಲೆ ಜೀವನಾಂಶವನ್ನು ನೀಡುವ ಆದೇಶವನ್ನು ಹೊರಡಿಸಬಾರದು" ಎಂದು ಹೈಕೋರ್ಟ್ ಹೇಳಿದೆ.