ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಣಜಿ ಗ್ರಾಮದಲ್ಲಿ ಮದುವೆಯಾದ ಕೇವಲ ಎರಡೇ ತಿಂಗಳಿಗೆ ನವಾವಿವಾಹಿತೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಕಾರಣ ನಿಗೂಢವಾಗಿದೆ.
ಆತ್ಮಹತ್ಯೆಗೆ ಶರಣಾದ ಯುವತಿಯನ್ನು 24 ವರ್ಷದ ಸ್ವಾತಿ ಎಂದು ಗುರುತಿಸಲಾಗಿದ್ದು, ಎರಡು ತಿಂಗಳ ಹಿಂದಷ್ಟೇ ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಸ್ವರೂಪ್ ಅವರನ್ನು ಮದುವೆಯಾಗಿದ್ದಳು.
ಗರ್ಭಿಣಿಯಾಗಿದ್ದ ಸ್ವಾತಿಗೆ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡಿತ್ತು. 20 ದಿನಗಳ ಹಿಂದೆ ಹಣಜಿ ಗ್ರಾಮದ ತವರು ಮನೆಗೆ ಸ್ವಾತಿ ಬಂದಿದ್ದಳು.
ತಂದೆ ಹಾಗೂ ತಾಯಿ ಜಮೀನು ಕೆಲಸಕ್ಕೆ ಹೋದಾಗ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸ್ವಾತಿ, ಸೀರೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಇದನ್ನು ಗಮನಿಸಿದ ಅಕ್ಕಪಕ್ಕದವರು ಹೊಲದಲ್ಲಿದ್ದ ಮೃತರ ತಂದೆ ತಾಯಿಗೆ ವಿಷಯ ತಿಳಿಸಿ, ಮನೆಯ ಬಾಗಿಲು ಮುರಿದಿದ್ದಾರೆ. ಬಾಗಿಲು ಮುರಿದು ಸ್ವಾತಿಯನ್ನ ಸೀರೆ ಕುಣಿಕೆಯಿಂದ ಬಿಡಿಸಿ ಆಸ್ಪತ್ರೆಗೂ ರವಾನಿಸಿದ್ದಾರೆ. ಆದರೆ ಆಕೆಯನ್ನು ಉಳಿಸುವ ಪ್ರಯತ್ನ ವಿಫಲವಾಗಿದೆ.
ಸ್ಥಳಕ್ಕೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಟುಂಬದವರ ಮಾಹಿತಿಯಂತೆ ಆರೋಗ್ಯ ಸಮಸ್ಯೆಯಿಂದ ತುಂಬಾ ವಾಂತಿಯಾಗುತ್ತಿತ್ತು. ಸರಿಯಾಗಿ ಊಟ, ತಿಂಡಿ ಮಾಡುತ್ತಿರಲಿಲ್ಲ ಎನ್ನಲಾಗಿದೆ. ಸದ್ಯ ಇದೇ ಕಾರಣಕ್ಕೆ ಆಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.