ಡಿ.ಕೆ.ಶಿವಕುಮಾರ್ 
ರಾಜ್ಯ

PRC ಬಗ್ಗೆ ಆತಂಕ ಬೇಡ; ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು SIR ನೋಂದಣಿ ಕಡ್ಡಾಯ: ಸಿಎಂ ಡಿ.ಕೆ.ಶಿವಕುಮಾರ್

ಸ್ವಂತ ಮನೆ ಇಲ್ಲದ ಬಾಡಿಗೆದಾರರು ಸೇರಿದಂತೆ ಶಾಶ್ವತ ವಿಳಾಸವಿಲ್ಲದವರೂ ಆಧಾರ್, ಮತದಾರರ ಗುರುತಿನ ಚೀಟಿ ಅಥವಾ ಸರ್ಕಾರ ಸೂಚಿಸಿರುವ ಇತರ ದಾಖಲೆಗಳನ್ನು ಸಲ್ಲಿಸಿ ಸ್ಥಳೀಯ ಅಧಿಕಾರಿಗಳಿಂದ ಶಾಶ್ವತ ನಿವಾಸ ಪ್ರಮಾಣಪತ್ರ ಪಡೆಯಬಹುದು.

ಬೆಂಗಳೂರು: ರಾಜ್ಯದಲ್ಲಿ ಶಾಶ್ವತ ನಿವಾಸ ಪ್ರಮಾಣಪತ್ರ (PRC) ನೀಡುವ ಹೊಸ ಮಾರ್ಗಸೂಚಿಯನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರ, ಮತದಾರರ ವಿಶೇಷ ತೀವ್ರ ಪರಿಷ್ಕರಣೆ (Special Intensive Revision - SIR) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಹೆಸರು ಕಳೆದುಕೊಳ್ಳದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಇಂದಿನಿಂದ (ಜೂನ್ 30ರಿಂದ) ಆರಂಭವಾಗಲಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ಅರ್ಹ ನಾಗರಿಕರೂ ಕಡ್ಡಾಯವಾಗಿ ಎಣಿಕೆ (Enumeration) ಫಾರ್ಮ್ ಭರ್ತಿ ಮಾಡಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಾರ್ಮ್ ಸಲ್ಲಿಸದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಳ್ಳುವ ಸಾಧ್ಯತೆ ಇದೆ. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಅದಕ್ಕೂ ಮುನ್ನ ಎಲ್ಲರೂ ನೋಂದಣಿ ಪೂರ್ಣಗೊಳಿಸಬೇಕು ಎಂದು ಹೇಳಿದರು.

ಜೂನ್ 30ರಿಂದ ಜುಲೈ 29ರವರೆಗೆ ನಡೆಯುವ ಈ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ನೇಮಿಸಿರುವ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆಮನೆಗೆ ತೆರಳಿ ಫಾರ್ಮ್ ವಿತರಿಸಲಿದ್ದು, ಪ್ರತಿಯೊಬ್ಬ ಮತದಾರರು ಅದನ್ನು ಭರ್ತಿ ಮಾಡಿ ಹಿಂದಿರುಗಿಸಬೇಕು ಎಂದು ತಿಳಿಸಿದರು.

PRC ಪಡೆಯಲು ಮನೆ ಇರಬೇಕೆಂಬ ನಿಯಮ ಇಲ್ಲ

ಸ್ವಂತ ಮನೆ ಇಲ್ಲದ ಬಾಡಿಗೆದಾರರು ಸೇರಿದಂತೆ ಶಾಶ್ವತ ವಿಳಾಸವಿಲ್ಲದವರೂ ಆಧಾರ್, ಮತದಾರರ ಗುರುತಿನ ಚೀಟಿ ಅಥವಾ ಸರ್ಕಾರ ಸೂಚಿಸಿರುವ ಇತರ ದಾಖಲೆಗಳನ್ನು ಸಲ್ಲಿಸಿ ಸ್ಥಳೀಯ ಅಧಿಕಾರಿಗಳಿಂದ ಶಾಶ್ವತ ನಿವಾಸ ಪ್ರಮಾಣಪತ್ರ ಪಡೆಯಬಹುದು.

ಮತದಾರರು ತಮ್ಮ ಮೊಬೈಲ್ ಮೂಲಕವೂ ಆನ್‌ಲೈನ್‌ನಲ್ಲಿ ಫಾರ್ಮ್ ಸಲ್ಲಿಸಬಹುದು. ಪ್ರತಿ ಬಿಎಲ್‌ಒ ದಿನಕ್ಕೆ ಸುಮಾರು 50 ಫಾರ್ಮ್‌ಗಳನ್ನು ವಿತರಿಸುವ ಕಾರಣ ಈ ಕಾರ್ಯಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ನಾಗರಿಕರು ತಾವೇ ಫಾರ್ಮ್ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡುವ ಅವಕಾಶವೂ ಇದೆ ಎಂದು ತಿಳಿಸಿದರು.

49,320 ಸಹಾಯ ಕೇಂದ್ರಗಳ ಸ್ಥಾಪನೆ

ಶಾಶ್ವತ ನಿವಾಸ ಪ್ರಮಾಣಪತ್ರ ವಿತರಣೆಗೆ ಕಂದಾಯ ಇಲಾಖೆಯ ಡೆಪ್ಯುಟಿ ತಹಶೀಲ್ದಾರರಿಗೆ ಅಧಿಕಾರ ನೀಡಲಾಗಿದೆ. ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳಲ್ಲಿ ಒಟ್ಟು 49,320 ಸಹಾಯ ಕೇಂದ್ರಗಳನ್ನು ಆರಂಭಿಸಲಾಗುತ್ತದೆ.

ಸೇವಾ ಸಿಂಧು, ಅಟಲ್ ಜನಸ್ನೇಹಿ ಕೇಂದ್ರ (AJSK) ಸೇರಿದಂತೆ ವಿವಿಧ ಸೇವಾ ಪೋರ್ಟಲ್‌ಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಕಾಮನ್ ಸರ್ವಿಸ್ ಸೆಂಟರ್‌ಗಳಲ್ಲಿ (CSC) ಸಹ ಸೇವೆಗಳು ಮುಂದುವರಿಯಲಿವೆ.

11 ದಾಖಲೆಗಳ ಮೂಲಕ ಗುರುತು ದೃಢೀಕರಣ

ಮತದಾರರು ತಮ್ಮ EPIC (ಮತದಾರರ ಗುರುತಿನ ಚೀಟಿ) ಸಂಖ್ಯೆಯನ್ನು ಬಳಸಿ ಮಾಹಿತಿ ಸಲ್ಲಿಸಬಹುದು. ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಜಾತಿ ಪ್ರಮಾಣಪತ್ರ, ಅರಣ್ಯ ಹಕ್ಕು ಕಾಯ್ದೆಯ ದಾಖಲೆಗಳು, ಸರ್ಕಾರಿ ನಿವೇಶನ ಅಥವಾ ಮನೆ ಹಂಚಿಕೆ ದಾಖಲೆಗಳು, ಕೇಂದ್ರ ಸರ್ಕಾರದ ಪಿಂಚಣಿ ದಾಖಲೆಗಳು ಸೇರಿದಂತೆ 11 ವಿಧದ ದಾಖಲೆಗಳನ್ನು ಚುನಾವಣಾ ಆಯೋಗ ಮಾನ್ಯಗೊಳಿಸಿದೆ ಎಂದು ಸಿಎಂ ವಿವರಿಸಿದರು.

ಮತದಾನದ ಹಕ್ಕು ಕಳೆದುಕೊಳ್ಳದಂತೆ ಎಚ್ಚರಿಕೆ

ಪಶ್ಚಿಮ ಬಂಗಾಳದಲ್ಲಿ ಮತದಾರರ ಹೆಸರು ಕೈಬಿಟ್ಟಿರುವ ಘಟನೆಗಳ ಬಗ್ಗೆ ಆತಂಕ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಜಾಗೃತಿ ಅಭಿಯಾನ, ಸಹಾಯ ಕೇಂದ್ರಗಳು ಹಾಗೂ ಜಾಹೀರಾತುಗಳ ಮೂಲಕ ಪ್ರತಿಯೊಬ್ಬ ಅರ್ಹ ಮತದಾರರ ಹೆಸರನ್ನು ಉಳಿಸಿಕೊಳ್ಳಲು ಕ್ರಮ ಕೈಗೊಂಡಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತ-ಅಮೆರಿಕ ಬಾಂಧವ್ಯ ಮತ್ತಷ್ಟು ಗಟ್ಟಿ: ಪ್ರಧಾನಿ ಮೋದಿಗೆ ಮತ್ತೆ ಅಮೆರಿಕ ಆಹ್ವಾನ, ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿ..!

"ಭಾರತದ ಜಲ ಬಾಂಬ್‌ಗೆ ಪಾಕ್ ನಡುಕ": ನಮ್ಮ ಪಾಲಿನ ನೀರು ಮುಟ್ಟಿದರೆ ಆ ಕೈಗಳನ್ನೇ ಕತ್ತರಿಸುತ್ತೇವೆ- ಶತ್ರು ರಾಷ್ಟ್ರದಿಂದ ಮತ್ತೆ ಗೊಡ್ಡು ಬೆದರಿಕೆ..!

BJP vs BJP: ಮುತ್ತಪ್ಪ ರೈ ಕೈಕೆಳಗೆ ಲೂಟಿ ಹೊಡೆಯುತ್ತಿದ್ದ ವ್ಯಕ್ತಿಗೆ ದುಡ್ಡಿನ ಅಮಲು; ವಿಶ್ವನಾಥ್ ವಿರುದ್ಧ ಡಿವಿಎಸ್ ವಾಗ್ದಾಳಿ

ಡೀಸೆಲ್ ಖರೀದಿಗೆ ಇನ್ನು ಮಿತಿ ಇಲ್ಲ: ಜು.1ರಿಂದ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಮುಕ್ತ ಮಾರಾಟ..!

'ಇದು ಬಹಿರಂಗ ಆಕ್ರಮಣ, ಪ್ರಾದೇಶಿಕ ಸ್ಥಿರತೆಗೆ ಧಕ್ಕೆ': ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ವೈಮಾನಿಕ ದಾಳಿಗೆ ಭಾರತ ತೀವ್ರ ಖಂಡನೆ