ಬೆಂಗಳೂರು: ಬೆಂಗಳೂರಿನ ಮಂಜುನಾಥ ನಗರದಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದು, ಕನ್ನಡದ ಖ್ಯಾತ ನಟಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಮಂಜುನಾಥನಗರದಲ್ಲಿ ಪತ್ತೆಯಾಗಿದ್ದ ಮೋಹನ್ ರಾವ್ ಎಂಬುವವರ ಶವ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಓರ್ವ ನಟಿ ಸೇರಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಹೊಸ ಪ್ರಿಯಕರನ ಜೊತೆ ಸೇರಿ ಕಿರುತೆರೆ ನಟಿಯೇ ಮಾಜಿ ಪ್ರೇಮಿಯನ್ನ ಕೊಲೆಗೈದಿದ್ದಾಳೆ ಎನ್ನುವ ಆರೋಪ ಕೇಳಿಬಂದಿದೆ.
ಪ್ರಕರಣದ ಪೊಲೀಸ್ ತನಿಖೆ ವೇಳೆ ಸ್ಪೋಟಕ ವಿಚಾರಗಳು ಬಯಲಾಗಿದ್ದು, ಒಟ್ಟಿಗೆ ಪಾರ್ಟಿ ಮಾಡಿದ್ದ ನಟಿ ಮತ್ತು ಇತರರು ಕೊನೆಗೆ ಮೋಹನ್ ನ ಉಸಿರು ನಿಲ್ಲಿಸಿದ್ದಾರೆ. ಅಂದು ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದು ನಗ್ನನಾಗಿದ್ದ ಮೋಹನನ ಮುಖಕ್ಕೆ ಟೇಪ್ ಸುತ್ತಿ, ಚಾಕುವಿನಿಂದ ಚುಚ್ಚಿ ಭೀಕರ ಕೊಲೆಗೈದಿದ್ದಾರೆ ಎಂದು ವರದಿ ಆಗಿದೆ.
ಮಾಜಿ ಪ್ರಿಯಕರನಿಗೆ ಚಟ್ಟ ಕಟ್ಟಿದ ನಟಿ
ಸ್ಯಾಂಡಲ್ವುಡ್ ಸಹ ನಟಿ ಊರ್ಮಿಳಾ ಅಲಿಯಾಸ್ ಬಿಂದು ಮತ್ತು ಇತರೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೂಲಗಳ ಪ್ರಕಾರ ತನ್ನ ಲಿವ್ ಇನ್ ಸಂಗಾತಿಯಾಗಿದ್ದ ಮೋಹನ್ ರಾವ್ ಇರುವಾಗಲೇ ನಟಿ ಬಿಂದು ಬೇರೊಬ್ಬನನ್ನು ಮದುವೆಯಾಗಲು ಮುಂದಾಗಿದ್ದಳು. ಇದಕ್ಕೆ ಮೋಹನ್ ಅಡ್ಡಿ ಎಂದು ಭಾವಿಸಿದ್ದ ನಟಿ ತನ್ನ ಸ್ನೇಹಿತರೊಂದಿಗೆ ಸೇರಿ ಮೋಹನ್ ನನ್ನು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಫೆಬ್ರವರಿ 18 ರಂದು ಮೋಹನ್ ಕೊಲೆ ನಡೆದಿತ್ತು. ಪ್ರಕರಣ ಸಂಬಂಧ ಪೊಲೀಸರು ನಟಿ ಬಿಂದು ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಂದಹಾಗೆ ನಟಿ ಊರ್ಮಿಳಾ ಅಲಿಯಾಸ್ ಬಿಂದು ಕನ್ನಡದ ಭಜರಂಗಿ, ಪೊಲೀಸ್ ಕ್ವಾರ್ಟರ್ಸ್ ಮತ್ತು ಕಾಲಭೈರವ ಮುಂತಾದ ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ ಎಂದು ವರದಿಯಾಗಿದೆ.
ಮದುವೆ ಯೋಜನೆ ಕೊಲೆಗೆ ಕಾರಣ
ಪೊಲೀಸರ ಪ್ರಕಾರ, ಬಿಂದು ಮತ್ತು ಆಕೆಯ ಹೊಸ ಲವರ್ ವಿನಯ್ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಬಿಂದು ಜೊತೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದ ಮೋಹನ್ ರಾವ್ ಇದಕ್ಕೆ ಅಡ್ಡಿಯಾಗಬಹುದು ಎಂದು ಆತನನ್ನು ಕೊಲ್ಲಲು ಇಬ್ಬರೂ ಯೋಜನೆ ರೂಪಿಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಯೋಜನೆಯ ಭಾಗವಾಗಿ, ಬಿಂದು ಮತ್ತು ಮೋಹನ್ ಒಟ್ಟಿಗೆ ವಾಸಿಸುತ್ತಿದ್ದ ಮನೆಯಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿ ಸಮಯದಲ್ಲಿ ಮೋಹನ್ ಗೆ ಕಂಠಪೂರ್ತಿ ಮದ್ಯ ಕುಡಿಸಲಾಗಿತ್ತು. ಬಳಿಕ ಮೋಹನ್ ಮೇಲೆ ಹಲ್ಲೆ ನಡೆಸಿ ಆತನ ಬಾಯಿಗೆ ಟೇಪ್ ಹಾಕಿ ಮನೆಯೊಳಗೆ ಕೊಲೆ ಮಾಡಲಾಗಿದೆ.
ವಿನಯ್, ತನ್ನ ಸ್ನೇಹಿತ ಧನುಷ್ ಸಹಾಯದಿಂದ, ಮೋಹನ್ ಕೊಲೆ ಮಾಡಿದ್ದಾನೆ. ಮೋಹನ್ ಗೆ ಪದೇ ಪದೇ ಚಾಕು ಇರಿಯಲಾಗಿದೆ. ಅವನು ಕಿರುಚುತ್ತಿದ್ದಂತೆ, ಆರೋಪಿ ಬಾಯಿ ಮತ್ತು ಮೂಗಿಗೆ ಟೇಪ್ ಸುತ್ತಿ ಕೈಕಾಲುಗಳನ್ನು ಕಟ್ಟಿದ್ದಾರೆ. ಮೋಹನ್ ಉಸಿರುಗಟ್ಟುವಿಕೆ ಮತ್ತು ಗಾಯಗಳಿಂದಾಗಿ ಸಾವನ್ನಪ್ಪಿದ್ದಾನೆ. ಕೊಲೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
12 ದಿನಗಳ ನಂತರ ಕೃತ್ಯ ಬೆಳಕಿಗೆ
ಇನ್ನು ಈ ಘಟನೆಯಾಗಿ ಬರೊಬ್ಬರಿ 12 ದಿನಗಳ ಬಳಿಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮೋಹನ್ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮನೆ ಬಾಗಿಲು ತೆರೆದು ಒಳಗೆ ಹೋದಾಗ ಕೊಲೆ ಪ್ರಕರಣ ಬಯಲಾಗಿದೆ. ಬಳಿಕ ತನಿಖೆ ನಡೆಸಿದ ಪೊಲೀಸರಿಗೆ ಪಾರ್ಟಿ ನಡೆದ ಕುರಿತು ಮಾಹಿತಿ ಲಭ್ಯವಾಗಿದ್ದು, ಪಾರ್ಟಿಯಲ್ಲಿದ್ದವರನೃ ಕುರಿತು ಮಾಹಿತಿ ಕಲೆಹಾಕಿದಾಗ ನಟಿ ಮತ್ತು ಆಕೆಯ ಲವರ್ ಕೃತ್ಯ ಬಯಲಾಗಿದೆ. ಕೂಡಲೇ ಪೊಲೀಸರು ನಟಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.