ಬೆಂಗಳೂರು: ಇರಾನ್ ದೇಶದ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿಲ್ಲ ಏಕೆ? ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನೆಹರು ಮಾಡಿದ ವಿದೇಶಾಂಗ ನೀತಿಯಲ್ಲಿ ಭಾರತ ತಟಸ್ಥ ನಿಲುವು ಅನುಸರಿಸುತ್ತಾ ಬಂದಿದೆ. ಅಲಿಪ್ತ ರಾಷ್ಟ್ರಗಳ ಕೂಟ ಪ್ರಾರಂಭ ಮಾಡಲಾಗಿತ್ತು. ಇದೀಗ ಅಮೆರಿಕಾ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿ ಖಮೇನಿಯನ್ನು ಮೋಸದಿಂದ ಹತ್ಯೆ ಮಾಡಲಾಗಿದೆ. ಮಾತುಕತೆಯ ಸಂದರ್ಭದಲ್ಲಿ ಈ ಹತ್ಯೆ ನಡೆದಿದೆ. ಈ ಮೂಲಕ ವಿಶ್ವಸಂಸ್ಥೆಯ ನೀತಿಗಳನ್ನು ನಾಶಮಾಡುವ ಕೆಲಸ ಮಾಡಲಾಗಿದೆ ಎಂದು ಆರೋಪಿಸಿದರು.
ಇದು ವಿಶ್ವಸಂಸ್ಥೆಯ ಚಾರ್ಟರ್ನ ಸಂಪೂರ್ಣ ಉಲ್ಲಂಘನೆಯಾಗಿದ್ದು, ಒಂದು ರಾಷ್ಟ್ರದ ಸಾರ್ವಭೌಮತೆ ಮತ್ತು ಸ್ವಾತಂತ್ರ್ಯವನ್ನು ನಾಶಪಡಿಸುವ ಕೆಲಸವನ್ನು ಯುಎಸ್ಎ ಮತ್ತು ಇಸ್ರೇಲ್ ಮಾಡಿವೆ ಎಂದು ಅವರು ಹೇಳಿದ್ದಾರೆ.
ಖಮೇನಿ ಹತ್ಯೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿಲ್ಲ. ಇದು ಭಾರತದ ರಾಜತಾಂತ್ರಿಕ ವ್ಯವಸ್ಥೆ ದಿವಾಳಿಯಾಗಿದೆ ಎಂಬುವುದನ್ನು ತೋರಿಸುತ್ತಿದೆ. ಸಕ್ರಿಯವಾದ ನೀತಿ ಅಲಿಪ್ತ ಕೂಟದಲ್ಲಿ ಇತ್ತು. ಅದಕ್ಕೆ ತಿಲಾಂಜಲಿಯನ್ನು ನಮ್ಮ ವಿಶ್ವಗುರು ಮಾಡಿದ್ದಾರೆ. ಮೋದಿ ಅವರನ್ನು ಅಮೆರಿಕ, ಇಸ್ರೇಲ್ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪ ಮಾಡಿದರು.
ಇರಾನ್ ಭಾರತದ ಮಿತ್ರ ರಾಷ್ಟವಾಗಿತ್ತು. ಈ ಹಿಂದೆ ಕಾಶ್ಮೀರದ ವಿಚಾರವಾಗಿ ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ ಎಂದು ಇಸ್ಲಾಮಿಕ್ ದೇಶಗಳು ಭಾರತದ ವಿರುದ್ಧ ನಿರ್ಣಯ ಮಾಡಿದ್ದವು . ಅದರೆ ಇರಾನ್ ಭಾರತ ದೇಶಕ್ಕೆ ಬೆಂಬಲ ನೀಡಿತ್ತು. ವಾಜಪೇಯಿ ಸರ್ಕಾರದ ಅವಧಿಯಲ್ಲಿ ಭಾರತ ಇರಾನ್ ಗೆ ಬೆಂಬಲ ನೀಡಿತ್ತು ಎಂದು ವಿವರಿಸಿದರು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೊಡ್ಡ ಕೊಲೆಗಡುಕ ಅಮೆರಿಕಾ ಇಸ್ರೇಲ್ ಯಾವ ಸಂದರ್ಭದಲ್ಲಿ ಏನು ಮಾಡಬಹುದು ಗೊತ್ತಾಗುತ್ತಿಲ್ಲ. ಮುಂದೆ ಅವರು ಯಾವ ಸರ್ಕಾರವನ್ನು ಬುಡಮೇಲು ಮಾಡಬಹುದು. ನೆತನ್ಯಾಹು ದೊಡ್ಡ ಕೊಲೆಗಡುಕ ಎಂದು ಬಿಕೆ ಹರಿಪ್ರಸಾದ್ ಕಿಡಿಕಾರಿದರು.
ಇಸ್ರೇಲ್ ಭೇಟಿ ನೀಡಿದ್ದ ಕಾರಣ ಏನು ಎಂಬುದನ್ನು ಪ್ರಧಾನಿ ಮೋದಿ ಹೇಳಬೇಕಾಗುತ್ತದೆ. ಪ್ರಧಾನಿ ಮೋದಿ ಅವರಿಗೆ ಮಣಿಪುರದಲ್ಲಿ ನಡೆದದ್ದೂ ಗಮನಕ್ಕೆ ಬಂದಿಲ್ಲ. ಇವರನ್ನು ನೋಡಿದರೆ ಇವರ ವಿದೇಶಾಂಗ ನೀತಿ ಎಫ್ಟಿನ್ ಫೈಲ್ ನಲ್ಲಿ ಸಿಕ್ಕಿ ಹಾಕಿಕೊಂಡಿದೆ ಎಂದು ಆರೋಪಿಸಿದರು.