ಬೆಂಗಳೂರು: ಪಶ್ಚಿಮ ಏಷ್ಯಾದ ಕೆಲವು ಭಾಗಗಳಲ್ಲಿ ವಾಯುಮಾರ್ಗ ಬಂದ್ ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ದುಬೈಗೆ ಹೊರಟ ಎಮಿರೇಟ್ಸ್ (EK 569) ವಿಮಾನವು ಕೆಲವೇ ಹೊತ್ತಿನಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕ ವಾಪಸ್ಸಾಗಿದೆ.
ಸೋಮವಾರ ಬೆಳಗ್ಗೆ 4.30ಕ್ಕೆ 56 ಪ್ರಯಾಣಿಕರೊಂದಿಗೆ ವಿಮಾನ ಹಾರಾಟ ಆರಂಭಿಸಿತ್ತು. ಆದರೆ, ವಾಯುಮಾರ್ಗ ನಿರ್ಬಂಧಗಳ ಹಿನ್ನೆಲೆ ಬಳಿಕ ಆ ಸೇವೆಯನ್ನು ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಪ್ರಕಟಣೆ ನೀಡಿದ್ದು, ದುಬೈ–ಬೆಂಗಳೂರು ಮಾರ್ಗದಲ್ಲಿ ಎಮಿರೇಟ್ಸ್ A388 ವಿಮಾನವನ್ನು ನಿಯಮಗಳಿಗೆ ಅನುಸಾರವಾಗಿ ಮತ್ತು ಅರ್ಹ ಪ್ರಯಾಣಿಕರಿಗೆ ಮಾತ್ರ ಸಂಚರಿಸಲು ಅನುಮತಿ ನೀಡಲಾಗಿತ್ತು. ದುಬೈಯಿಂದ ಬಂದ ವಿಮಾನವು ನಿಯೋಜಿತ ವೇಳೆಗೆ ಬೆಂಗಳೂರಿಗೆ ತಲುಪಿದರೂ, ವಾಯುಮಾರ್ಗ ಬಂದ್ ಕಾರಣದಿಂದ ಹಿಂತಿರುಗುವ ಸೇವೆಯನ್ನು ರದ್ದುಪಡಿಸಬೇಕಾಯಿತು ಎಂದು ಹೇಳಿದೆ.
ಫೆಬ್ರವರಿ 28ರಿಂದ ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆ ಬೆಂಗಳೂರು–ಪಶ್ಚಿಮ ಏಷ್ಯಾ ನಡುವಿನ ವಿಮಾನ ಹಾರಾಟಗಳು ಸ್ಥಗಿತಗೊಂಡಿದ್ದವು. ಮಾರ್ಚ್ 2ರಂದು Etihad Airways ಸಂಸ್ಥೆಯ Abu Dhabiನಿಂದ ಬಂದ ವಿಮಾನ ಕೆಐಎಗೆ ಬಂದಿಳಿದ ನಂತರ ಭಾಗಶಃ ಹಾರಾಟಗಳು ಪುನರಾರಂಭಗೊಂಡಿದ್ದವು.
ಪ್ರಸ್ತುತ ಪರಿಸ್ಥಿತಿಯನ್ನು ಅಧಿಕಾರಿಗಳು ಗಮನಿಸುತ್ತಿದ್ದು, ಮುಂದಿನ ವೇಳಾಪಟ್ಟಿಗೆ ಸಂಬಂಧಿಸಿದಂತೆ ಪ್ರಯಾಣಿಕರು ಅಧಿಕೃತ ಪ್ರಕಟಣೆಗಾಗಿ ಕಾಯುತ್ತಿದ್ದಾರೆ