ಕೊಪ್ಪಳ: ಕಾರ್ಖಾನೆಗಳ ಕಪ್ಪುಕಣಗಳ ದೂಳಿನ ಮಾಲಿನ್ಯದಿಂದ ಬದುಕು ರೋಸಿ ಹೋಗಿದೆ. ಜನಜೀವನ, ಜಲ ಹಾಗೂ ಕೃಷಿಭೂಮಿ ಹಾಳಾಗಿದೆ. ನಮ್ಮ ಗ್ರಾಮದ ಸಮೀಪದಲ್ಲಿರುವ ಕಾರ್ಖಾನೆಗಳನ್ನು ಬಂದ್ ಮಾಡಿಸಿ ಇಲ್ಲವೇ ನಮಗೆ ದಯಾ ಮರಣ ನೀಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಹಿರೇಬಗನಾಳದಲ್ಲಿ ಗುರುವಾರ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಸ್ಥರು ಮಾಡಿದ ಆಗ್ರಹವಿದು. ಸುತ್ತಮುತ್ತಲಿನ ಕೈಗಾರಿಕಾ ಘಟಕಗಳಿಂದ ಬರುವ ಮಾಲಿನ್ಯವು ಅವರನ್ನು ದೀರ್ಘಕಾಲದ ಉಸಿರಾಟದ ರೋಗಿಗಳನ್ನಾಗಿ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ಇಲ್ಲಿನ ಬಹುತೇಕ ಎಲ್ಲಾ ಮನೆಗಳು ನೆಬ್ಯುಲೈಸರ್ಗಳನ್ನು ಬಳಸುತ್ತಿವೆ. ಇತ್ತೀಚೆಗೆ ಕೊಪ್ಪಳದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಮತ್ತು ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದರು. ಗ್ರಾಮಸ್ಥರು ವಾಸಿಸಲು ಯೋಗ್ಯವಲ್ಲದ ಪರಿಸ್ಥಿತಿ ಇರುವುದರಿಂದ ದಯಾ ಮರಣಕ್ಕಾಗಿ ಮನವಿ ಮಾಡಿದರು.
ಅವರಲ್ಲಿ ಕೆಲವರು ಶಾಸಕರು ಮತ್ತು ಜಿಲ್ಲಾಧಿಕಾರಿಗೆ ತಮ್ಮ ಮನೆ ಗೋಡೆಗಳು, ಸಸ್ಯಗಳು ಮತ್ತು ಇತರ ಪ್ರದೇಶಗಳನ್ನು ಕಪ್ಪು ಬೂದಿ ಹೇಗೆ ಆವರಿಸುತ್ತದೆ ಎಂಬುದನ್ನು ತೋರಿಸಿದರು. ಪರಿಸರ ಅಧಿಕಾರಿಗಳಿಗೆ ಹಲವಾರು ಮನವಿಗಳನ್ನು ಸಲ್ಲಿಸಿದರೂ ಮಾಲಿನ್ಯಕಾರಕ ಕೈಗಾರಿಕೆಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದ ಪ್ರತಿಯೊಬ್ಬರು ಒಂದಲ್ಲ ಒಂದು ಕಾಯಿಲೆಯಿಂದ ಬಳಲುತ್ತಿರುವುದರಿಂದ ನಮಗೆ ದಯಾ ಮರಣವನ್ನು ನೀಡುವಂತೆ ನಾವು ನಿಮ್ಮನ್ನು ವಿನಂತಿಸುತ್ತೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೇವಲ ಹಿರೇಬಗನಾಳ ಗ್ರಾಮದಲ್ಲಿ ಮಾತ್ರ ಈ ದುಸ್ಥಿತಿಯಿಲ್ಲ, ಕೊಪ್ಪಳದ ಸುತ್ತಮುತ್ತಲಿನ ಹಳ್ಳಿಗಳು ಸಹ ಮಾಲಿನ್ಯವನ್ನು ಎದುರಿಸುತ್ತಿವೆ. ಕಳೆದ ವರ್ಷ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಕಳೆದ ವರ್ಷದಿಂದ ಹಲವಾರು ಜನರು ಈ ಗ್ರಾಮಗಳನ್ನು ತೊರೆದಿದ್ದಾರೆ. ಪರಿಸರ ಇಲಾಖೆ ಎರಡು ಕೈಗಾರಿಕೆಗಳಿಗೆ ನೀಡಿರುವ ನೋಟಿಸ್ಗಳ ಜೊತೆಗೆ, ಐದು ಕೈಗಾರಿಕೆಗಳನ್ನು ಮುಚ್ಚಲು ಆಡಳಿತವು ನೋಟಿಸ್ ನೀಡಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.